ಮಂಗಳೂರು: ಬೇಸಿಗೆ ಬಂತೆಂದರೆ ಸಾಕು. ಎಲ್ಲಾ ಕಡೆಗಳಲ್ಲಿಯೂ ನೀರಿನ ಸಮಸ್ಯೆ ಸರ್ವೇ ಸಾಮಾನ್ಯ. ಕುಡಿಯುವ ನೀರಿಗೂ ತತ್ವಾರ ಅನುಭವಿಸಬೇಕಾದ ಸ್ಥಿತಿಯು ಕಂಡು ಬರುತ್ತದೆ. ಇನ್ನು ಲಭ್ಯವಿರುವ ನೀರು ಕುಡಿಯುವುದಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಯೋಗ್ಯವಿರುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮವನ್ನು ಕೈಗೊಂಡಿದೆ. ಗ್ರಾಮ ಪಂಚಾಯತ್ ಗಳು ಕುಡಿಯುವ ನೀರನ್ನು ಕಡ್ಡಾಯ ಪರೀಕ್ಷೆ ನಡೆಸುವಂತೆ ಸೂಚಿಸಿದ್ದು, ಅದಕ್ಕಾಗಿ ಫೀಲ್ಡ್ ಟೆಸ್ಟ್ ಕಿಟ್ಗಳ ಪೂರೈಕೆಯನ್ನೂ ಆರಂಭಿಸಿದೆ.
ನೀರಿನಲ್ಲಿರಬಹುದಾದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಷಕಾರಿ ರಾಸಾಯನಿಕಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಕಲುಷಿತ, ವಿಷಕಾರಿ ನೀರು ಸೇವಿಸಿ ಜನರು ಆರೋಗ್ಯ ಕೆಡಿಸಿಕೊಳ್ಳುವ ಮತ್ತು ಜೀವಕ್ಕೆ ಕುತ್ತು ತಂದುಕೊಳ್ಳುವುದರಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಈ ಕ್ರಮವನ್ನು ಅಳವಡಿಸಿರುವುದಾಗಿಯೂ ರಾಜ್ಯ ಸರ್ಕಾರ ತಿಳಿಸಿದೆ.
ಕೆಲ ವರ್ಷಗಳ ಹಿಂದೆಯೇ ಈ ಕ್ರಮವನ್ನು ಜಾರಿಗೊಳಿಸುವಂತೆ ಪಂಚಾಯತ್ ಗಳಿಗೆ ಕಿಟ್ ಒದಗಿಸಿದ್ದರೂ, ಇದನ್ನು ಸಮರ್ಥವಾಗಿ ಜಾರಿಗೊಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈ ಬೇಸಿಗೆಯಿಂದ ಈ ಕ್ರಮವನ್ನು ಕಡ್ಡಾಯವಾಗಿ ಅನುಸರಿಸುವಂತೆ ಸರ್ಕಾರ ಪಂಚಾಯತ್ ಗಳಿಗೆ ಕಡ್ಡಾಯ ಆದೇಶವನ್ನು ಹೊರಡಿಸಿದೆ.
ನೀರಿನ ಗುಣಮಟ್ಟ, ವಿಷಕಾರಿ ಅಂಶಗಳಿವೆಯೇ, ಕಬ್ಬಿಣಾಂಶ ಎಷ್ಟು ಪ್ರಮಾಣದಲ್ಲಿದೆ, ಜೀವಕ್ಕೆ ಮಾರಕವಾಗಿ ಪರಿಣಮಿಸುವ ಯಾವುದಾದರೂ ಅಂಶಗಳಿವೆಯೇ ಎಂಬುದನ್ನು ಈ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದು. ಒಟ್ಟಾರೆಯಾಗಿ ಜನರಿಗೆ ಪರಿಶುದ್ಧ ಗುಣಮಟ್ಟದ ಕುಡಿಯುವ ನೀರು ಪೂರೈಸುವಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದೇ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.