ರಾಣಿಬೆನ್ನೂರು: ಹೋಳಿ ಹಬ್ಬದ ವಿಶಿಷ್ಠ ಆಚರಣೆಯೊಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಹಲವು ದಶಕಗಳಿಂದ ಜನರ ಗಮನ ಸೆಳೆಯುತ್ತಿದೆ.
ಹೋಳಿ ಹಬ್ಬದ ನಿಮಿತ್ತ ಇಲ್ಲಿಯ ರಾಮಲಿಂಗೇಶ್ವರ ದೇವಾಲಯದ ಅವರಣದಲ್ಲಿ ಪ್ರತಿಷ್ಠಾಪಿಸಲಾಗುವ ರತಿ-ಕಾಮಣ್ಣ ಮೂರ್ತಿಗಳ ಜೊತೆಯಲ್ಲಿಯೇ ಇಬ್ಬರು ಪುರುಷರು ರತಿ ಕಾಮಣ್ಣನ ವೇಷದಲ್ಲಿ ಕುಳಿತುಕೊಳ್ಳುತ್ತಾರೆ. ಅವರನ್ನು ನಗಿಸಲು ಇಡೀ ಊರೇ ಪ್ರಯತ್ನ ಮಾಡುತ್ತದೆ. ಆದರೂ ಅವರು ನಗುವುದೇ ಇಲ್ಲ. ಒಂದು ವೇಳೆ ಯಾರಾದರೂ ಅವರನ್ನು ನಗಿಸಲು ಯಶಸ್ವಿಯಾದಲ್ಲಿ ಅವರಿಗೆ 2 ಲಕ್ಷ ರೂ ‘ನಗದು’ ಬಹುಮಾನ.
ಕಳೆದ ಆರು ದಶಕಗಳ ಈ ಆಚರಣೆಯಲ್ಲಿ ಈವರೆಗೆ ಯಾರಿಗೂ ಕೂಡ ಬಹುಮಾನ ದೊರಕಿಲ್ಲಾ, ಹಾಗೂ ಬಹುಮಾನ ಹಣ ಆಯೋಜಕರ ಬಳಿಯೇ ಉಳಿದಿದೆ.
ಕಳೆದ ಎರಡು ದಶಕಗಳಿಂದ ಹೋಳಿ ಹಬ್ಬದ ಮುನ್ನ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಈ ವೇಷ ತೊಟ್ಟು ಕುಳಿತುಕೊಳ್ಳುವ ಗದಗೇಶ ರೊದ್ದಣ್ಣವರ (ಕಾಮಣ್ಣ) ಹಾಗೂ ಕುಮಾರ ಹಡಪದ್ (ರತಿ) ಈವರೆಗೂ ಯಾರ ವೈಯಾರಕ್ಕೂ, ಕುಹಕಕ್ಕೂ, ಹಾಸ್ಯಕ್ಕೂ, ಬೈಗಳಕ್ಕೂ ಜಗ್ಗದೇ ಬಗ್ಗದೇ ಶಾಂತ ಚಿತ್ತರಾಗಿ ಕುಳಿತುಕೊಂಡಿರುತ್ತಾರೆ. ಅವರನ್ನು ನಗಿಸಲು ನಡೆಯುವ ಎಲ್ಲ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ.
ಈಗಾಗಲೇ ರಾಜ್ಯಾದ್ಯಂತ ರಾಣಿಬೆನ್ನೂರಿನ ಈ ಜೀವಂತ ರತಿ-ಕಾಮಣ್ಣನ ಆಚರಣೆ ಪ್ರಸಿದ್ಧಿಗೊಂಡಿದ್ದು, ಪರ ಊರುಗಳಿಂದ ಸಹ ಅನೇಕರು ಇದನ್ನು ನೋಡಲು, ಅವರನ್ನು ನಗಿಸಲು ಪ್ರಯತ್ನ ಮಾಡಲು ಆಗಮಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.