ಕುಂದಾಪುರ: ಪಾಕಿಸ್ಥಾನದ ಪರ ಘೋಷಣೆ ಕೂಗಿ, ದೇಶದ್ರೋಹದ ಆರೋಪವನ್ನು ಹೊತ್ತು ಅಮೂಲ್ಯಾ ಮತ್ತು ಆದ್ರಾ ಪರಪ್ಪನ ಅಗ್ರಹಾರ ಸೇರಿರುವ ಬೆನ್ನಲ್ಲೇ, ಕುಂದಾಪುರದ ಮಿನಿ ವಿಧಾನ ಸೌಧದಲ್ಲಿಯೂ ವ್ಯಕ್ತಿಯೊಬ್ಬ ಪಾಕ್ ಪರ ಘೋಷಣೆ ಕೂಗಿ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿಯನ್ನು ಕೋಡಿ ನಿವಾಸಿ ರಾಘವೇಂದ್ರ ಗಾಣಿಗ ಎಂದು ಗುರುತಿಸಲಾಗಿದೆ. ಹತ್ತು ಗಂಟೆಯ ಸುಮಾರಿಗೆ ಏಕಾಏಕಿ ಮಿನಿ ವಿಧಾನ ಸೌಧ ಪ್ರವೇಶಿಸಿದ ಆರೋಪಿ ಪಾಕ್ ಪರ ಘೋಷಣೆ ಕೂಗುವುದಕ್ಕೆ ಆರಂಭಿಸಿದ್ದಾನೆ. ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಹಶೀಲ್ದಾರ್ ಅವರೇ ಖುದ್ದು ಲಿಖಿತ ದೂರನ್ನೂ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ಅಲ್ಲಿದ್ದವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದೆ.
ಆರೋಪಿ ರಾಘವೇಂದ್ರ ಗಾಣಿಗ ಮಾನಸಿಕ ಅಸ್ವಸ್ಥನಾಗಿದ್ದು, ಅಮೂಲ್ಯ ಮತ್ತು ಆದ್ರಾ ಪ್ರಕರಣವನ್ನು ಟಿವಿಯಲ್ಲಿ ವೀಕ್ಷಿಸಿದ್ದಾನೆ. ಅದರಿಂದ ಪ್ರೇರಿತನಾಗಿ ಈ ರೀತಿಯ ಕೃತ್ಯವೆಸಗಿರುವುದಾಗಿ ತಿಳಿದು ಬಂದಿದೆ. ಸಮೀಪದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ತನ್ನ ತಾಯಿಯ ಜೊತೆ ಬಂದಿದ್ದ ಈತ, ಅವರಿಂದ ತಪ್ಪಿಸಿಕೊಂಡು ಬಂದು ಇಲ್ಲಿ ಅವಾಂತರ ಸೃಷ್ಟಿಸಿರುವುದಾಗಿ ತಿಳಿದು ಬಂದಿದೆ. ಆರೋಪಿ ವಿವಾಹಿತನಾಗಿದ್ದು, ಓರ್ವ ಮಗಳಿದ್ದಾಳೆ. ಅವರಿಂದ ದೂರವಾಗಿ ಈತ ತನ್ನ ಹೆತ್ತವರ ಜೊತೆಯೇ ವಾಸ ಮಾಡುತ್ತಿದ್ದ.
ಹಿಂದಿ ಶಿಕ್ಷಕನಾಗಿದ್ದ ಈತ ಕೆಲ ವರ್ಷಗಳ ಹಿಂದೆ ಉದ್ಯೋಗವನ್ನೂ ತೊರೆದಿದ್ದಾಗಿ ಮಾಹಿತಿ ಇದೆ. ಇವನಿಗೆ ಮಾನಸಿಕ ಖಾಯಿಲೆಗೆ ಚಿಕಿತ್ಸೆಯೂ ನಡೆಯುತ್ತಿತ್ತು.
ಸದ್ಯ ಪೊಲೀಸರು ಈತನ ಮಾನಸಿಕ ಸ್ಥಿತಿಯ ವರದಿಗಾಗಿ ಕಾಯುತ್ತಿದ್ದು, ಬಂದ ಮೇಲೆ ಇತರ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.