ಬೆಂಗಳೂರು: ಆರ್ಎಸ್ಎಸ್ನ 3 ದಿನಗಳ ವಾರ್ಷಿಕ ಸಭೆ ‘ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್)’ ಮಾರ್ಚ್ 15 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಮಾರ್ಚ್ 17 ರಂದು ಮುಕ್ತಾಯಗೊಳ್ಳಲಿದೆ. ಇದು ಕರ್ನಾಟಕದಲ್ಲಿ ನಡೆಯುತ್ತಿರುವ 7 ನೇ ಎಬಿಪಿಎಸ್ ಸಭೆ ಮತ್ತು ಜನಸೇವಾ ವಿದ್ಯಾ ಕೇಂದ್ರ, ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ 5ನೇ ಸಭೆ.
ಎಬಿಪಿಎಸ್ ಆರ್ಎಸ್ಎಸ್ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಭೆಯಾಗಿದ್ದು, ಇದು ದೇಶದ ವಿವಿಧ ನಗರಗಳಲ್ಲಿ ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. ಸಭೆಯಲ್ಲಿ ಆರ್ಎಸ್ಎಸ್ ಕಾರ್ಯಸೂಚಿಗಳನ್ನು ಚರ್ಚಿಸಲಾಗುತ್ತದೆ ಮತ್ತು ಶಾಖೆಗಳನ್ನು ಸುಧಾರಿಸುವ, ತರಬೇತಿ ಶಿಬಿರಗಳನ್ನು ಹೆಚ್ಚಿಸುವ, ನವೀನ ಅಭ್ಯಾಸಗಳನ್ನು ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳ ಅನುಭವಗಳನ್ನು ಹಂಚಿಕೊಳ್ಳುವ, ಸಾಂಸ್ಥಿಕ ಕಾರ್ಯಗಳ ವಿಸ್ತರಣೆ ಮತ್ತು ಬಲವರ್ಧನೆಗಾಗಿ ಯೋಜನೆಯನ್ನು ಕೈಗೊಳ್ಳುವ ಕಾರ್ಯಗಳು ಸಭೆಯಲ್ಲಿ ನಡೆಯುತ್ತವೆ.
3 ದಿನಗಳ ಸಭೆಯಲ್ಲಿ, ದೇಶಾದ್ಯಂತದ 1400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ರಮುಖ ವಿಷಯಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಲಿದ್ದಾರೆ. ವಿವಿಧ ಸಂಘಟನೆಗಳ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮತ್ತು ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರು ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ತಮ್ಮ ಅನುಭವಗಳನ್ನು ಮತ್ತು ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಮಹಿಳಾ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಭೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ಸರಕಾರ್ಯವಾಹ ಸುರೇಶ್ ಜೋಶಿ ಅವರು ನಡೆಸಿಕೊಡಲಿದ್ದಾರೆ.
ಸಭೆಯ ನಿರ್ಧಾರ ಮತ್ತು ಅಂಗೀಕರಿಸಿದ ನಿರ್ಣಯಗಳನ್ನು ಸಭೆಯ ಸಮಯದಲ್ಲಿ ಮಾಧ್ಯಮಗಳೊಂದಿಗೆ ಪ್ರಮುಖರು ಹಂಚಿಕೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.