ಮಂಗಳೂರು: “ವರ್ಷಗಳು ಕಳೆದಂತೆ ನಾವು ಕಾಯಿಲೆಗಳು, ಖಿನ್ನತೆ ಮತ್ತು ಅಶಾಂತಿಯನ್ನು ಸಹಜವೆಂದು ಸ್ವೀಕರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ಭಾವನಾತ್ಮಕ ಸ್ವಾತಂತ್ರ್ಯವನ್ನು ಸಾಧಿಸುವ ಮೂಲಕ ಜನರು ನಕಾರಾತ್ಮಕ ಅಂಶಗಳನ್ನು ಆರೋಗ್ಯ, ಸಂತೋಷ ಮತ್ತು ಸಾಮರಸ್ಯಕ್ಕೆ ಬದಲಾಯಿಸಿಕೊಳ್ಳಬೇಕು” ಎಂದು ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿ ಬ್ರಹ್ಮ ಕುಮಾರಿ ಶಿವಾನಿ ಹೇಳಿದರು.
ನಗರದ ಕೋಡಿಯಾಲ್ಬೈಲ್ನ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಭಾನುವಾರ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಮಂಗಳೂರು ಆಯೋಜಿಸಿದ್ದ ‘ಆ್ಯನ್ ಅವೇಕನಿಂಗ್ ಎಕ್ಸ್ಪೀರಿಯನ್ಸ್ ವಿದ್ ಬಿ.ಕೆ ಶಿವಾನಿ’ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು.
ಅಡೆತಡೆಗಳಿಗೆ ವಿಚಲಿತರಾಗದೆ ಇರುವಂತಹ ಕಲೆಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಶಿವಾನಿ ಹೇಳಿದರು.
“ನಾವು ಇತರರ ವರ್ತನೆಗೆ ಪ್ರತಿಕ್ರಿಯಿಸುತ್ತಾ ಬಂದರೆ ಅದು ನಮ್ಮನ್ನೇ ವಿಚಲಿತವಾಗಿಸುತ್ತದೆ. ನಮ್ಮ ಭಾವನಾತ್ಮಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಲು ನಾವು ನಮಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಿಬಿಡಬೇಕು. ಭಾವನಾತ್ಮಕ ಸ್ವಾತಂತ್ರ್ಯವನ್ನು ಸಾಧಿಸಲು ಇದು ನಮಗೆ ಸಹಾಯ ಮಾಡುತ್ತದೆ. ಇತರರ ಕರ್ಮ ನಮ್ಮ ಹಣೆಬರಹವನ್ನು ಬದಲಾಯಿಸುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು” ಎಂದರು.
ಮಕ್ಕಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಿವಾನಿ, ತಮ್ಮ ಹಿರಿಯರ ನಡವಳಿಕೆ ಮತ್ತು ಮಾಧ್ಯಮದ ಕೆಟ್ಟ ಪ್ರವೃತ್ತಿಯ ಕಾರಣದಿಂದಾಗಿ ಬದಲಾದ ಜೀವನಶೈಲಿ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ ಎಂದು ಹೇಳಿದರು.
ಭಾವನಾತ್ಮಕ ಆರೋಗ್ಯವು ದೈಹಿಕ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿರುತ್ತದೆ. ಪೋಷಕರು ನಕಾರಾತ್ಮಕವಾಗಿ ಮಾತನಾಡಿದರೆ ಮತ್ತು ವರ್ತಿಸಿದರೆ ಮಕ್ಕಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬದಲಾಗಿ, ಪೋಷಕರು ತಮ್ಮ ಮಕ್ಕಳನ್ನು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುವಂತಹ ಮಾತುಗಳನ್ನು ಆಡಬೇಕು ಮತ್ತು ಸಕಾರಾತ್ಮಕವಾಗಿ ವರ್ತಿಸಬೇಕು ಎಂದು ಅವರು ಹೇಳಿದರು.
“ಈ ದಿನಗಳಲ್ಲಿ, ಮಾಧ್ಯಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ನಮ್ಮ ಜೀವನದಲ್ಲಿ ಸಾಕಷ್ಟು ನಕಾರಾತ್ಮಕತೆಯನ್ನು ತರುತ್ತಿದೆ. ನಮ್ಮಲ್ಲಿ ಹೆಚ್ಚಿನವರು ಆಹಾರವನ್ನು ಸೇವಿಸುವಾಗಲೂ ಟಿವಿ ವೀಕ್ಷಿಸುತ್ತಾರೆ ಅಥವಾ ಮೊಬೈಲ್ ಫೋನ್ಗಳಲ್ಲಿ ಇರುತ್ತಾರೆ. ಟಿವಿಯನ್ನು ಊಟದ ಸಮಯದಲ್ಲಿ ಆಫ್ ಮಾಡಬೇಕು ಮತ್ತು ಮೊಬೈಲ್ ಫೋನ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ದೂರವಿಡಬೇಕು, ಇವುಗಳು ಆಹಾರವನ್ನು ಸೇವಿಸುವಾಗ ಕುಟುಂಬದಲ್ಲಿನ ಭಾವನಾತ್ಮಕ ಬಂಧಕ್ಕೆ ಅಡ್ಡಿಯಾಗುತ್ತವೆ” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಬ್ರಹ್ಮ ಕುಮಾರಿ ವಿಶ್ವೇಶ್ವರಿ, ಬ್ರಹ್ಮ ಕುಮಾರಿ ನಿರ್ಮಲಾ ಮತ್ತು ಬ್ರಹ್ಮ ಕುಮಾರಿ ರೇವತಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.