ಸಿಡ್ನಿ: ಕೊರೋನ್ ವೈರಸ್ಗೆ ಇಡೀ ಚೀನಾ ತತ್ತರಿಸಿ ಹೋಗಿದೆ. ಈಗಾಗಲೇ ಈ ಮಹಾಮಾರಿಗೆ ಅಲ್ಲಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ. ಇಡೀ ವಿಜ್ಞಾನ ಲೋಕವೇ ಈ ವೈರಸ್ಗೆ ಔಷಧ ಕಂಡು ಹಿಡಿಯಲು ಶತಪ್ರಯತ್ನಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಯೊಬ್ಬರ ನೇತೃತ್ವದ ವೈದ್ಯರ ತಂಡವೊಂದು ಔಷಧಿಯನ್ನು ಕಂಡು ಹಿಡಿಯುವಲ್ಲಿ ಮಹತ್ವದ ಮುನ್ನಡೆಯನ್ನು ಸಾಧಿಸಿದೆ.
ಆಸ್ಟ್ರೇಲಿಯದಲ್ಲಿರುವ ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (CSIRO) ಹೈ ಸೆಕ್ಯುರಿಟಿ ಲ್ಯಾಬ್ನಲ್ಲಿನ ವೈದ್ಯರ ತಂಡ ಮಹತ್ವದ ಸಂಶೋಧನೆಯನ್ನು ನಡೆಸಿ, ಕೊರೋನ ವೈರಸ್ಗೆ ಔಷಧಿ ಕಂಡು ಹಿಡಿದಿದೆ. ಈ ವೈದ್ಯ ತಂಡದ ನೇತೃತ್ವ ವಹಿಸಿಕೊಂಡಿರುವುದು ಭಾರತೀಯ ಮೂಲದ ವೈದ್ಯ ಡಾ. ಎಸ್. ಎಸ್. ವಾಸನ್ ಎಂಬುದು ಹೆಮ್ಮೆಯ ವಿಷಯವಾಗಿದೆ.
ವಾಸನ್ ಅವರು ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಹಳೆ ವಿದ್ಯಾರ್ಥಿ ಆಗಿದ್ದಾರೆ. ಇವರು ರಾಜಸ್ಥಾನದ ಪಿಲಾನಿಯಲ್ಲಿರುವ ಬಿರ್ಲಾ ಇಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್ ಕಾಲೇಜಿನಲ್ಲೂ ಅಧ್ಯಯನ ಮಾಡಿದ್ದಾರೆ. ನಂತರ ಆಕ್ಸ್ಫರ್ಡ್ನಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರೆಸಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಇದೇ ಸಂಸ್ಥೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಝಿಕಾ ವೈರಸ್ ಬಗ್ಗೆ ಸಂಶೋಧನೆಯನ್ನೂ ನಡೆಸಿದ್ದಾರೆ.
ಕೊರೋನ ಪೀಡಿತರ ರಕ್ತದ ಮಾದರಿಯನ್ನು ಪಡೆದುಕೊಂಡಿರುವ ಇವರ ನೇತೃತ್ವ ವೈದ್ಯ ತಂಡ ವೈರಸ್ ಅನ್ನು ಪ್ರತ್ಯೇಕಿಸಿದೆ. ಬಳಿಕ ಸಿಎಸ್ಐಆರ್ ನಲ್ಲಿ ಸಂಶೋಧನೆಯನ್ನು ನಡೆಸಿ ವೈರಸ್ ಹೆಚ್ಚಳವಾಗುವುದಕ್ಕೆ ಕಾರಣ ಏನು ಎಂಬ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸಿ ಪತ್ತೆ ಹಚ್ಚಿದೆ ಎನ್ನಲಾಗಿದೆ.
ಈ ಔಷಧಿಯು ವೈರಸ್ ಪೀಡಿತ ಜನರ ದೇಹವನ್ನು ಸುಧಾರಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಲಸಿಕೆ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಪೂರ್ಣ ಪ್ರಮಾಣದಲ್ಲಿ ವೈರಸ್ ನಾಶ ಮಾಡುವ ಬಗ್ಗೆ ತ್ವರಿತ ಅಧ್ಯಯನ ಕೈಗೊಳ್ಳಲಾಗುವುದು ಎಂದು ವೈದ್ಯರ ತಂಡ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.