ಮುಂಬಯಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮುಂಬಯಿಯಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ಕರೀಮ್ ಲಾಲ್ನನ್ನು ಭೇಟಿ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಶಿವಸೇನೆಯ ಮುಖ್ಯ ವಕ್ತಾರ ಮತ್ತು ಪಕ್ಷದ ಸಂಸದ ಸಂಜಯ್ ರಾವತ್ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
“ಮುಂಬಯಿನ ಪೊಲೀಸ್ ಕಮಿಷನರ್ ಯಾರು ಆಗಬೇಕು, ಸಚಿವಾಲಯದಲ್ಲಿ ಯಾರು ಕುಳಿತುಕೊಳ್ಳಬೇಕು ಎಂಬುದನ್ನು ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಶರದ್ ಶೆಟ್ಟಿ ಇವರುಗಳು ನಿರ್ಧರಿಸುತ್ತಿದ್ದ ಕಾಲ ಒಂದಿತ್ತು. ಇಂದಿರಾ ಗಾಂಧಿ ಗ್ಯಾಂಗ್ಸ್ಟರ್ ಕರೀಮ್ ಲಾಲ್ನನ್ನು ಭೇಟಿ ಮಾಡುತ್ತಿದ್ದರು. ಆ ಭೂಗತ ಲೋಕವನ್ನು ನಾವು ನೋಡಿದ್ದೇವೆ, ಈಗ ಅದು ಏನೂ ಅಲ್ಲ” ಎಂದು ರಾವತ್ ಬುಧವಾರ ಹೇಳಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಮುಂಬಯಿನಲ್ಲಿನ ಭೂಗತ ಜಗತ್ತಿನ ದಿನಗಳನ್ನು ನೆನಪಿಸಿಕೊಂಡ ಅವರು, ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಮತ್ತು ಶರದ್ ಶೆಟ್ಟಿಯಂತಹ ಭೂಗತ ಪಾತಕಿಗಳು ಒಂದು ಸಮಯದಲ್ಲಿ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ನಿಯಂತ್ರಿಸುತ್ತಿದ್ದರು ಎಂದಿದ್ದಾರೆ.
“ಸಚಿವಾಲಯಕ್ಕೆ ಹಾಜಿ ಮಸ್ತಾನಿ ಬರುತ್ತಿದ್ದಾಗ ಇಡೀ ಸಚಿವಾಲಯ ಅವರನ್ನು ನೋಡಲು ಬರುತ್ತಿತ್ತು. ಇಂದಿರಾ ಗಾಂಧಿ ಕೂಡ ಕರೀಂ ಲಾಲಾನನ್ನು ನೋಡಲು ಆತನ ಪೈಧೋನಿ ನಿವಾಸಕ್ಕೆ ಆಗಮಿಸತ್ತಿದ್ದರು” ಎಂದಿದ್ದಾರೆ.
“ಭೂಗತ ಲೋಕ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿತ್ತು. ಆದರೆ, ಬಳಿಕ ಎಲ್ಲರೂ ದೇಶ ಬಿಟ್ಟು ಹೋದರು. ಈಗ ಅಂತಹುದು ಏನೂ ಇಲ್ಲ” ಎಂದಿದ್ದಾರೆ.
ಕರೀಂ ಲಾಲ್ ಮದ್ಯ , ಜೂಜು, ಸುಲಿಗೆ ದಂಧೆಗಳನ್ನು ನಡೆಸುತ್ತಿದ್ದ ಕುಖ್ಯಾತ ರೌಡಿಯಾಗಿದ್ದಾನೆ. 2002ರಲ್ಲಿ ಈತ ಮೃತಪಟ್ಟಿದ್ದಾನೆ.
ಕಾಂಗ್ರೆಸ್ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾವತ್ ಅವರು ಇಂದಿರಾ ಗಾಂಧಿ ಬಗ್ಗೆ ನೀಡಿದ ಹೇಳಿಕೆಯನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.