ನವದೆಹಲಿ: ಪಾಕಿಸ್ಥಾನದ ನ್ಯಾಯಾಲಯವು ಮಾಜಿ ರಾಷ್ಟ್ರಪತಿ ಪರ್ವೇಜ್ ಮುಷರಫ್ಗೆ ದೇಶದ್ರೋಹ ಪ್ರಕರಣದಲ್ಲಿ ಮರಣದಂಡನೆಯನ್ನು ವಿಧಿಸಿದೆ. ಡಿಸೆಂಬರ್ ತಿಂಗಳಿನಲ್ಲಿ, ಮುಷರಫ್ ಅವರು ತನ್ನ ವಿರುದ್ಧದ ದೇಶದ್ರೋಹ ಪ್ರಕರಣವು ಆಧಾರರಹಿತ ಎಂದು ಪ್ರತಿಪಾದಿಸಿದ್ದರು. ಈ ವಿಷಯದಲ್ಲಿ ತನ್ನ ವಕೀಲರ ಮಾತನ್ನು ನ್ಯಾಯಾಲಯವು ಆಲಿಸುತ್ತಿಲ್ಲ ಎಂದು ಅವರು ವಾದಿಸಿದ್ದರು. ಆದರೀಗ ನ್ಯಾಯಾಲಯವು ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ನೀಡಿದೆ.
ಮುಷರಫ್ ಅವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಪ್ರಸ್ತುತ ದುಬೈನಲ್ಲಿದ್ದಾರೆ. ವೈದ್ಯಕೀಯ ವರದಿಗಳ ಪ್ರಕಾರ, ಮುಷರಫ್ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ಪಾಕಿಸ್ಥಾನ ಮಾಧ್ಯಮವೊಂದು ವರದಿ ಮಾಡಿದೆ.
ಪಾಕಿಸ್ಥಾನದ ಮಾಜಿ ನಾಯಕನ ವಿರುದ್ಧ ದೇಶದ್ರೋಹದ ವಿಚಾರಣೆ 2013 ರ ಡಿಸೆಂಬರ್ನಿಂದ ನಡೆಯುತ್ತಿದೆ. ಅವರ ವಿರುದ್ಧ ಮಾರ್ಚ್ 31, 2014 ರಂದು ದೋಷಾರೋಪಣೆ ಸಲ್ಲಿಸಲಾಗಿದೆ ಮತ್ತು ಅದೇ ವರ್ಷ ಸೆಪ್ಟೆಂಬರ್ನಲ್ಲಿ ಪ್ರಾಸಿಕ್ಯೂಷನ್ ಅವರ ವಿರುದ್ಧದ ಸಂಪೂರ್ಣ ಸಾಕ್ಷ್ಯವನ್ನು ವಿಶೇಷ ನ್ಯಾಯಾಲಯದ ಮುಂದೆ ಮಂಡಿಸಿತ್ತು. ಆದರೆ, ಮೇಲ್ಮನವಿ ಮೊಕದ್ದಮೆಯಿಂದಾಗಿ ಮಾಜಿ ಅಧ್ಯಕ್ಷರ ವಿಚಾರಣೆ ಮುಂದುವರೆದಿತ್ತು ಮತ್ತು ಮಾರ್ಚ್ 2016 ರಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವರು ಪಾಕಿಸ್ಥಾನವನ್ನು ತೊರೆದರು. ಪದೇ ಪದೇ ಸಮನ್ಸ್ ನೀಡಿದ್ದರೂ ಅವರು ನ್ಯಾಯಲಕ್ಕೆ ಹಾಜರಾಗಲಿಲ್ಲ. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣ ನಿವೃತ್ತ ಜನರಲ್ ಅವರನ್ನು ದೇಶಭ್ರಷ್ಟ ಎಂದು ಘೋಷಿಸಲಾಯಿತು.
ಮುಶರಫ್ ಅವರು ಪಾಕಿಸ್ಥಾನದ ಸೇನಾಡಳಿತಗಾರನಾಗಿ 10 ವರ್ಷಗಳ ಕಾಲ ಅಲ್ಲಿ ಸರ್ವಾಧಿಕಾರವನ್ನು ಮಾಡಿದ್ದರು. ಭಾರತ ವಿರುದ್ಧ ಕುತಂತ್ರಗಳನ್ನು ಮಾಡಿದ್ದರು. ಇದೀಗ ಅವರ ದೇಶವೇ ಅವರನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.