ಬೆಂಗಳೂರು: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಜರುಗಿದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು ಬಿಜೆಪಿ ದಿಗ್ವಿಜಯವನ್ನು ಸಾಧಿಸಿದೆ. 15 ಕ್ಷೇತ್ರಗಳ ಬಗ್ಗೆ ಬಿಜೆಪಿಯು 12 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ.
15 ಕ್ಷೇತ್ರಗಳ ಉಪಚುನಾವಣೆಯು ಡಿಸೆಂಬರ್ 5ರಂದು ಜರುಗಿದ್ದು ಇಂದು ಫಲಿತಾಂಶ ಪ್ರಕಟಗೊಂಡಿದೆ. ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಈ ಉಪಚುನಾವಣೆ ಅತ್ಯಂತ ನಿರ್ಣಾಯಕವಾಗಿತ್ತು. ಇದೀಗ ಈ ಉಪಚುನಾವಣೆಯಲ್ಲಿ ಅಭೂತಪೂರ್ವವಾಗಿ ಗೆಲ್ಲುವ ಮೂಲಕ ಬಿಜೆಪಿ ಸರ್ಕಾರ ಸದೃಢಗೊಂಡಿದೆ. ಈ ಮೂಲಕ ಎಲ್ಲಾ ತರನಾದ ಅಸ್ಥಿರತೆಗಳಿಗೂ ತೆರೆ ಬಿದ್ದಿದೆ.
223 ಸ್ಥಾನಗಳುಳ್ಳ ಕರ್ನಾಟಕ ವಿಧಾನಸಭೆಯಲ್ಲಿ ಈಗ ಬಿಜೆಪಿಯು ಸರಳ ಬಹುಮತವನ್ನು ಪಡೆದುಕೊಂಡಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ.
“ಹತ್ತನೇ ಹಂತದ ಮತ ಎಣಿಕೆಯ ನಂತರ ನಮ್ಮ ಪಕ್ಷವು ಪ್ರತಿಸ್ಪರ್ಧಿ ಕಾಂಗ್ರೆಸ್ಗಿಂತ 12 ಸ್ಥಾನಗಳಲ್ಲಿ ಮುಂದಿದೆ. ಕೇವಲ ಮೂರು ಸ್ಥಾನಗಳಲ್ಲಿ ನಮಗೆ ಹಿನ್ನಡೆಯಾಗಿದೆ. ಈ ಮೂರು ಸ್ಥಾನಗಳ ಪೈಕಿ ಒಂದರಲ್ಲಿ ಸ್ವತಂತ್ರ ಅಭ್ಯರ್ಥಿ ಮುನ್ನಡೆಯಲ್ಲಿ ಇದ್ದಾರೆ” ಎಂದು ಬಿಜೆಪಿ ವಕ್ತಾರ ಜಿ. ಮಧುಸೂದನ್ ಹೇಳಿದ್ದಾರೆ.
ಉಪಚುನಾವಣೆಯಲ್ಲಿನ ಗೆಲುವಿನ ಬಳಿಕ ವಿಧಾನಸಭೆಯಲ್ಲಿ ಬಿಜೆಪಿ ಸ್ಥಾನ ಸ್ಪೀಕರ್ ಅವರನ್ನು ಹೊರತುಪಡಿಸಿ 117ಕ್ಕೆ ಏರಿಕೆಯಾಗಿದೆ. ಒಬ್ಬ ಸ್ವತಂತ್ರ ಶಾಸಕರ ಬೆಂಬಲವಿದೆ. ಹೀಗಾಗಿ ಒಟ್ಟು ಬಿಜೆಪಿ ಬೆಂಬಲಿಗ ಶಾಸಕರ ಸಂಖ್ಯೆ 116 ಕ್ಕೆ ಏರಿಕೆಯಾಗಿದೆ. ಸರಳ ಬಹುಮತಕ್ಕೆ 112 ಸ್ಥಾನಗಳ ಅಗತ್ಯವಿದೆ. ಆದರೆ ಈಗ ಬಿಜೆಪಿಗೆ ಸರಳ ಬಹುಮತಕ್ಕಿಂತ ಹೆಚ್ಚುವರಿಯಾಗಿ 6 ಶಾಸಕರ ಬೆಂಬಲವಿದೆ.
ಇನ್ನೂ ಎರಡು ಕ್ಷೇತ್ರಗಳಲ್ಲಿ ಚುನಾವಣೆ ನಡೆಯದೆ ಬಾಕಿಯಾಗಿದೆ. ರಾಯಚೂರು ಜಿಲ್ಲೆಯ ಮುಸ್ಕಿ ಮತ್ತು ಬೆಂಗಳೂರು ಸೌತ್ ವೆಸ್ಟ್ನ ಆರ್ ಆರ್ ನಗರ ಕ್ಷೇತ್ರಗಳ ಚುನಾವಣೆ ಇನ್ನೂ ನಡೆದಿಲ್ಲ. 2018ರಲ್ಲಿ ಇಲ್ಲಿ ನಡೆದ ವಿಧಾನಸಭಾ ಚುನಾವಣೆಯ ಅರ್ಹತೆಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ಜರುಗಿಲ್ಲ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2018ರ ಮೇ 17ರಂದು 105 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದ್ದರು, ಆದರೆ ಒಂಬತ್ತು ಶಾಸಕರ ಬೆಂಬಲ ಕಡಿಮೆಯಾದ ಹಿನ್ನೆಲೆಯಲ್ಲಿ ಮೇ 19ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಸರ್ಕಾರವನ್ನು ರಚನೆ ಮಾಡಿದವು. ಆದರೆ 17 ಮಂದಿ ಶಾಸಕರು ರಾಜೀನಾಮೆಯ ಹಿನ್ನೆಲೆಯಲ್ಲಿ ಸರ್ಕಾರ ಪತನಗೊಂಡಿತು. ಈ ಬೆಳವಣಿಗೆ ಬಳಿಕ ಯಡಿಯೂರಪ್ಪ ಅವರು ಜುಲೈ 26ರಂದು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
2023ರ ಮೇ ವರೆಗೆ ಈ ಅವಧಿಯ ಸರ್ಕಾರ ಮುಂದುವರಿಯಲಿದ್ದು, ಅಲ್ಲಿಯವರೆಗೆ ಬಿಜೆಪಿಯು ಸ್ಥಿರ ಸರ್ಕಾರವನ್ನು ನೀಡುವ ಭರವಸೆ ಈಗ ದೃಢವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.