ಬೆಂಗಳೂರು: ಚಾಮರಾಜನಗರದ ದೀನಬಂಧು ಸೇವಾ ಟ್ರಸ್ಟ್ನ ಸಂಸ್ಥಾಪಕ ಜಿ.ಎಸ್. ಜಯದೇವ್ ಅವರನ್ನು ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ 2019 ಕ್ಕೆ ಆಯ್ಕೆ ಮಾಡಿದೆ.
ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಭೀಮನಗೌಡ ಸಂಗನಗೌಡ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯು ಜಯದೇವ್ ಅವರ ಹೆಸರನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಸರ್ಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಜಯದೇವ್ ಅವರು ಬಾಡಿಗೆ ಮನೆಯಲ್ಲಿ ಆರು ಹುಡುಗರ ಮೊದಲ ಬ್ಯಾಚ್ನೊಂದಿಗೆ ದೀನಬಂಧು ಸೇವಾ ಟ್ರಸ್ಟ್ ಅನ್ನು 1992 ರಲ್ಲಿ ಸ್ಥಾಪಿಸಿದರು. ಈ ಟ್ರಸ್ಟ್ ಬಾಲಕ ಮತ್ತು ಬಾಲಕಿಯರಿಗೆ ಪ್ರಾಥಮಿಕ ಶಿಕ್ಷಣವನ್ನು ಒದಗಿಸಿಕೊಡುತ್ತದೆ. ಅದರಲ್ಲೂ ಈ ಶಾಲೆಗೆ ಆಗಮಿಸುವ ಬಹುತೇಕ ಮಕ್ಕಳು ಅರ್ಧದಲ್ಲಿ ಶಾಲೆ ಬಿಟ್ಟವರಾಗಿದ್ದಾರೆ. ಅನಾಥ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗಾಗಿ ವಸತಿ ಸಹಿತ ಶಿಕ್ಷಣವನ್ನು ಇದು ನೀಡುತ್ತಿದೆ. ಕನ್ನಡ ಮಾಧ್ಯಮ ಶಾಲೆ, ಸೃಜನಶೀಲಾ ಕಲಿಕಾ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಅನಾಥ ಹೆಣ್ಣು ಮಕ್ಕಳಿಗಾಗಿ ಆಶ್ರಮಗಳನ್ನು ಸ್ಥಾಪಿಸಿ ನೂರಾರು ಕುಟುಂಬಗಳ ಏಳಿಗೆಗಾಗಿ ಇದು ಶ್ರಮಿಸುತ್ತಿದೆ.
ಗಾಂಧೀಜಿ ಅವರ ಸಂದೇಶವನ್ನು ಬದುಕಿನ ಮಾರ್ಗವಾಗಿಸಿಕೊಂಡಿರುವ ಜಿ. ಎಸ್. ಜಯದೇವ ಅವರು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಮಾಜ ಸೇವೆಯನ್ನು ಸಕ್ರಿಯವಾಗಿ ಮಾಡುತ್ತಿದ್ದಾರೆ. 30 ಕ್ಕೂ ಹೆಚ್ಚು ಸ್ವಸಹಾಯ ಮಹಿಳಾ ಸಂಘಟನೆಗಳನ್ನು ರಚಿಸಿ ಅವುಗಳ ಮೂಲಕ ಆರ್ಥಿಕ ಭದ್ರತೆ, ಪರಿಸರ ಅಭಿವೃದ್ಧಿ, ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ.
ಗಾಂಧಿ ಜಯಂತಿಯ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕ’ ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡುತ್ತದೆ. ಪ್ರಶಸ್ತಿಯು 5 ಲಕ್ಷ ನಗದು ಒಳಗೊಂಡಿರುತ್ತದೆ.
ಅಕ್ಟೋಬರ್ 2 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.