ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣವಚನವನ್ನು ಸ್ವೀಕರಿಸಿದರು.
ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯ್ ವಾಲ ಅವರು ಯಡಿಯೂರಪ್ಪನವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ದೇವರ ಹೆಸರಿನಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣವಚನವನ್ನು ಸ್ವೀಕರಿಸಿದರು. ನಂತರ ರಾಜ್ಯಪಾಲರು ಹೂಗುಚ್ಛ ನೀಡಿ ಶುಭಕೋರಿದರು.
ಪ್ರಮಾಣವಚನ ಸಮಾರಂಭಕ್ಕೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, “ಇನ್ನು ಮೂರು ತಿಂಗಳಲ್ಲಿ ಹಿಂದಿನ ಸರ್ಕಾರ ಮತ್ತು ನಮ್ಮ ಸರ್ಕಾರದ ನಡುವೆ ಇರುವ ವ್ಯತ್ಯಾಸ ಜನರಿಗೆ ಗೊತ್ತಾಗಲಿದೆ. ರಾಜ್ಯದ ರೈತರ, ಕಾರ್ಮಿಕರ, ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ. ರಾಜ್ಯದ ಜನರು ಅಭಿವೃದ್ಧಿಗಾಗಿ ಮುಂದೆ ನೋಡುತ್ತಿದ್ದರು, ಅದು ಈಗ ಸಾಕಾರವಾಗಿದೆ” ಎಂದರು.
“ನಾವು ಸೇಡಿನ ರಾಜಕರಣವನ್ನು ಮಾಡುವುದಿಲ್ಲ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ” ಎಂದಿದ್ದಾರೆ.
ಇದೇ ವೇಳೆ ಸದನದಲ್ಲಿ ಬಹುಮತ ಸಾಬೀತುಪಡಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಸೋಮವಾರ ಬಹುಮತವನ್ನು ನೂತನ ಸರ್ಕಾರ ಸಾಬೀತುಪಡಿಸಬೇಕಾಗಿದೆ.
ಬಿ.ಎಸ್ ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಿಎಂ ಆಗಿ ಕೇವಲ 8 ದಿನ ಮಾತ್ರ ಆಡಳಿತ ನಡೆಸಿದ್ದರು. 2 ನೇ ಬಾರಿ ಸಿಎಂ ಆಗಿ 3 ವರ್ಷ 2 ತಿಂಗಳು ಆಡಳಿತ, 3 ನೇ ಬಾರಿಗೆ ಸಿಎಂ ಆಗಿ 3 ದಿನ ಆಡಳಿತ ನಡೆಸಿದ್ದರು. ಇದೀಗ 4 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್, ಕಾಂಗ್ರೆಸ್ ಶಾಸಕ ರೋಶನ್ ಬೇಗ್, ಮಾಜಿ ಶಾಸಕ ಕೆ. ಎನ್. ರಾಜಣ್ಣ, ಕರ್ನಾಟಕದ ಸಂಸದರು, ಶಾಸಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.