ಮಂಗಳೂರು: ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ನಡುಗುಡ್ಡೆಯಲ್ಲಿ ವ್ಯಾಸರಾಜರ ವೃಂದಾವನವನ್ನು ಛದ್ರಗೊಳಿಸಿದ ಪ್ರಕರಣವನ್ನು ವಿಶ್ವಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.
ಪತ್ರಿಕಾ ಪ್ರಕಟನೆಯನ್ನು ಬಿಡುಗಡೆಗೊಳಿಸಿರುವ ವಿಶ್ವಹಿಂದೂ ಪರಿಷತ್, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ರಾಜಗುರುಗಳಾಗಿ, ಇಡೀ ವಿಜಯನಗರದ ಸಾಮರಸ್ಯ ಹಾಗೂ ಸಹಬಾಳ್ವೆಗೆ ಶಂಖನಾದವನ್ನು ಮೊಳಗಿಸಿದ ಶ್ರೇಷ್ಠ ಯತಿಗಳಾದ ಶ್ರೀ ವ್ಯಾಸರಾಜರ ವೃಂದಾವನ ಧ್ವಂಸ ಘಟನೆ ಹಿಂದೂ ಸಮಾಜಕ್ಕೆ ದೊಡ್ಡ ನೋವನ್ನು ತಂದಿದೆ ಎಂದಿದೆ.
ಕನಕದಾಸ, ಪುರಂದರದಾಸಂತಹ ದಾಸವರೇಣ್ಯರಿಗೆ ದೀಕ್ಷೆ ಕೊಟ್ಟು ಶಿಷ್ಯ ಪಟ್ಟವನ್ನಿತ್ತು ಅವರ ಗೌರವವನ್ನು, ಮಹತ್ವವನ್ನು ಸಮಾಜದಲ್ಲಿ ಎತ್ತಿ ತೋರಿಸಿದ ಶ್ರೇಷ್ಠ ಮಾನ್ವಿತರ ವೃಂದಾವನಕ್ಕೆ ಸೂಕ್ತ ರಕ್ಷಣೆ ಒದಗಿಸಿದೆ ಸರ್ಕಾರ ಹಿಂದೂ ಸಮಾಜಕ್ಕೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದೆ
“ಅನ್ಯಕೋಮಿನವರ ಒಂದು ಸಮಾಧಿಗೂ ಸೂಕ್ತ ಭದ್ರತೆಯನ್ನು ಕೊಡುವ ಈ ಸರ್ಕಾರ ಮತ್ತು ಅದರ ವ್ಯವಸ್ಥೆಯು ಇಂತಹ ಶ್ರೇಷ್ಠ ಗುರುಗಳ ವೃಂದಾವನಕ್ಕೆ ಯಾವುದೇ ರಕ್ಷಣೆಯನ್ನು ಕೊಡದೇ ಇರುವುದು ಸಮಸ್ತ ಹಿಂದೂ ಸಮಾಜಕ್ಕೆ ತೀವ್ರ ನೋವನ್ನು ತಂದಿದೆ. ಒಬ್ಬ ವ್ಯಕ್ತಯಿಂದ ಇಂತಹ ದುಷ್ಟ ಕೃತ್ಯವನ್ನು ನಡೆಸಲು ಸಾಧ್ವಿಯಲ್ಲ, ಯಂತ್ರಗಳನ್ನು ಬಳಸಿ ಈ ಭಗ್ನ ಕಾರ್ಯ ನಡೆಸಿರುವುದು ತಿಳಿದು ಬಂದಿದೆ.ಸಾಮರಸ್ಯ ಮತ್ತು ಸಂಯಮದ ಬದುಕನ್ನು ಬಾಳುವ ಮತ್ತು ಇಡೀ ಸಮಾಜದ ಐಕ್ಯತೆಯನ್ನು ಕಾಪಾಡುವ ಹಿಂದೂ ಸಮಾಜಕ್ಕೆ ಈ ಘಟನೆಯನ್ನು ಸಹಿಸಲು ಅಸಾಧ್ಯವಾಗಿದೆ. ಸರ್ಕಾರ ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಶಿಕ್ಷೆಯನ್ನು ನೀಡುವ ಕಾರ್ಯವನ್ನು ಮಾಡಬೇಕು, ಇಡೀ ವೃಂದಾವನ ಸೇರಿದಂತೆ ಪುಣ್ಯಕ್ಷೇತ್ರಗಳಿಗೆ ರಕ್ಷಣೆಯನ್ನು ಒದಗಿಸುವಂತಹ ಕಾರ್ಯವನ್ನು ಮಾಡಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ಮೂಲಕ ಹಿಂದೂ ಸಮಾಜಕ್ಕಾದ ನೋವನ್ನು ನಿವಾರಿಸಬೇಕು” ಎಂದು ವಿ.ಹೆಚ್.ಪಿ. ರಾಜ್ಯ ಕಾರ್ಯಾಧ್ಯಕ್ಷರಾದ ಎಂ. ಬಿ. ಪುರಾಣಿಕ್ ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರ ಸೂಕ್ತ ಕ್ರಮವನ್ನು ಜರುಗಿಸಲು ವಿಫಲವಾದರೆ ಹಿಂದೂ ಸಮಾಜ ಉಗ್ರ ಹೋರಾಟವನ್ನು ಮಾಡಲಿದೆ ಎಂದು ಎಚ್ಚರಿಕೆಯನ್ನು ವಿ.ಹೆಚ್.ಪಿ. ನೀಡಿದೆ.
ತುಂಗಭದ್ರಾ ನದಿಯ ದಡದಲ್ಲಿ ವ್ಯಾಸರಾಜರ ವೃಂದಾವನ ಸೇರಿದಂತೆ 9 ವೃಂದಾವನಗಳಿವೆ. ಬುಧವಾರ ಮಧ್ಯರಾತ್ರಿ ವ್ಯಾಸರಾಜರ ವೃಂದಾವನ ದುಷ್ಕರ್ಮಿಗಳು ಅಗೆದು ಹಾಕಿದ್ದಾರೆ. ವೃಂದಾವನದ ಕೆಳಭಾಗವನ್ನು ಸಂಪೂರ್ಣ ಅಗೆಯಲಾಗಿದೆ. ದುಷ್ಕರ್ಮಿಗಳು ನಿಧಿಯಾಸೆಗೆ ವೃಂದಾವನ ಆಗೆದಿರುವ ಶಂಕೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.