ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ನಡುಗುಡ್ಡೆಯಲ್ಲಿ ವ್ಯಾಸರಾಜರ ವೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ.
ತುಂಗಭದ್ರಾ ನದಿಯ ದಡದಲ್ಲಿ ವ್ಯಾಸರಾಜರ ವೃಂದಾವನ ಸೇರಿದಂತೆ 9 ವೃಂದಾವನಗಳಿವೆ. ಬುಧವಾರ ಮಧ್ಯರಾತ್ರಿ ವ್ಯಾಸರಾಜರ ವೃಂದಾವನ ದುಷ್ಕರ್ಮಿಗಳು ಅಗೆದು ಹಾಕಿದ್ದಾರೆ. ವೃಂದಾವನದ ಕೆಳಭಾಗವನ್ನು ಸಂಪೂರ್ಣ ಅಗೆಯಲಾಗಿದೆ. ದುಷ್ಕರ್ಮಿಗಳು ನಿಧಿಯಾಸೆಗೆ ವೃಂದಾವನ ಆಗೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ನವವೃಂದಾವನ ನಡುಗುಡ್ಡೆಯಲ್ಲಿ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು, ವಾಗೀಶ ತೀರ್ಥರು, ರಘುವರ್ಯ ತೀರ್ಥರು, ವ್ಯಾಸರಾಯರು, ಸುಧೀಂದ್ರ ತೀರ್ಥರು, ಶ್ರೀನಿವಾಸ ತೀರ್ಥರು ಮತ್ತು ರಾಮತೀರ್ಥರ ವೃಂದಾವನಗಳಿವೆ.
ವ್ಯಾಸರಾಯರ ವೃಂದಾವನನ್ನು ಧ್ವಂಸಗೊಳಿಸಿರುವ ಪ್ರಕರಣವನ್ನು ಸಂಸದ ವೈ.ದೇವೇಂದ್ರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
“ನಿಧಿಯ ಆಸೆಗಾಗಿ ಇಂತಹ ಕೃತ್ಯವನ್ನು ಎಸಗಿರುವುದು ಅಕ್ಷಮ್ಯ ಅಪರಾಧ. ಹಂಪಿ ಸುತ್ತಮುತ್ತ ಇಂತಹ ಘಟನೆಗಳು ನಡೆಯುತ್ತಿರುವುದು ದುರಾದೃಷ್ಟಕರ. ಹಂಪಿ ಸ್ಮಾರಕ ಮತ್ತು ಅದರ ಸುತ್ತಲ ಪ್ರದೇಶಗಳಿಗೆ ಸೂಕ್ತ ಬಿಗಿ ಬಂದೋಬಸ್ತ್ ಮಾಡಬೇಕು, ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಈ ಬಗ್ಗೆ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ” ಎಂದಿದ್ದಾರೆ.
ಕರ್ನಾಟಕದ ಐತಿಹಾಸಿಕ ಮಹಾನ್ ಯತಿ ಪರಂಪರೆಯ ವೃಂದಾವನ, ದೇವಸ್ಥಾನ ಇತ್ಯಾದಿಗಳ ಸಂರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು, ಈ ದಾರುಣ ಕೃತ್ಯವನ್ನು ಮಾಡಿದವರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕೆಂದು ಶ್ರೀ ವ್ಯಾಸರಾಜ ಮಠ ಸೇರಿದಂತೆ ಅನೇಕ ಸಂಸ್ಥೆಗಳು ಒಂದಾಗಿ ಇಂದು (ಜುಲೈ 18)ರಂದು ಸಂಜೆ 3:30ಕ್ಕೆ ಮೈಸೂರು ಡಿಸ್ಟ್ರಿಕ್ಟ್ ಕಮಿಷನರ್ ಅವರಿಗೆ ಮನವಿಯನ್ನು ನೀಡಲು ನಿರ್ಧರಿಸಿವೆ.
ಈ ಘಟನೆಗೆ ಸ್ಥಳಿಯರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಸೂಕ್ತ ತನಿಖೆಯನ್ನು ನಡೆಸಿ ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀ ವ್ಯಾಸ ತೀರ್ಥ – ಕೃಷ್ಣ ದೇವರಾಯರ ರಾಜಗುರು
ಶ್ರೀ ವ್ಯಾಸತೀರ್ಥ ವೇದಾಂತದ ದ್ವೈತ ಸಿದ್ಧಾಂತಕ್ಕೆ ಸೇರಿದ ಶ್ರೇಷ್ಠ ವಿದ್ವಾಂಸ ಮತ್ತು ಕವಿ. ವಿಜಯನಗರ ಸಾಮ್ರಾಜ್ಯದ ಪೋಷಕ ಸಂತನಾಗಿದ್ದರು. ಆಡುಭಾಷೆಯ ಚಿಂತನೆಯಲ್ಲಿ ಹೊಸ ಬೆಳವಣಿಗೆಗಳನ್ನು, ಹರಿದಾಸ ಸಾಹಿತ್ಯದ ಬೆಳವಣಿಗೆಗಳನ್ನು ಕಂಡ ದ್ವೈತದ ಸುವರ್ಣಯುಗದಲ್ಲಿ ವ್ಯಾಸತೀರ್ಥರು ಮುಂಚೂಣಿಯಲ್ಲಿದ್ದರು. ಪುರಂದರ ದಾಸ ಮತ್ತು ಕನಕ ದಾಸರಂತಹ ಮಹಾನ್ ಕವಿಗಳು ಅವರ ಶಿಷ್ಯರು. ಸಮಾಜಕ್ಕೆ ಶ್ರೀ ವ್ಯಾಸ ತೀರ್ಥರ ಕೊಡುಗೆ ಅಪಾರವಾಗಿದೆ. ಅವರು ಕೃಷ್ಣ ದೇವರಾಯರ ರಾಜಗುರುಗಳಾಗಿದ್ದರು ಮತ್ತು ನೆರೆಹೊರೆಯ ರಾಜ್ಯಗಳಿಗೆ ದೂತ ಮತ್ತು ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದರು ಮತ್ತು ಏಕಕಾಲದಲ್ಲಿ ಉಪಖಂಡದಲ್ಲಿ ದ್ವೈತ ತತ್ತ್ವಶಾಸ್ತ್ರವನ್ನು ಪ್ರಸಾರ ಮಾಡಿದರು. ಕೃಷ್ಣದೇವ ರಾಯರ ಮರಣದ ನಂತರ, ವ್ಯಾಸತೀರ್ಥರು ಅಚ್ಯುತ ದೇವ ರಾಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶ್ರೀ ವ್ಯಾಸತೀರ್ಥರನ್ನು ದ್ವೈತ ಚಿಂತನೆಯ ಅಗ್ರಗಣ್ಯ ದಾರ್ಶನಿಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.