ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಗುಡಿ ಶಾಲೆಯಲ್ಲಿ ನಿರ್ಮಾಣವಾಗಿರುವ ಪ್ರಯೋಗಾಲಯವು ಇಡೀ ಜಿಲ್ಲೆಗೆ ಮಾದರಿ ಎನಿಸುವ ರೀತಿಯಲ್ಲಿದೆ. ಶಾಲೆಯ ಹಳೆ ವಿದ್ಯಾರ್ಥಿಗಳ ಕೊಡುಗೆಯಲ್ಲಿ ಇದು ನಿರ್ಮಾಣಗೊಂಡಿದೆ.
ಪ್ರಯೋಗಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೆಶಕ ದಿವಾಕರ ಶೆಟ್ಟಿ ಅವರು, “ಇಡೀ ಜಿಲ್ಲೆಗೆ ಈ ಪ್ರಯೋಗಾಲಯ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಹಳೇ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ ಅದರ ಉಪಯೋಗ ಆಗುವಂತೆ ನೋಡಿಕೊಳ್ಳುಬೇಕು, ಆಗ ಅವರು ನೀಡಿದ ಕೊಡುಗೆಗೆ ಬೆಲೆ ಸಿಗುತ್ತದೆ” ಎಂದಿದ್ದಾರೆ.
ಇತ್ತೀಚೆಗಷ್ಟೇ ಈ ಶಾಲೆಯಲ್ಲಿ ಎಸ್.ಡಿ.ಎಮ್.ಸಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಇದರಲ್ಲಿ ಭಾಗವಹಿಸಿ ದಿವಾಕರ್ ಶೆಟ್ಟಿ ಮಾತನಾಡಿದರು. “ಇವತ್ತಿನ ದಿನಗಳಲ್ಲಿ ಶಿಕ್ಷಕರು ತಮ್ಮ ಬೇಡಿಕೆಯನ್ನೇ ಹೆಚ್ಚು ಬಯಸುತ್ತಾರೆ. ಆದರೆ ವಿಜ್ಞಾನ ಪ್ರಯೋಗಾಲಯದ ಪರಿಕಲ್ಪನೆಗೆ ಬೇಡಿಕೆಯನ್ನಿಟ್ಟ ಶಾಲಾ ಶಿಕ್ಷಕ ಸಿಬ್ಬಂದಿಗಳಿಗೂ ಅಭಿವೃದ್ಧಿ ಸಮಿತಿಯವರಿಗೂ ಅಭಿನಂದನೆಗಳನ್ನು ಅರ್ಪಿಸಬೇಕು” ಎಂದಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉದ್ಯಮಿ ಉಪೇಂದ್ರ ಪೈ ಅವರು, “ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚಿನ ಅಂಕ ಪಡೆಯಲು ಮತ್ತು ಸಮಾಜದಲ್ಲಿ ಬದುಕಲು ಶಿಕ್ಷಣದ ಅವಶ್ಯಕತೆ ಇದೆ. ಆದ್ದರಿಂದ ಪ್ರತಿಯೊಬ್ಬರು ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು” ಎಂದರು. ಶಾಲೆಗೆ ಗಡಿಯಾರಗಳನ್ನು ದೇಣಿಗೆಯಾಗಿ ಅವರು ನೀಡಿದರು. ಅಲ್ಲದೇ, ಮುಂದಿನ ದಿನಗಳಲ್ಲಿ ಶಾಲೆಗೆ ಉತ್ತಮವಾದ ಗ್ರಂಥಾಲಯವನ್ನು ನೀಡುವ ಭರವಸೆಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ ಗಣಪತಿ ನಾಯ್ಕ ಅವರು, ಹಳೆ ವಿದ್ಯಾರ್ಥಿಗಳ ಸಾಧನೆ ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಶ್ರಮದಿಂದ ಶಾಲೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೊಡುಗೆಗಳು ಬಂದು ಮಕ್ಕಳಿಗೆ ಅದರ ಉಪಯೋಗವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಎಲ್ಲ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಮಾಜಿ ನಗರ ಸಭಾ ಸದಸ್ಯ ಜಗದೀಶ ಗೌಡ್ರು, ಹಳೆಯ ವಿದ್ಯಾರ್ಥಿ ಹರೀಶ ಕರ್ಕಿ, ಶಾಲಾ ಶಿಕ್ಷಕರು, ಪಾಲಕರು, ಮಕ್ಕಳು ಹಾಜರಿದ್ದು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.