ಕೊಲಂಬೋ: ಭೀಕರ ಸರಣಿ ಬಾಂಬ್ ದಾಳಿಯಿಂದ ತತ್ತರಿಸಿ ಹೋಗಿರುವ ಶ್ರೀಲಂಕಾ, ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯದಂತೆ ಮಾಡಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಬುರ್ಖಾ ಸೇರಿದಂತೆ ಎಲ್ಲಾ ತರನಾದ ಮುಖ ಮುಚ್ಚುವಿಕೆಯನ್ನು ನಿಷೇಧಿಸಿದೆ. ಜನರ ಗುರುತನ್ನು ಸ್ಪಷ್ಟವಾಗಿ ಪಡೆಯುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.
ತುರ್ತು ಕ್ರಮಗಳಡಿಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ತುರ್ತು ಕ್ರಮದ ಅಡಿಯಲ್ಲಿ ಸುಲಭವಾಗಿ ವ್ಯಕ್ತಿಯನ್ನು ಗುರುತಿಸಲು ಅಡ್ಡಿಯಾಗುವ ಎಲ್ಲಾ ರೀತಿಯ ಮುಸುಕುಗಳನ್ನು ನಿಷೇಧಿಸುವಂತೆ ಅಧ್ಯಕ್ಷರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
”ದೇಶದ ಭದ್ರತೆಯನ್ನು ಬಿಗಿಗೊಳಿಸಲು, ದುಷ್ಕರ್ಮಿಗಳ ಗುರುತನ್ನು ಪತ್ತೆ ಮಾಡಲು, ತಪ್ಪಿತಸ್ಥರು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಎಪ್ರಿಲ್ 29 ರಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಇದನ್ನು ಪಾಲನೆ ಮಾಡಬೇಕು” ಎಂದು ಅಧ್ಯಕ್ಷರ ಕಛೇರಿ ಮೂಲಗಳು ತಿಳಿಸಿವೆ.
ಈಸ್ಟರ್ ಹಬ್ಬದ ದಿನ ಸರಣಿ ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 350 ಕ್ಕೂ ಅಧಿಕ ಮಂದಿ ಅಸುನೀಗಿದ್ದರು. ಹಲವರು ಗಾಯಗೊಂಡಿದ್ದರು. ಇಸಿಸ್ ಸಂಘಟನೆ ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಆದರೂ, ಸ್ಥಳೀಯ ನ್ಯಾಷನಲ್ ತವ್ಹೀದ್ ಜಮಾತ್ ಸಂಘಟನೆ ಮೇಲೂ ತನಿಖಾಧಿಕಾರಿಗಳು ಕಣ್ಣಿಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.