ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿವೆ. ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡಿಕೊಳ್ಳುತ್ತಿವೆ. ಮೊದಲ ಹಂತದ ಹಾಗೂ ಎರಡನೇ ಹಂತದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಪಕ್ಷಗಳ ನಡುವಣ ಕೆಸರೆರೆಚಾಟ ತಾರಕಕ್ಕೇರಿದೆ. ವಿತ್ತ ಸಚಿವ ಅರುಣ್ ಜೇಟ್ಲಿಯವರು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಮುಂದಿಡುತ್ತಲೇ, ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.
‘ಎಲ್ಲರಿಗೂ ರಾಹುಲ್ ಗಾಂಧಿಯಂತಹ ರಾಜಕೀಯ ವಿರೋಧಿ ಇರಲಿ ಎಂದು ನಾನು ಬಯಸುತ್ತೇನೆ. ಅವರ ಭಾಷಣಗಳು ಸದಾ ಪೊಳ್ಳು ಭರವಸೆ ಮತ್ತು ಸುಳ್ಳುಗಳಿಂದ ತುಂಬಿರುತ್ತದೆ. ದೇಶದ ಜನರು ರಾಜಕಾರಣಿಗಳಿಗಿಂತ, ಪತ್ರಕರ್ತರಿಗಿಂತ ಬುದ್ಧಿವಂತರಾಗಿದ್ದು, ಸತ್ಯ ಏನೆಂಬುದನ್ನು ಅವರು ತಿಳಿದುಕೊಂಡಿರುತ್ತಾರೆ’ ಎಂದು ಜೇಟ್ಲಿ ಹೇಳಿದ್ದಾರೆ.
‘ಸರ್ಕಾರ ಬಿಡುಗಡೆ ಮಾಡಿದ ಆರ್ಥಿಕ ವರದಿಯನ್ನು ಐಎಂಎಪ್ ಕೂಡ ಒಪ್ಪಿಕೊಂಡಿದೆ ಆದರೆ ಪ್ರತಿಪಕ್ಷಗಳು ಮಾತ್ರ ಅವುಗಳನ್ನು ನಂಬಲು ಸಿದ್ಧವಿಲ್ಲ. ಪ್ರತಿಪಕ್ಷಗಳಿಗೆ ನನ್ನ ಬಳಿ ಎರಡು ಪದಗಳಿವೆ – 1. ವಿರೋಧಿಸಬೇಕಂತಲೇ ವಿರೋಧಿಸುವುದು, 2. ನಕರಾತ್ಮಕತೆಯ ನವಾಬರು’-ಇವರು ದೇಶದಲ್ಲಿ ಇಂದು ಯಾವುದೇ ಸಕರಾತ್ಮಕತೆಯನ್ನು ನೋಡುತ್ತಿಲ್ಲ’ ಎಂದರು.
‘2014ರಲ್ಲಿ ಮೋದಿಯವರು ಚುನಾವಣೆಯನ್ನು ಗೆದ್ದ ಬಳಿಕ ಭಾರತ ವಿಶ್ವದ ವೇಗದ ಆರ್ಥಿಕತೆಯಾಗಿ ಹೊರಹೊಮ್ಮಿದೆ. 1947 ರಿಂದ 2013 ರ ವರೆಗೆ ಭಾರತ ವೇಗದ ಆರ್ಥಿಕತೆಯಾದ ವರ್ಷವನ್ನು ನನಗೆ ತೋರಿಸಿ. ಆದರೂ, ನಮ್ಮ ಸರ್ಕಾರ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ’ ಎಂದರು.
ರಾಹುಲ್ ಗಾಂಧಿ ಹೇಳಿದಂತೆ ಯಾವುದೇ ಉದ್ಯಮ ಸಂಸ್ಥೆಗಳ ಸಾಲವನ್ನು ನಾವು ಮನ್ನಾ ಮಾಡಿಲ್ಲ ಎಂದಿರುವ ಅವರು, ಪ್ರಸ್ತುತ ದೇಶದಲ್ಲಿ ತೆರಿಗೆ ಪಾವತಿ ಪ್ರಮಾಣ ಹೆಚ್ಚಳವಾಗಿದೆ. ನಾವು ಜಿಎಸ್ಟಿ ಅನುಷ್ಠಾನಗೊಳಿಸಿದ್ದೇವೆ, ಈಗ ಸಮಾನ ದರಗಳು ದೇಶದಲ್ಲಿವೆ. ತೆರಿಗೆಯನ್ನು ಆನ್ಲೈನ್ಗೊಳಿಸಿದ್ದೇವೆ, ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದರು.
‘ಪಾಕಿಸ್ಥಾನದ ವಿರುದ್ಧ ನಮ್ಮ ನೀತಿ ಸ್ಥಿರವಾಗಿದೆ. ಅದರೊಂದಿಗೆ ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ ಆ ರಾಷ್ಟ್ರ ತನ್ನ ನೆಲವನ್ನು ಭಾರತ ವಿರುದ್ಧದ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಬಾರದು. ನಾವು ಕೇವಲ ಎಲ್ಒಸಿಯಲ್ಲ, ಗಡಿಯನ್ನು ದಾಟಿ ಪಾಕಿಸ್ಥಾನದ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ್ದೇವೆ. ಇಡೀ ವಿಶ್ವವೇ ನಮ್ಮ ನಿಲುವನ್ನು ಸಮರ್ಥಿಸಿಕೊಂಡಿತು. ಪಾಕಿಸ್ಥಾನ ಉಗ್ರರ ರಫ್ತನ್ನು ಯಾವಾಗ ನಿಲ್ಲಿಸುತ್ತದೋ ಆವಾಗ ಅವರಿಗೆ ನಮ್ಮೊಂದಿಗೆ ಶಾಂತಿಯುತ ಬಾಂಧವ್ಯವನ್ನು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.
ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ನಮಗಿದೆ ಎಂಬುದಾಗಿ ಅವರು ಪುನರುಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.