ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿಯು ಮೊದಲ ಹಂತದ 184 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿ ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧಿಸಲಿದ್ದಾರೆ. ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸಲಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಿಂದ, ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ನಾಗ್ಪುರದಿಂದ ಸ್ಪರ್ಧಿಸಲಿದ್ದಾರೆ.
ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಗುರುವಾರ ಪ್ರತಿಕಾಗೋಷ್ಠಿಯಲ್ಲಿ ಬಿಜೆಪಿಯ ಮೊದಲ ಹಂತದ 184 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಮೊದಲ ಪಟ್ಟಿಯಲ್ಲಿ, ಮಹಾರಾಷ್ಟ್ರದ 16, ಅಸ್ಸಾಂನ 8, ಅರುಣಾಚಲಪ್ರದೇಶದ 2, ಛತ್ತೀಸ್ ಗಢದ 5, ಜಮ್ಮು ಕಾಶ್ಮೀರದ 5, ಕರ್ನಾಟಕದ 21, ಕೇರಳದ 13, ಒರಿಸ್ಸಾದ 10, ರಾಜಸ್ಥಾನದ 16, ತಮಿಳುನಾಡಿನ 5, ತೆಲಂಗಾಣದ 10, ಉತ್ತರಾಖಂಡದ 5, ಪಶ್ಚಿಮಬಂಗಾಳದ 28, ಆಂಧ್ರ ಪ್ರದೇಶದ 2 ಅಭ್ಯರ್ಥಿಗಳು ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ 6 ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ, ಇದರಲ್ಲಿ ಶಹಜಹಾನ್ ಪುರದಿಂದ ಆಯ್ಕೆಯಾಗಿದ್ದ ಕೇಂದ್ರ ಸಚಿವ ಕೃಷ್ಣ ರಾಜ್ , ಆಗ್ರಾದ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ಶಂಕರ್ ಕತಾರಿಯ ಅವರೂ ಸೇರಿದ್ದಾರೆ. ಫತೇಪುರ ಸಿಕ್ರಿಯ ಚೌಧರಿ ಬಾಬುಲಾಲ್ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ. ಉತ್ತರಾಖಂಡ ಮಾಜಿ ಸಿಎಂ ಭಗತ್ ಸಿಂಗ್ ಕೋಶ್ಯಾರಿ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ.
ಅಮೇಥಿಯಲ್ಲಿ ಮತ್ತೊಮ್ಮೆ ಸ್ಮೃತಿ ವರ್ಸಸ್ ರಾಹುಲ್ ಗಾಂಧಿ ನಡುವೆ ಹಣಾಹಣಿ ನಡೆಯಲಿದೆ. ಕಳೆದ ಬಾರಿ ಸ್ಮೃತಿ ಅವರು ರಾಹುಲ್ ವಿರುದ್ಧ ಕೇವಲ 1.07 ಲಕ್ಷ ಮತಗಳಿಂದ ಸೋತಿದ್ದರು.
ವಿಕೆ ಸಿಂಗ್ ಅವರು ಘಾಜಿಯಾಬಾದ್ ನಿಂದ, ಮಹೇಶ್ ಶರ್ಮಾ ಅವರು ನೊಯ್ಡಾದಿಂದ, ಕಿರಣ್ ರಿಜ್ಜು ಅವರು ಅರುಣಾಚಲ ವೆಸ್ಟ್ ನಿಂದ, ಜಿತೇಂದ್ರ ಸಿಂಗ್ ಅವರು ಉಧಮ್ ಪುರದಿಂದ ಕಣಕ್ಕಿಳಿಯಲಿದ್ದಾರೆ. ಪೂಣಂ ಮಹಾಜನ್ ಅವರು ಮುಂಬಯಿ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ ಬಿಜೆಪಿಯು, ಕುಮ್ಮಾನಂ ರಾಜಶೇಖರನ್ ಅವರನ್ನು ಕಣಕ್ಕಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.