ನವದೆಹಲಿ: ಉಗ್ರರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತ ಮತ್ತು ವಿಶ್ವ ಸಮುದಾಯದಿಂದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ, ತಾನು ಉಗ್ರರ ವಿರುದ್ಧ ಕ್ರಮಗಳನ್ನು ಜರುಗಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ಥಾನದ ಪ್ರತಿಪಕ್ಷ ನಾಯಕ ಬಿಲಾವಲ್ ಭುಟ್ಟೋ ಅವರು, ಖಾನ್ ವಿರುದ್ಧ ಬೇರೆಯದ್ದೇ ರೀತಿಯ ಆರೋಪ ಮಾಡಿದ್ದಾರೆ. ಭಾರತದ ಯುದ್ಧ ವಿಮಾನಗಳಿಂದ ಉಗ್ರರನ್ನು ರಕ್ಷಿಸುವ ಸಲುವಾಗಿ ಕೆಲವೊಂದು ಉಗ್ರರನ್ನು ಗೃಹ ಬಂಧನದಲ್ಲಿ ಇಡಲಾಗಿದೆಯೇ ಹೊರತು ಬಂಧಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಅವರು ಆರೋಪಿ ಉಗ್ರರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಭುಟ್ಟೋ ಆರೋಪಿಸಿದ್ದಾರೆ, ‘ಖಾನ್ ಅವರು ಪದೇ ಪದೇ ಉಗ್ರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ಹಾಗನಿಸುತ್ತಿಲ್ಲ, ಭಾರತದ ಯುದ್ಧ ವಿಮಾನಗಳು ಅವರನ್ನು ಟಾರ್ಗೆಟ್ ಮಾಡಬಾರದು ಎಂಬ ಕಾರಣಕ್ಕೆ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿದೆಯೇ ಹೊರತು ಬಂಧಿಸಲಾಗಿಲ್ಲ. ಅವರ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಖಾನ್ ಹೇಳುತ್ತಾರೆ, ಆದರೆ ಹಾಗೇ ಮಾಡಲಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳುವುದು ಹೇಗೆ? ಇದಕ್ಕೆ ಸಾಕ್ಷಿ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಉಗ್ರರ ಸಹಾಯವನ್ನು ಪಡೆದುಕೊಂಡು ನೀವು ಚುನಾವಣೆಯನ್ನು ಗೆದ್ದುಕೊಂಡಿದ್ದೀರಿ, ಈಗ ಅವರನ್ನು ಸಮಾಜದ ಮುನ್ನಲೆಗೆ ತೆಗೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೀರಿ. ಆದರೆ ಕೇಳಿದಾಗ ಉಗ್ರರ ವಿರುದ್ಧ ಕ್ರಮ ಜರುಗಿಸುತ್ತಿದ್ದೇನೆ ಎಂದು ಹೇಳುತ್ತೀರಿ ಎಂದು ಭುಟ್ಟೋ ಇಮ್ರಾನ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.
ಬಿಲಾವಲ್ ಭುಟ್ಟೋ ಅವರು ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥನಾಗಿದ್ದಾರೆ. ಇವರು ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರನಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.