ನವದೆಹಲಿ: ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಭಾರತೀಯ ಸಂವಿಧಾನದ ಮೂಲ ಆಶಯಗಳು. ಸಮಾಜದ ಪ್ರತಿ ವರ್ಗಕ್ಕೂ ಸಮಾನವಾದ ಅವಕಾಶಗಳು ಸಿಗಬೇಕು ಎಂಬುದು ಸಂವಿಧಾನದ ನಂಬಿಕೆಯಾಗಿದೆ. ಸಂವಿಧಾನದ ಈ ಬದ್ಧತೆಗೆ ಅನುಗುಣವಾಗಿ, ಚುನಾವಣಾ ಆಯೋಗವು ಸಾಮಾಜಿಕ ಹೋರಾಟಗಾರ್ತಿ ಗೌರಿ ಸಾವಂತ್ ಅವರನ್ನು 2019ರ ಸಾರ್ವತ್ರಿಕ ಚುನಾವಣೆಯ ರಾಯಭಾರಿಯನ್ನಾಗಿಸಿದೆ. ಚುನಾವಣಾ ರಾಯಭಾರಿಯಾಗಿ ಆಯ್ಕೆಯಾದ ಮೊತ್ತ ಮೊದಲ ತೃತೀಯ ಲಿಂಗಿಯಾಗಿದ್ದಾರೆ ಗೌರಿ ಸಾವಂತ್.
ತೃತೀಯ ಲಿಂಗಿಗಳನ್ನು ಮೂರನೇ ಲಿಂಗವಾಗಿ ಪರಿಗಣಿಸಬೇಕು ಎಂದು 2013ರಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ನೀಡಿತ್ತು, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಇವರಿಗೂ ಸಿಗಬೇಕು ಎಂಬುದನ್ನು ಪ್ರತಿಪಾದಿಸಿತ್ತು. ಅಲ್ಲದೇ, ಅವರಿಗೆ ಹೆಣ್ಣು, ಗಂಡು ಮತ್ತು ತೃತೀಯ ಲಿಂಗದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ನೀಡಿತು. ಇದಕ್ಕೆ ಅನುಗುಣವಾಗಿ ಚುನಾವಣಾ ಆಯೋಗ ತೃತೀಯ ಲಿಂಗಿ ಗೌರಿ ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಗೌರಿ ಅವರು, ‘ಚುನಾವಣಾ ರಾಯಭಾರಿಗಳಲ್ಲಿ ಒಬ್ಬಳಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಅತೀವ ಖುಷಿಯಾಗುತ್ತಿದೆ. ಮತ ಹಾಕುವುದು ವ್ಯಕ್ತಿಗಳ ಸಾಂವಿಧಾನಿಕ ಹಕ್ಕು ಮಾತ್ರವಲ್ಲ, ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಮತ ಚಲಾಯಿಸಲು ಅರ್ಹತೆ ಪಡೆದುಕೊಂಡವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದು ಅತೀ ಮುಖ್ಯ’ ಎಂದಿದ್ದಾರೆ.
ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ತಮ್ಮ ‘ಸಖಿ ಚತಗ ಚೌವ್ಗಿ’ ತಂಡದ ಸದಸ್ಯರ ಜೊತೆ ಅವರು ನಗರಗಳಲ್ಲಿ ಸುತ್ತಾಡುತ್ತಾ ಮತದಾನದ ಬಗ್ಗೆ ಅರಿವು ಮೂಡಿಸುತ್ತಾರೆ. ಈ ಬಾರಿ ಚುನಾವಣಾ ಆಯೋಗ ಅವರಿಗೆ ಇನ್ನಷ್ಟು ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ.
ಪ್ರತಿ ಮಹಿಳೆಯರು, ತೃತೀಯ ಲಿಂಗಿಗಳು, ಲೈಂಗಿಕ ಕಾರ್ಯಕರ್ತೆಯರು ಹೋಗಿ ಮತದಾನ ಮಾಡಬೇಕು, ಅದು ಅವರಿಗೆ ಸಿಕ್ಕ ಹಕ್ಕು. ಅದನ್ನು ಅವರು ತಪ್ಪಿಸಿಕೊಳ್ಳಬಾರದು ಎಂದು ಗೌರಿ ಸಂದೇಶ ಸಾರಿದ್ದಾರೆ.
ಗೌರಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತೃತೀಯ ಲಿಂಗಿಗಳು ಮತದಾನಕ್ಕೆ ಹೆಸರು ನೋಂದಾಯಿಸಿಕೊಳ್ಳುವ ಮನಸ್ಸು ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಸ್ತುತ ದೇಶದಲ್ಲಿ 2,086 ನೋಂದಾಯಿತ ತೃತೀಯ ಲಿಂಗಿ ಮತದಾರರಿದ್ದಾರೆ. 2014ರಲ್ಲಿ ಕೇವಲ 918 ಮಂದಿ ಇದ್ದರು. ಅದಕ್ಕೂ ಮೊದಲಿನ ಚುನಾವಣೆಗಳಲ್ಲಿ ಇವರಿಗೆ ಮತದಾನ ಮಾಡುವ ಹಕ್ಕು ಇರಲಿಲ್ಲ.
ಸಮಾಜದ ಉತ್ತಮ ಸುದ್ದಿಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹಿಸಿ, ಸ್ವೀಕರಿಸಿ. ನೀವು ಸ್ವೀಕರಿಸಿದಾಗ ನಾವು ಬೆಳೆಯಬಹುದು. ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.