ನವದೆಹಲಿ: ತನ್ನ ಮನೆ ಮೇಲೆ ಮೂವರು ಉಗ್ರವಾದಿಗಳ ತಂಡ ನಡೆಸಿದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದ ಜಮ್ಮು ಕಾಶ್ಮೀರದ 14 ವರ್ಷದ ಬಾಲಕ ಇರ್ಫಾನ್ ರಂಜಾನ್ ಶೇಖ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಶೌರ್ಯ ಚಕ್ರ ಪ್ರಶಸ್ತಿಯನ್ನು ಪ್ರದಾನಿಸಿದರು.
ಬಾಲಕನ ತಂದೆ ರಾಜಕಾರಣಿಯಾಗಿದ್ದು, ಇವರ ಮೇಲೆ ದಾಳಿ ನಡೆಸಲು ಉಗ್ರರು ಈತನ ಮನೆಗೆ ನುಗ್ಗಿದ್ದರು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಬಾಲಕ ಅವರೊಂದಿಗೆ ಹೋರಾಟಕ್ಕಿಳಿದು ಓರ್ವನನ್ನು ಬಲವಾಗಿ ಘಾಸಿಗೊಳಿಸಿದ್ದ, ತಕ್ಷಣ ವಿಚಲಿತರಾಗಿದ್ದ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದರು. ಈ ಹಿನ್ನೆಲೆಯಲ್ಲಿ ಇರ್ಫಾನ್ ರಂಜಾನ್ ಶೇಖ್ಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸವನ್ನು ತೋರಿಸಿದ್ದ ಭಾರತೀಯ ಸೇನೆಯ ಸಿಪಾಯಿ ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳು ಇಂದು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ಪ್ರದಾನಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಂದರ್ಭ ಅಪ್ರತಿಮ ಸಾಹಸವನ್ನು ತೋರಿಸಿದ್ದ ಸಿಆರ್ಪಿಎಫ್ನ ಕಾನ್ಸ್ಸ್ಟೇಬಲ್ ಪ್ರದೀಪ್ ಕುಮಾರ್ ಪಾಂಡ ಅವರಿಗೂ ಕೀರ್ತಿ ಚಕ್ರವನ್ನು ಪ್ರದಾನಿಸಲಾಗಿದೆ.
ಲೆಫ್ಟಿನೆಂಟ್ ಜನರಲ್ ಅನಿಲ್ ಭಟ್ ಅವರಿಗೆ, ‘ಉತ್ತಮ್ ಯೋಧ ಮೆಡಲ್’ ನೀಡಿ ಪುರಸ್ಕರಿಸಲಾಯಿತು. ಜಮ್ಮು ಕಾಶ್ಮೀರದಲ್ಲಿ ಯಶಸ್ವಿಯಾಗಿ ಉಗ್ರ ವಿರೋಧಿ ಕಾರ್ಯಾಚರಣೆ ನಡೆಸಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ವರ್ಷ ರಾಷ್ಟ್ರಪತಿಗಳು 411 ಶೌರ್ಯ ಪ್ರಶಸ್ತಿಗಳಿಗೆ ಮತ್ತು ಇತರ ಸೇನಾ ಪ್ರಶಸ್ತಿಗಳಿಗೆ ಅನುಮೋದನೆಯನ್ನು ನೀಡಿದ್ದಾರೆ. ಇದರಲ್ಲಿ ಕೆಲವನ್ನು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರದಾನಿಸಲಾಗಿದೆ.
1 ಅಶೋಕ ಚಕ್ರ, 4 ಕೀರ್ತಿ ಚಕ್ರ, 11 ಶೌರ್ಯ ಚಕ್ರ, 28 ಪರಮ್ ವಿಶಿಷ್ಟ್ ಸೇವಾ ಮೆಡಲ್, 3 ಉತ್ತಮ್ ಯೋಧ ಸೇವಾ ಮೆಡಲ್, 51 ಅತಿ ವಿಶಿಷ್ಟ್ ಸೇವಾ ಮೆಡಲ್ಗಳನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.