ಪಣಜಿ: ಅಗಲಿದ ಧೀಮಂತ ನಾಯಕ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಪಾರ್ಥಿವ ಶರೀರವನ್ನು ಇಂದು ಗೋವಾದ ಬಿಜೆಪಿ ಕಛೇರಿಯಲ್ಲಿ ಇಡಲಾಗಿತ್ತು. ಬಳಿಕ ಸಾರ್ವಜನಿಕರ ದರ್ಶನಕ್ಕಾಗಿ ಪಣಜಿಯ ಕಲಾ ಅಕಾಡಮಿಯಲ್ಲಿ ಇಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅಗಲಿದ ನಾಯಕನಿಗೆ ಅಂತಿಮ ನಮನವನ್ನು ಸಲ್ಲಿಸಿದರು ಮತ್ತು ಅವರ ಕುಟುಂಬ ಸದಸ್ಯರಿಗೆ ಸಾಂತ್ವನವನ್ನು ಹೇಳಿದರು.
ಮಧ್ಯಾಹ್ನ 1.30ರ ಸುಮಾರಿಗೆ ಪಣಜಿಗೆ ಮೋದಿಯವರು ಆಗಮಿಸಿ, ಪರಿಕ್ಕರ್ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ನೀಡಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ವೇಳೆ ಉಪಸ್ಥಿತರಿದ್ದರು. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಅಂತಿಮ ನಮನದ ವೇಳೆ ಭಾವುಕರಾಗಿದ್ದು ಕಂಡು ಬಂತು. ಕೇಂದ್ರದ ವಿವಿಧ ಸಚಿವರುಗಳು, ಬಿಜೆಪಿ ಸಿಎಂಗಳು ಅಂತಿಮ ಗೌರವಾರ್ಪಣೆಯನ್ನು ಮಾಡಿದರು.
ಕಲಾ ಅಕಾಡಮಿಯಿಂದ ಮಿರಾಮಾರ್ವರೆಗೆ ಪಾರ್ಥಿವ ಶರೀರವನ್ನು ಮೆರವಣಿಯಲ್ಲಿ ಕೊಂಡೊಯ್ದು ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುತ್ತದೆ. 63 ವರ್ಷದ ಪರಿಕ್ಕರ್ ಅವರು ಮೇದೋಜೀರಕ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ನಿನ್ನೆ ಅವರು ಕೊನೆಯುಸಿರೆಳೆದರು. ಅವರ ಅಗಲುವಿಕೆಯನ್ನು ರಾಷ್ಟ್ರಪತಿಗಳ ಟ್ವಿಟರ್ ಮೂಲಕ ಮೊದಲು ಖಚಿತಪಡಿಸಲಾಯಿತು. ಬಳಿಕ ಪರಿಕ್ಕರ್ ಕಛೇರಿ ಟ್ವಿಟರ್ನಲ್ಲಿ ವಿಷಯವನ್ನು ಸ್ಪಷ್ಟಪಡಿಸಿತು.
ಮಾಜಿ ರಕ್ಷಣಾ ಸಚಿವರೂ ಆಗಿರುವ, ಸಿಎಂ ಪರಿಕ್ಕರ್ ಅವರ ನಿಧನದ ಹಿನ್ನಲೆಯಲ್ಲಿ ಗೋವಾದಲ್ಲಿ 7 ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ. ಇಂದು ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.