ಮಣಿಪುರ: ರೈಲ್ವೇ ಲೈನ್ ನಿರ್ಮಾಣದ ಸಂದರ್ಭದಲ್ಲಿ, ಮಣಿಪುರದ ಇಜೈ ನದಿ ಮಾಲಿನ್ಯಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಭಾರತೀಯ ರೈಲ್ವೇ ಅತೀ ವಿಭಿನ್ನ ಸಮಗ್ರ ಯೋಜನೆಯೊಂದನ್ನು ಹಾಕಿಕೊಂಡಿದೆ. ನಿರ್ಮಾಣದ ವೇಳೆ ಸಾಮಾನ್ಯವಾಗಿ ನದಿಗೆ ಹಾಕಲಾಗುವ ತ್ಯಾಜ್ಯ ಮಣ್ಣಿನಿಂದ ಇಟ್ಟಿಗೆಗಳನ್ನು ನಿರ್ಮಿಸುವ ಕಾರ್ಯವನ್ನು ಅದು ಮಾಡುತ್ತಿದೆ. ಇದರಿಂದ ತ್ಯಾಜ್ಯ ಮಣ್ಣು ನದಿಗೆ ಸೇರುವುದು ತಪ್ಪುತ್ತಿದೆ.
ಮಣಿಪುರದ ನೋನಿ ಎಂಬಲ್ಲಿ ಇಜೈ ನದಿಗೆ ಅಡ್ಡಲಾಗಿ ಈ ರೈಲ್ವೇ ಲೈನ್ ನಿರ್ಮಾಣವಾಗುತ್ತಿದೆ, ಹೀಗಾಗಿ ಈ ಪ್ರದೇಶದ ಜನರ ನಿರೀಕ್ಷೆಗಳನ್ನು ತಲುಪುವಂತೆ ನಿರ್ಮಾಣ ಕಾಮಗಾರಿ ನಡೆಸಲು ರೈಲ್ವೇ ನಿರಂತರವಾದ ಪ್ರಯತ್ನಗಳನ್ನು ನಡೆಸುತ್ತಿದೆ. ಪ್ರಸ್ತುತ ಇಜೈ ನದಿ ಸಮೀಪದ ಸೌಲಭ್ಯವೊಂದರಲ್ಲಿ ತ್ಯಾಜ್ಯ ಮಣ್ಣಿನಿಂದ ದಿನಕ್ಕೆ ಸಾವಿರಾರು ಇಟ್ಟಿಗೆಗಳನ್ನು ತಯಾರಿಸಲಾಗುತ್ತಿದೆ. ಇದು ರೈಲ್ವೇಗೆ ಲಾಭದಾಯಕವಾಗಿಯೂ ಪರಿಣಮಿಸಿದೆ.
ನಿರ್ಮಾಣ ಸಂದರ್ಭದಲ್ಲಿ ಮಣ್ಣಿನ ತ್ಯಾಜ್ಯಗಳನ್ನು ನದಿಗೆ ಹಾಕುತ್ತಿರುವುದಕ್ಕೆ ಸ್ಥಳಿಯರು ವಿರೋಧವನ್ನು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ರೈಲ್ವೇ ಈ ವಿಭಿನ್ನ ಯೋಜನೆಯನ್ನು ಹಾಕಿಕೊಂಡಿದೆ. ನೋನಿಯ ಜನರು ಇಜೈ ನದಿ ನೀರನ್ನು ನೇರವಾಗಿ ಬಳಸಿಕೊಳ್ಳುತ್ತಿದ್ದಾರೆ.
111 ಕಿ.ಮೀ. ಉದ್ದದ ರೈಲ್ವೇ ಲೈನ್ ಇದಾಗಿದ್ದು, ಜಿರ್ಬಾಮ್-ಟಫುಲ್-ಇಂಫಾಲಕ್ಕೆ ನೇರವಾದ ಸಂಪರ್ಕವನ್ನು ಕಲ್ಪಿಸಲಿದೆ. ಈ ರೈಲ್ವೇ ಲೈನ್ 63.2 ಕಿ.ಮೀ. ಉದ್ದವನ್ನು ಒಳಗೊಂಡ 47 ಸುರಂಗಗಳನ್ನು ಹೊಂದಿದೆ ಮತ್ತು 131 ಸೇತುವೆಗಳನ್ನು ಒಳಗೊಂಡಿದೆ. 2020ರ ವೇಳೆಗೆ ಇದರ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ರೈಲ್ವೆ ಲೈನ್ನ ತ್ಯಾಜ್ಯ ಮಣ್ಣಿನಿಂದ ದಿನಕ್ಕೆ 3 ಸಾವಿರ ಇಟ್ಟಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಇಟ್ಟಿಗೆಗಳನ್ನು ರೈಲ್ವೇ ಇತರ ನಿರ್ಮಾಣ ಕಾರ್ಯ ಮತ್ತು ನಿರ್ವಹಣೆಗಳಿಗೆ ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.