ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಅತ್ಯಂತ ಮಹತ್ವಪೂರ್ಣ ಯೋಜನೆಯಾದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ಧನ್ ಯೋಜನೆಗೆ ಚಾಲನೆಯನ್ನು ನೀಡಿದರು.
ಈ ಯೋಜನೆಯನ್ನು ಫೆಬ್ರವರಿ ತಿಂಗಳ ಮಧ್ಯಂತರ ಬಜೆಟ್ನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಘೋಷಣೆ ಮಾಡಲಾಗಿತ್ತು. ಈ ಯೋಜನೆಯಡಿಯಲ್ಲಿ ಅಸಂಘಟಿತ ವಲಯದ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ಮೂರು ಸಾವಿರ ರೂಪಾಯಿಗಳ ಪಿಂಚಣಿ ದೊರೆಯಲಿದೆ. ಇದೇ ವೇಳೆ ಪ್ರಧಾನಿಯವರು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ಧನ್ ಪಿಂಚಣಿ ಕಾರ್ಡ್ಗಳನ್ನು ಆಯ್ದ ಫಲಾನುಭವಿಗಳಿಗೆ ವಿತರಿಸಿದರು.
ನಂತರ ಮಾತನಾಡಿದ ಪ್ರಧಾನಿಯವರು, ಈ ಯೋಜನೆಯು ಕಳೆದ ಐದು ವರ್ಷಗಳಲ್ಲಿ ಸರಕಾರ ಅನುಷ್ಠಾನಗೊಳಿಸಿದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ವಿಸ್ತರಣೆ ಆಗಿದೆ. 42 ಕೋಟಿ ಕಾರ್ಮಿಕ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂದರು.
ತಿಂಗಳಿಗೆ 25 ರೂಪಾಯಿಗಳಿಂದ 200 ರೂಪಾಯಿಗಳನ್ನು ಪಾವತಿಸುವ ಮೂಲಕ 60 ವರ್ಷದ ಬಳಿಕ ಮಾಸಿಕ 3 ಸಾವಿರದವರೆಗೆ ಪಿಂಚಣಿಯನ್ನು ಈ ಯೋಜನೆಯಡಿ ಪಡೆಯಬಹುದಾಗಿದೆ. ಎನ್ಡಿಎ ಸರಕಾರವು ಬಡವರು ಮತ್ತು ಕಾರ್ಮಿಕರಿಗೆ ಕೈಗೆಟಕುವ ಆರೋಗ್ಯ ಸೇವೆ ಮತ್ತು ವಿಮಾ ಸಂರಕ್ಷಣೆ ದೊರಕುವುದನ್ನು ಖಚಿತ ಮಾಡಿದೆ ಎಂದರು. ಎನ್ಡಿಎ ಸರಕಾರವು ರೈತರ ಮತ್ತು ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಕಟಿಬದ್ಧವಾಗಿದೆ. ನಮ್ಮ ಸರಕಾರವನ್ನು ದೂಷಣೆ ಮಾಡುವುದೇ ಪ್ರತಿಪಕ್ಷಗಳ ಏಕೈಕ ಧ್ಯೇಯ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಗಾಂಧಿ ನಗರದ ಅಡ್ಲಾಜಿಯ ಅನ್ನಪೂರ್ಣ ಧಾಮ ದೇಗುಲದಲ್ಲಿ ಮಾತನಾಡಿದ ಅವರು ರೈತರು ಮತ್ತು ಸೈನಿಕರ ಕೈಯಲ್ಲಿ ನಮ್ಮ ದೇಶ ಸುಭದ್ರವಾಗಿದೆ ಎಂದರು. ಧಾರ್ಮಿಕ ಸಾಂಸ್ಕೃತಿಕ ಮತ್ತು ಸಮುದಾಯ ಸಂಸ್ಥೆಗಳು ಪ್ರಕೃತಿ ಸಂರಕ್ಷಣೆಯಲ್ಲಿ ಮತ್ತು ಸಾಮಾಜಿಕ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ ಎಂದರು. ಅನ್ನಪೂರ್ಣ ಧಾಮದಂತಹ ಧಾರ್ಮಿಕ ಸಂಘಟನೆಗಳು ಪ್ರಕೃತಿಯ ಸಂರಕ್ಷಣೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಅತ್ಯಂತ ಸಂತೋಷದ ಕಾರ್ಯ ಎಂದರು. ಅಲ್ಲದೆ ಪ್ರಸಾದದ ರೂಪದಲ್ಲಿ ಗಿಡಗಳನ್ನು ಭಕ್ತಾದಿಗಳಿಗೆ ಹಂಚುವಂತೆ ಅವರು ಟ್ರಸ್ಟಿಗಳಿಗೆ ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.