ನವದೆಹಲಿ: ಎಲ್ಒಸಿಯನ್ನು ದಾಟಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಟಾರ್ಗೆಟ್ ಮಾಡಿಕೊಂಡು ಭಾರತ ವೈಮಾನಿಕ ದಾಳಿಯನ್ನು ನಡೆಸಿದೆ, ಈ ದಾಳಿಯಲ್ಲಿ ಬಲಕೋಟ್ನಲ್ಲಿನ ಜೈಶೇಯ ಅತೀದೊಡ್ಡ ಶಿಬಿರ ಧ್ವಂಸವಾಗಿದೆ, ಭಾರತದ ವಿರುದ್ಧ ಮತ್ತಷ್ಟು ದಾಳಿಗಳಿಗೆ ಸಂಚು ರೂಪಿಸಿದ್ದ ಅದರ ಕಮಾಂಡರ್ಗಳು, ತರಬೇತುದಾರರು, ಉಗ್ರರು, ಜಿಹಾದಿಗಳು ಹತ್ಯೆಯಾಗಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
ಇದು ಭಾರತದ ‘ಮಿಲಿಟರಿಯೇತರ ಪೂರ್ವಭಾವಿ ಕ್ರಮ(non-military preemptive action ) ಎಂದು ಗೋಖಲೆ ಬಣ್ಣಿಸಿದ್ದು, ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಟಾರ್ಗೆಟ್ ಮಾಡಿಕೊಂಡು ಈ ವೈಮಾನಿಕ ದಾಳಿಯನ್ನು ನಡೆಸಲಾಗಿದೆ ಎಂದಿದ್ದಾರೆ. ಪುಲ್ವಾಮದಲ್ಲಿ ನಡೆದ ದಾಳಿಗೆ ಈ ಸಂಘಟನೆ ಮುಖ್ಯ ಕಾರಣವಾಗಿತ್ತು.
‘ಭಾರತದ ವಿವಿಧೆಡೆ ಮತ್ತಷ್ಟು ಆತ್ಮಾಹುತಿ ದಾಳಿಯನ್ನು ನಡೆಸಲು ಜೈಶೇ ಇ ಮೊಹಮ್ಮದ್ ಸಂಘಟನೆ ಸಂಚು ರೂಪಿಸುತ್ತಿದೆ ಎಂಬ ಮಾಹಿತಿ ನಮಗೆ ಲಭಿಸಿತ್ತು. ಇದಕ್ಕಾಗಿ ಫಿದಾಯಿನ್ಗಳನ್ನು ತರಬೇತುಗೊಳಿಸಲಾಗುತ್ತಿತ್ತು’ ಎಂದಿದ್ದಾರೆ.
‘ಜೈಶೇ ಸಂಘಟನೆಯ ಇರುವಿಕೆಯ ಬಗ್ಗೆ, ಅಲ್ಲಿ ಅವರು ದೊಡ್ಡ ಮಟ್ಟದ ಶಿಬಿರವನ್ನು ನಡೆಸಿ ಭಾರತದ ವಿರುದ್ಧ ಕಾರ್ಯಾಚರಣೆಯನ್ನು ನಡೆಸುವ ಬಗ್ಗೆ ಹಲವಾರು ಬಾರಿ ಮಾಹಿತಿಯನ್ನು ನೀಡಿದ್ದೇವೆ. ಆದರೆ ಪಾಕಿಸ್ಥಾನದ ನಿರ್ಲಕ್ಷ್ಯದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ವೈಮಾನಿಕ ದಾಳಿ ನಡೆಸಬೇಕಾಯಿತು’ ಎಂದು ಗೋಖಲೆ ಹೇಳಿದ್ದಾರೆ.
ಬೆಳಗ್ಗೆ 3.30ರ ಸುಮಾರಿಗೆ ವಾಯುಸೇನೆಯ 12 ಮಿರಾಜ್ ಫೈಟರ್ ಜೆಟ್ಗಳು ಜೈಶೇ ಇ ಮೊಹಮ್ಮದ್, ಲಷ್ಕರ್ ಇ ತೋಯ್ಬಾ, ಹಿಜ್ಬುಲ್ ಮುಜಾಹಿದ್ದೀನ್ ಶಿಬಿರವಿದ್ದ ಪ್ರದೇಶದ ಮೇಲೆ 1 ಸಾವಿರ ಕೆಜಿ ಬಾಂಬ್ನ್ನು ಎಸೆದಿವೆ. ಈ ದಾಳಿ ಶೇ.100ರಷ್ಟು ಯಶಸ್ವಿಯಾಗಿದ್ದು, ಎಲ್ಲವೂ ಯೋಜನೆಯಂತೆ ನಡೆದಿವೆ. ಸುಮಾರು 200-300 ಉಗ್ರರು ಹತರಾಗಿರುವ ನಿರೀಕ್ಷೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.