ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಸವಾಲಿನ ಬಳಿಕ, ಶಾಂತಿಗೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದಾರೆ. ಪುಲ್ವಾಮ ದಾಳಿಯ ಬಗೆಗಿನ ಕ್ರಿಯಾಶೀಲ ಗುಪ್ತಚರವನ್ನು ಭಾರತ ನೀಡಿದರೆ ತಪ್ಪಿತಸ್ಥರನ್ನು ಶಿಕ್ಷಿಸುವುದಾಗಿ ಹೇಳಿಕೊಂಡಿದ್ದಾರೆ.
ಇಮ್ರಾನ್ ಖಾನ್ಗೆ ಸವಾಲೊಡ್ಡಿದ್ದ ಮೋದಿ, ಇಮ್ರಾನ್ ಅವರು ಒಂದು ವೇಳೆ ‘ಪಠಾಣ್’ಗಳ ಪುತ್ರನೇ ಆದರೆ ದಾಳಿಯ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಿ, ನ್ಯಾಯ ದೊರಕಿಸಿಕೊಡಲಿ ಎಂದಿದ್ದರು. ಇಮ್ರಾನ್ ಅವರು ಚುನಾವಣೆಯಲ್ಲಿ ಗೆದ್ದ ಬಳಿಕ ತನ್ನೊಂದಿಗೆ ಮಾತನಾಡಿದ ಕ್ಷಣವನ್ನು ನೆನಪು ಮಾಡಿಕೊಂಡ ಮೋದಿ, ’ಒಟ್ಟಿಗೆ ಬಡತನ ಮತ್ತು ಅನಕ್ಷರತೆಯ ವಿರುದ್ಧ ಹೋರಾಡೋಣ, ನಾನು ಪಠಾನ್ ಪುತ್ರನಾಗಿದ್ದು ನುಡಿದಂತೆ ನಡೆದುಕೊಳ್ಳುತ್ತೇನೆ ಎಂದು ಇಮ್ರಾನ್ ಹೇಳಿದ್ದರು. ಅವರು ಒಂದು ವೇಳೆ ಪಠಾನ್ ಪುತ್ರನೇ ಆಗಿದ್ದರೆ ದಾಳಿಕೋರರ ವಿರುದ್ಧ ಕ್ರಮ ಜರುಗಿಸಲಿ’ ಎಂದಿದ್ದಾರೆ. ಪಠಾನ್ಗಳು ಇರಾನ್ ಮೂಲದ ಜನಾಂಗದ ಬೇರನ್ನು ಹೊಂದಿದ್ದು, ಸ್ವಾಭಿಮಾನ ಮತ್ತು ಗೌರವಕ್ಕೆ ಹೆಸರಾಗಿದೆ.
ರಾಜಸ್ಥಾನದಲ್ಲಿ ಮಾತನಾಡಿದ ಮೋದಿ, ‘ಭಯೋತ್ಪಾದನೆಯ ವಿರುದ್ಧ ಇಡೀ ವಿಶ್ವವೇ ಎಚ್ಚರಿಕೆಯಿಂದಿದೆ, ಭಯೋತ್ಪಾದಕರಿಗೆ ಶಿಕ್ಷಿಸಲು ಮುಂದಾಗುತ್ತಿದ್ದೇವೆ. ಇದು ಬದಲಾದ ಭಾರತ, ನೋವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಭಯೋತ್ಪಾದನೆಯನ್ನು ಹೇಗೆ ಶಿಕ್ಷಿಸಬೇಕು ಎಂಬುದು ನಮಗೆ ತಿಳಿದಿದೆ’ ಎಂದಿದ್ದಾರೆ.
ಮೋದಿ ಸವಾಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನ, ಭಾರತ ದಾಳಿಯ ಬಗ್ಗೆ ಕ್ರಿಯಾಶೀಲ ಗುಪ್ತಚರವನ್ನು ನೀಡಿದರೆ ಕ್ರಮ ಜರುಗಿಸಲು ಸಿದ್ಧರಿದ್ದೇವೆ ಎಂದಿದೆ.
ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ, ‘ಜೈಶೇ ಇ ಮೊಹಮ್ಮದ್ ಮತ್ತು ಅದರ ನಾಯಕ ಮಸೂದ್ ಅಝರ್ ಪಾಕಿಸ್ಥಾನದಲ್ಲೇ ಇದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಪಾಕಿಸ್ಥಾನಕ್ಕೆ ಕ್ರಮ ಜರುಗಿಸಲು ಈ ಸಮರ್ಥ ಸಾಕ್ಷಿಯೇ ಸಾಕು’ ಎಂದಿದೆ.
“26/11ರ ಮುಂಬಯಿ ದಾಳಿಯ ಬಳಿಕ ಪಾಕಿಸ್ಥಾನಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಲಾಗಿದೆ. ಆದರೂ ಕಳೆದ 10 ವರ್ಷಗಳಿಂದ ಈ ಪ್ರಕರಣ ಯಾವುದೇ ಪ್ರಗತಿಯನ್ನು ಕಂಡಿಲ್ಲ. ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ವಿಷಯವೂ ಅಷ್ಟೇ. ಕ್ರಮ ಜರುಗಿಸುವ ಬಗ್ಗೆ ಪಾಕಿಸ್ಥಾನ ನೀಡಿರುವ ಭರವಸೆ ನಾಟಕೀಯ ಎಂಬುದು ಅದರ ಟ್ರ್ಯಾಕ್ ರೆಕಾರ್ಡ್ನಿಂದಲೇ ತಿಳಿಯುತ್ತದೆ’ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.