ಇಸ್ಲಾಮಾಬಾದ್: ಪುಲ್ವಾಮ ದಾಳಿಯ ಬಳಿಕ ಭಾರತ ತೋರಿಸುತ್ತಿರುವ ಪ್ರತಿರೋಧಕ್ಕೆ ಪಾಕಿಸ್ಥಾನ ನಲುಗಿ ಹೋಗಿದೆ. ಇದೇ ಕಾರಣಕ್ಕೆ ಈಗ, 2008ರ ಮುಂಬಯಿ ದಾಳಿ ಮಾಸ್ಟರ್ ಮೈಂಡ್ ಹಫೀಝ್ ಸೈಯದ್ ನೇತೃತ್ವದ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಮತ್ತು ಅದರ ಫಲ್ಹಾ ಇ ಇನ್ಸಾನಿಯತ್ ಫೌಂಡೇಶನನ್ನು ನಿಷೇಧಿಸಿದೆ. ಈ ಮೂಲಕ ಜಗತ್ತಿನ ಮುಂದೆ ತಾನು ಸಾಚಾ ಎನಿಸಿಕೊಳ್ಳುವ ಪ್ರಯತ್ನ ನಡೆಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ದೇಶದ ರಾಷ್ಟ್ರೀಯ ಭದ್ರತಾ ಸಮಿತಿಯೊಂದಿಗೆ ಸಭೆಯನ್ನು ನಡೆಸಿದ ಬಳಿಕ ಜಮಾದ್ ಉದ್ ದಾವಾ ಮತ್ತು ಇನ್ಸಾನಿಯತ್ ಫೌಂಡೇಶನನ್ನು ನಿಷೇಧ ಮಾಡಲಾಗಿದೆ.
2008ರ ಮುಂಬಯಿ ದಾಳಿಯ ಬಳಿಕ ಹಫೀಝ್ ಸೈಯದ್ ಮತ್ತು ಆತನ ಸಂಘಟನೆ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಭಾರತ ಪಾಕಿಸ್ಥಾನದ ಮೇಲೆ ಒತ್ತಡವನ್ನು ತರುತ್ತಲೇ ಇದೆ. ಆದರೆ ಇದುವರೆಗೆ ಮೌನವಾಗಿದ್ದ ಆ ದೇಶ, ಇದೀಗ ಪುಲ್ವಾಮ ದಾಳಿಯ ಬಳಿಕ ಇಡೀ ಜಗತ್ತು ತನ್ನತ್ತ ಆಕ್ರೋಶದ ದೃಷ್ಟಿಯನ್ನು ಬೀರುತ್ತಿರುವ ಸಂದರ್ಭ ಎಚ್ಚೆತ್ತುಕೊಂಡು ಜಮಾತ್ ಮತ್ತು ಇನ್ಸಾನಿಯತ್ನ್ನು ನಿಷೇಧಿಸಿದೆ.
ಆದರೆ ಈ ನಿಷೇಧವನ್ನು ಪಾಕಿಸ್ಥಾನ ಎಷ್ಟು ಕಟ್ಟುನಿಟ್ಟಿನಲ್ಲಿ ಅನುಷ್ಠಾನಕ್ಕೆ ತರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಈ ಸಂಘಟನೆಗಳ ಮುಖಂಡರು ರಾಜಕೀಯ ಪ್ರಭಾವವನ್ನೂ ಹೊಂದಿದ್ದಾರೆ. ಎದುರಲ್ಲಿ ನಿಷೇಧ ತಂತ್ರ ಅನುಸರಿಸಿ, ಒಳಗೊಳಗಿಂದ ಅವರಿಗೆ ಬೆಂಬಲ ನೀಡುವ ಕಾರ್ಯವನ್ನು ಈ ರಾಷ್ಟ್ರ ಮಾಡಿದರೂ ಅಚ್ಚರಿಯಿಲ್ಲ.
ಪಾಕಿಸ್ಥಾನ ನೆಲದಲ್ಲೇ ಹುಟ್ಟಿ ಬೆಳೆದ ಜೈಶೇ ಮೊಹಮ್ಮದ್ ಸಂಘಟನೆ ಪುಲ್ವಾಮ ದಾಳಿಯನ್ನು ನಡೆಸಿದೆ. ಈ ಸಂಘಟನೆಯನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಲು ಆ ರಾಷ್ಟ್ರ ಇನ್ನೂ ಮುಂದಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.