ನವದೆಹಲಿ: ರಫೆಲ್ ಒಪ್ಪಂದವನ್ನು ಬಳಸಿ ಕಾಂಗ್ರೆಸ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ. ಫ್ರೆಂಚ್ ಮಾಜಿ ಅಧ್ಯಕ್ಷರ ಹೇಳಿಕೆಯನ್ನು ಹಿಡಿದುಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಕುಟುಕುತ್ತಿದ್ದಾರೆ ಮತ್ತು ರಫೆಲ್ ಒಪ್ಪಂದ ರದ್ಧತಿಗೆ ಆಗ್ರಹಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಆ ಪಕ್ಷಕ್ಕೆಯೇ ತಿರುಗು ಬಾಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
‘ಎನ್ಡಿಟಿವಿ’ಯು ಡೆಸಾಲ್ಟ್ ಕಂಪನಿಯ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಸಾಲದಲ್ಲಿದ್ದರೂ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಸಂಸ್ಥೆಗೆ ಒಪ್ಪಂದದಲ್ಲಿ ಆದ್ಯತೆ ಸಿಗಲು ಕಾರಣವೇನೆಂಬುದನ್ನು ವಿವರಿಸಿದೆ.
ರಫೆಲ್ನ ಭಾರತೀಯ ಸಹವರ್ತಿಯಾಗಿ ರಿಲಾಯನ್ಸ್ನ್ನು ಪರಿಗಣಿಸುವಂತೆ ಭಾರತ ಸರ್ಕಾರದಿಂದ ಯಾವುದೇ ಒತ್ತಡಗಳು ಇರಲಿಲ್ಲ. ಅನಿಲ್ ಅಂಬಾನಿ ಕಂಪನಿ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ನೋಂದಣಿಯಾಗಿದ್ದು ಮತ್ತು ನಾಗ್ಪುರದಲ್ಲಿ ರನ್ವೇ ಸಮೀಪ ಸಾಕಷ್ಟು ಭೂಮಿ ಹೊಂದಿದ್ದು ರಫೆಲ್ ಅವಕಾಶ ಅದಕ್ಕೆ ಸಿಗಲು ಪ್ರಮುಖ ಕಾರಣವಾಗಿದೆ. 2015ರಲ್ಲಿ ಸಂಸ್ಥೆ ಮುಖೇಶ್ ಅಂಬಾನಿಯಿಂದ ಅನಿಲ್ ಅಂಬಾನಿ ಕೈಗೆ ಬಂದ ಬಳಿಕ ಸಹಭಾಗಿತ್ವದ ಮಾತುಕತೆ ಆರಂಭಗೊಂಡಿತ್ತು. 2015ರಲ್ಲಿ ಬೆಂಗಳೂರು ಏರ್ ಶೋ ಸಂದರ್ಭ ಒಪ್ಪಂದ ಅಂತಿಮಗೊಂಡಿತ್ತು. ಎರಡು ತಿಂಗಳ ಬಳಿಕ ಮೋದಿ ಪ್ಯಾರೀಸ್ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು ಎಂದು ಡೆಸಾಲ್ಟ್ನ ಪ್ರತಿನಿಧಿಯೋರ್ವರು ತಿಳಿಸಿದ್ದಾಗಿ ವರದಿ ಮಾಡಲಾಗಿದೆ.
ಇನ್ನೊಂದೆಡೆ ಕಾಂಗ್ರೆಸ್ ರಫೆಲ್ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದಕ್ಕೆ ಹಲವಾರು ಕಾರಣಗಳನ್ನು ಬಿಜೆಪಿ ನೀಡಿದೆ. ಮೋದಿ ಸರ್ಕಾರ ಮತ್ತು ರಕ್ಷಣಾ ವ್ಯವಸ್ಥೆಯ ವಿರುದ್ಧದ ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿ ರಾಹುಲ್ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಂಟಿ ಸಂಸದೀಯ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಒತ್ತಾಯವನ್ನು ತಿರಸ್ಕರಿಸಿರುವ ಅವರು, ದೇಶದ ರಕ್ಷಣಾ ವ್ಯವಸ್ಥೆಯನ್ನು ಜಗತ್ತಿನ ಮುಂದೆ ತೆರೆದಿಡುವ ಇಂತಹ ಯಾವುದೇ ತನಿಖೆಯನ್ನು ನಾವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಚ್ಎಎಲ್ಗೆ ರಫೆಲ್ ಸಹಭಾಗಿತ್ವ ಪಡೆಯುವಷ್ಟು ಸಾಮರ್ಥ್ಯವಿಲ್ಲದ ಕಾರಣ ಸ್ವತಃ ಅದುವೇ ಒಪ್ಪಂದದಿಂದ ಹಿಂದೆ ಸರಿಯಿತು ಎಂದಿದ್ದಾರೆ. ಫ್ರೆಂಚ್ ಮಾಜಿ ಅಧ್ಯಕ್ಷರ ಮಾತಿಗೂ, ರಾಹುಲ್ ಮಾತಿಗೂ ತಾಳೆಯಾಗುತ್ತಿರುವುದು ಕಾಕತಾಳೀಯವಲ್ಲ, ಅದು ಅಂತಾರಾಷ್ಟ್ರೀಯ ಪಿತೂರಿಯ ಭಾಗ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಅಲ್ಲದೇ ರಫೆಲ್ ಒಪ್ಪಂದ ರದ್ದಾಗಬೇಕು ಎನ್ನುವುದರಲ್ಲಿ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಕೈವಾಡವೂ ಇದೆ ಎಂಬುದಾಗಿ ಕೃಷಿ ಸಚಿವ ಗಜೇಂದ್ರ ಶೇಖಾವತ್ ಆರೋಪಿಸಿದ್ದಾರೆ. ರಾಬರ್ಟ್ ಆಪ್ತ, ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಮೂಲಕ ಈ ಒಪ್ಪಂದ ನಡೆದಿಲ್ಲ ಎಂಬ ಕಾರಣಕ್ಕೆ ರಾಹುಲ್ ಒಪ್ಪಂದ ರದ್ದಾಗಬೇಕು ಎನ್ನುತ್ತಿದ್ದಾರೆ. ಯುಪಿಎ 126 ಯುದ್ಧ ವಿಮಾನ ಖರೀದಿ ಒಪ್ಪಂದದಿಂದ ಹಿಂದೆ ಸರಿಯಲು ವಾದ್ರಾ ಅವರೇ ಕಾರಣರಾಗಿದ್ದರು, ರಫೆಲ್ ಡೀಲ್ ರದ್ದಾಗಬೇಕು ಎನ್ನುತ್ತಿರುವ ಕಾಂಗ್ರೆಸ್ಗೆ ದೇಶದ ಭದ್ರತೆ, ರಕ್ಷಣಾ ವ್ಯವಸ್ಥೆಯ ಬಗ್ಗೆ ಚಿಂತಿಯಿಲ್ಲ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.