ನವದೆಹಲಿ: ‘ಸಂಘಕ್ಕೆ ಬಂದು ಅಲ್ಲೇನಿದೆ ಎಂಬುದನ್ನು ನೋಡಿ, ಹೊರಗಿನಿಂದ ನಿಂತು ಸಂಘವನ್ನು ಟೀಕಿಸುವವರ ಮಾತನ್ನು ನಂಬಿ ತೀರ್ಮಾನಕ್ಕೆ ಬರಬೇಡಿ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ‘ಭವಿಷ್ಯದ ಭಾರತ-ಆರ್ಎಸ್ಎಸ್ ದೃಷ್ಟಿಕೋನ’ ಎಂಬ ಮೂರು ದಿನಗಳ ಉಪನ್ಯಾಸ ಸರಣಿಯನ್ನು ಉದ್ದೇಶಿಸಿ ಸೋಮವಾರ ಅವರು ಮಾತನಾಡಿದರು.
‘ಹಿಂದುತ್ವದ ಮೂಲಕ ಒಗ್ಗಟ್ಟು’ ಆರ್ಎಸ್ಎಸ್ನ ಧ್ಯೇಯವಾಗಿದೆ. ಆರ್ಎಸ್ಎಸ್ ಎನ್ನುವುದು ಒಂದು ವ್ಯವಸ್ಥೆ, ಅದಕ್ಕೆ ಪರ್ಯಾಯ ಎಂಬುದಿಲ್ಲ, ಬೇರೆ ಸಂಘಟನೆಗಳೊಂದಿಗೆ ಅದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿತ್ವದ ಸುಧಾರಣೆಯಲ್ಲಿ ತೊಡಗುವುದು ಆರ್ಎಸ್ಎಸ್ನ ಕಾರ್ಯವಾಗಿದೆ. ನಾವು ಪ್ರಚಾರ ಬಯಸುವುದಿಲ್ಲ, ನಾವು ಹೇಳಿದ್ದನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಡವನ್ನೂ ಹಾಕುವುದಿಲ್ಲ. ನಮ್ಮ ವ್ಯವಸ್ಥೆ, ನಾವು ಮಾಡಿದ ಕಾರ್ಯವನ್ನು ನಿಮ್ಮ ಮುಂದಿಡುತ್ತೇವೆ ಅಷ್ಟೇ’ ಎಂದಿದ್ದಾರೆ.
‘ಸಂಘದ ಸದಸ್ಯನೆಂದರೆ ಆತ ಸಂಘದ ಸದಸ್ಯ ಅಷ್ಟೇ. ಆತ ಸಂಘದ ಹೊರಕ್ಕೆ ಏನು ಮಾಡಬೇಕು ಎಂದು ನಾವು ಹೇಳುವುದಿಲ್ಲ. ಆತ ವೃತ್ತಿ ಬದುಕಲ್ಲಿ ಏನು ಮಾಡುತ್ತಾನೋ ಅದು ಆತನಿಗೆ ಬಿಟ್ಟದ್ದು. ಆರ್ಎಸ್ಎಸ್ ಕಾರ್ಯಕರ್ತರು ಬದುಕಿನ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ನಾವು ಚಿಂತನೆಗಳ ವಿನಿಮಯಕ್ಕಾಗಿ ಚರ್ಚೆಗಳನ್ನು ನಡೆಸುತ್ತೇವೆ’ ಎಂದರು.
‘ಸಂಘ ಎಲ್ಲರಿಗೂ ಸೇರಿದ್ದಾಗಿದೆ, ಸಂಘವನ್ನು ವಿರೋಧಿಸುವವರಿಗೂ ಸಂಘ ಸೇರಿದೆ. ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಆರ್ಎಸ್ಎಸ್ಗೆ ಮುಖ್ಯವಲ್ಲ, ಯಾವ ನೀತಿಗಳನ್ನು, ಯಾವ ಯೋಜನೆಗಳನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದು ಈ ದೇಶದ ನಾಗರಿಕ ಹಕ್ಕಾಗಿದೆ’ ಎಂದರು.
ಇದೇ ವೇಳೆ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಯನ್ನು ಅವರು ಸ್ಮರಿಸಿದ ಅವರು, ಕಾಂಗ್ರೆಸ್ ದೇಶಕ್ಕೆ ಮಹೋನ್ನತ ನಾಯಕರನ್ನು ನೀಡಿದೆ ಎಂದಿದ್ದಾರೆ.
ಭಾರತ ವೈವಿಧ್ಯತೆಗಳ ದೇಶವಾಗಿದ್ದು, ಅದನ್ನು ಗೌರವಿಸಿ ಸಂಭ್ರಮಿಸಬೇಕು ಎಂದು ಈ ವೇಳೆ ಅವರು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.