ಮುಜಾಫರ್ನಗರ: ಅನಿವಾರ್ಯ ಕಾರಣದಿಂದ ಹಿಂದೂ ಸಮುದಾಯ ತೊರೆದು ಹೋದ ದೇಗುಲವನ್ನು ಕಳೆದ 26ವರ್ಷಗಳಿಂದ ಜೋಪಾನವಾಗಿ ಕಾಪಾಡುತ್ತಾ ಬಂದಿದ್ದಾರೆ ಮುಸ್ಲಿಂ ವ್ಯಕ್ತಿ. ಈ ಮೂಲಕ ಭಾತೃತ್ವದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ.
1992ರಲ್ಲಿ, ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಭುಗಿಲೆದ್ದ ಕೋಮುಗಲಭೆಗೆ ಬೆದರಿ ಉತ್ತರಪ್ರದೇಶದ ಮುಜಾಫರ್ನಗರದ ಲದ್ದೇವಾಲ ಗ್ರಾಮದ ಸುಮಾರು 20 ಹಿಂದೂ ಕುಟುಂಬಗಳು ಮನೆ ತೊರೆದು ಹೋಗಿದ್ದವು, ಈ ವೇಳೆ ಗ್ರಾಮದ ದೇಗುಲದಲ್ಲಿದ್ದ ಮೂರ್ತಿಯನ್ನೂ ತೆಗೆದುಕೊಂಡು ಹೋಗಿದ್ದವು. ಆದರೆ ದೇಗುಲದ ಕಟ್ಟಡ ಅನಾಥವಾಯಿತು.
ಆದರೆ 60ವರ್ಷದ ಮೆಹರ್ಬಾನ್ ಅಲಿ ಎಂಬುವವರು ದೇವರ ಮೂರ್ತಿಯಿಲ್ಲದ ಈ ದೇಗುಲವನ್ನು ಕಳೆದ 26 ವರ್ಷಗಳಿಂದ ಜೋಪಾನವಾಗಿ ನೊಡಿಕೊಳ್ಳುತ್ತಾ ಬಂದಿದ್ದಾರೆ. ಪ್ರತಿನಿತ್ಯ ಕಸಗುಡಿಸಿ ಇದನ್ನು ಶುದ್ಧ ಮಾಡುತ್ತಾರೆ. ಪ್ರಾಣಿ ಪಕ್ಷಗಳು ಇಲ್ಲಿ ವಾಸವಿರದಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ದೀಪಾವಳಿಗೆ ಊರಿನವರಿಂದ ಹಣ ಸಂಗ್ರಹಿಸಿ ವೈಟ್ವಾಶ್ ಮಾಡುತ್ತಾರೆ.
ಸುಮಾರು 30 ಮುಸ್ಲಿಂ ಕುಟುಂಬಗಳು ಈ ಗ್ರಾಮದಲ್ಲಿವೆ, ಒಂದಲ್ಲ ಒಂದು ದಿನ ಗ್ರಾಮ ತೊರೆದ ಹಿಂದೂಗಳು ವಾಪಾಸ್ ಬರುತ್ತಾರೆ ಎಂಬ ಬಲವಾದ ನಂಬಿಕೆ ಮೆಹರ್ಬಾನ್ ಅಲಿ ಅವರಿಗಿದೆ. ಅವರು ವಾಪಾಸ್ ಬಂದಾಗ ಈ ದೇಗುಲವನ್ನು ಅವರಿಗೆ ಹಸ್ತಾಂತರ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ.
ಗ್ರಾಮದಲ್ಲಿ ಹಿಂದೂಗಳು ಇಲ್ಲ ಎಂದು ದೇಗುಲವನ್ನು ನಶಿಸಲು ಬಿಟ್ಟರೆ, ನಮ್ಮನ್ನು ತೊರೆದು ಹೋದ ಹಿಂದೂಗಳಿಗೆ ನಮ್ಮ ಮೇಲಿನ ನಂಬಿಕೆಯೂ ಹೋಗುತ್ತದೆ ಎಂಬುದು ಅವರ ಅಭಿಪ್ರಾಯ.
ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚುವವರು ಮೆಹರ್ಬಾನ್ ಅಲಿ ಅವರ ಕಾರ್ಯದಿಂದ ನೋಡಿ ಕಲಿಯಬೇಕಾದುದು ಬಹಳಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.