ಪುಣೆ: ಗಣೇಶೋತ್ಸವ ಎಂದರೆ ಅದೊಂದು ಅದ್ಧೂರಿ ಸಮಾರಂಭ. ಸಂಘಟನೆ, ಯುವಕರು ಸೇರಿ ಹಣ ಸಂಗ್ರಹ ಮಾಡಿ ಗೌಜಿ ಗದ್ದಲದೊಂದಿಗೆ ಗಣಪನ ಆರಾಧನೆ ಮಾಡುತ್ತಾರೆ. ಆದರೆ ಯಾವಾಗಲೂ ಆಡಂಬರದೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದ ಪುಣೆಯ ಮಂಡಳವೊಂದು, ಈ ಬಾರಿ ಉದಾತ್ತ ಧ್ಯೇಯವೊಂದಕ್ಕೆ ಅತ್ಯಂತ ಸರಳ ಗಣೇಶೋತ್ಸವವನ್ನು ಮಾಡಿದೆ.
56 ವರ್ಷಗಳ ಹಿಂದೆ ರಚನೆಯಾದ ನವಶಕ್ತಿ ಮಿತ್ರ ಮಂಡಳ, ಪ್ರತಿವರ್ಷ ಶಾಸ್ತ್ರೀ ರೋಡ್ನಲ್ಲಿ ಪೆಂಡಾಲ್ ಹಾಕಿ ವಿಜ್ರಂಭಣೆಯ ಗಣಪತಿ ಉತ್ಸವ ಮಾಡುತ್ತಿತ್ತು, ಆದರೆ ಈ ಬಾರಿ ಸಣ್ಣ ಪ್ರದೇಶವೊಂದರಲ್ಲಿ ಪುಟ್ಟ ಪೆಂಡಾಲ್ ಹಾಕಿ ಗಣೇಶನನ್ನು ಕೂರಿಸಿ ಸರಳವಾಗಿ ಪೂಜಾ ಕೈಂಕರ್ಯ ನಡೆಸಿದೆ. ಈ ಸರಳ ಗಣೇಶೋತ್ಸವ ಆಚರಣೆಯ ಹಿಂದಿನ ಕಾರಣ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.
ಕುಟುಂಬವಿಲ್ಲದ 22 ವರ್ಷದ ಅನಾಥ ಯುವಕನ ಜೀವ ಉಳಿಸುವ ಸಲುವಾಗಿ ನವ ಶಕ್ತಿ ಮಿತ್ರ ಮಂಡಳ ಸರಳ ಗಣೇಶೋತ್ಸವ ಮಾಡಿದೆ. ಸತೀಶ್ ಜೋರಿ ಎಂಬ ಅನಾಥ ಯುವಕ ರಸ್ತೆ ಅಪಘಾತಕ್ಕೀಡಾಗಿದ್ದು, ಆತನಿಗೆ ಕುಟುಂಬವಿಲ್ಲದ ಕಾರಣ 4 ಪ್ರಮುಖ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಣೆ ಮಾಡಿದ್ದವು. ಆದರೆ ಈ ಮಂಡಳದ ಯುವಕರು ಸೇರಿ ಆತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸುವ ಸಲುವಾಗಿ ಗಣೇಶೋತ್ಸವವನ್ನು ಸರಳವಾಗಿ ಮಾಡಿದ್ದಾರೆ. ಗಣೇಶನಿಗಾಗಿ ಸಂಗ್ರಹಿಸಿದ ಹಣದ ಶೇ.80ರಷ್ಟನ್ನು ಆಸ್ಪತ್ರೆಯ ಬಿಲ್ ಆಗಿ ಪಾವತಿಸಿದ್ದಾರೆ. ಪ್ರಸ್ತುತ ಯುವಕ ಚೇತರಿಸಿಕೊಂಡಿದ್ದಾನೆ.
ದೇವರ ಕಾರ್ಯವನ್ನು ಸರಳವಾಗಿಸಿ ಅನಾಥ ಯುವಕನೊಬ್ಬನ ಪಾಲಿಗೆ ಸ್ವತಃ ದೇವರಾದ ನವಶಕ್ತಿ ಮಿತ್ರ ಮಂಡಳ ಯುವಕರ ಕಾರ್ಯ ಪ್ರಶಂಸಾರ್ಹ. ಇಂತಹವರು ನಿಜವಾದ ಅರ್ಥದಲ್ಲಿ ಗಣೇಶ ಭಕ್ತರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.