ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ವೀಡಿಯೋ ಸಂದೇಶದ ಮೂಲಕ ದೇಶವ್ಯಾಪಿಯಾಗಿ ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಇದೇ ವೇಳೆ ಸ್ವಚ್ಛತೆಗಾಗಿ ಅಪಾರ ಕೊಡುಗೆಗಳನ್ನು ನೀಡುತ್ತಿರುವ ಸ್ವಚ್ಛಾಗ್ರಹಿಗಳ ಕಾರ್ಯವನ್ನು ಶ್ಲಾಘಿಸಿದರು.
ವೀಡಿಯೋ ಸಂದೇಶ ನೀಡಿದ ಮೋದಿ, ‘ಸ್ವಚ್ಛ ಭಾರತದ ಬಗೆಗಿನ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದೇವೆ’ ಎಂದರು.
ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿದ ಅವರು, ‘ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 9 ಕೋಟಿ ಶೌಚಾಲಯಗಳ ನಿರ್ಮಾಣವಾಗಿದೆ. ಶೇ.90ರಷ್ಟು ಭಾರತೀಯರು ಶೌಚಾಲಯದ ಬಳಕೆ ಆರಂಭಿಸಿದ್ದಾರೆ. ದೇಶದ 450 ಜಿಲ್ಲೆಗಳು ಬಯಲು ಶೌಚ ಮುಕ್ತಗೊಂಡಿವೆ. 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಯಲು ಶೌಚಮುಕ್ತಗೊಂಡಿವೆ’ ಎಂದರು.
‘ಕೇವಲ ಶೌಚಾಲಯಗಳ ನಿರ್ಮಾಣದಿಂದ ಎನೂ ಆಗದು, ಅದರ ಬಳಕೆಯ ಹವ್ಯಾಸವನ್ನು ರೂಢಿಮಾಡಿಕೊಳ್ಳಬೇಕು’ ಎಂದರು.
ಗಾಂಧೀ ಜಯಂತಿಯ ಅಕ್ಟೋಬರ್ 2ರವರೆಗೆ ‘ಸ್ವಚ್ಛತಾ ಹೀ ಸೇವಾ’ ಅಭಿಯಾನ ಮುಂದುವರೆಯಲಿದೆ, ವಿವಿಧ ವಲಯಗಳ ಸುಮಾರು 2 ಸಾವಿರ ಗಣ್ಯರಿಗೆ ಪತ್ರ ಬರೆದಿರುವ ಮೋದಿ, ಈ ಅಭಿಯಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
ಇಂದಿನ ವೀಡಿಯೋ ಕಾನ್ಫರೆನ್ಸ್ನಲ್ಲಿ ವಿವಿಧ ರಾಜ್ಯಗಳ ಗಣ್ಯರು ಮೋದಿಯೊಂದಿಗೆ ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಶ್ರೀಶ್ರೀ ರವಿಶಂಕರ್ ಗುರೂಜಿ, ಸಿಎಂ ಯೋಗಿ ಆದಿತ್ಯನಾಥ, ಉದ್ಯಮಿ ರತನ್ ಟಾಟಾ, ಮಾತಾ ಅಮೃತಾನಂದಮಯೀ, ಬಹಳಷ್ಟು ಎನ್ಜಿಓಗಳು, ಸ್ವಚ್ಛಾಗ್ರಹಿಗಳು, ಹಲವು ಧರ್ಮಗಳ ಮುಖಂಡರು ಸ್ವಚ್ಛತೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.