ನವದೆಹಲಿ : ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಮಗಳ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆ ಸ್ಥಳಾಂತರವು ಅನಿವಾರ್ಯವಾಗಿತ್ತು. ತುರ್ತಾಗಿ ಸ್ಥಳಾಂತರಿತವಾಗಬೇಕಾಗಿದ್ದ ಕಾರಣಕ್ಕಾಗಿ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಪರಿಕ್ಕರ್ ಅವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ರಕ್ಷಣಾ ಸಚಿವರು ಏರ್ಲಿಫ್ಟ್ ಮಾಡಿಸುವ ಮೂಲಕ ನೆರವಾಗಿ, ಶ್ಲಾಘನೀಯರಾಗಿದ್ದಾರೆ.
ನೌಕಾಪಡೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿ ಅವರ ಮಗಳು ಅನಾರೋಗ್ಯದಿಂದ ನರಳುತ್ತಿದ್ದು ದಾಖಲಿಸಿದ್ದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯಗಳು ಇಲ್ಲವಾಗಿತ್ತು. ಹೀಗಾಗಿ ತುರ್ತಾಗಿ ಆಕೆಯನ್ನು ದೆಹಲಿಯ ಆರ್ಮಿ ರಿಸರ್ಚ್ ಹಾಗು ರೆಫರಲ್ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಿತ್ತು. ಆದರೆ ಕೆಲ ಕಾರಣಗಳಿಂದಾಗಿ ಹೆಲಿಕಾಫ್ಟರ್ ವ್ಯವಸ್ಥೆಯನ್ನು ವಾಯುಪಡೆಯು ನೀಡುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ರವಿಕಾಂತ್ ಸೋನಿಯವರು ಪ್ರಧಾನಿ ಮೋದಿ ಹಾಗೂ ಮನೋಹರ್ ಪರಿಕ್ಕರ್ ಅವರಿಗೆ ಸಹಾಯ ಕೋರಿ ಟ್ವೀಟ್ ಮಾಡಿದ್ದರು.
‘ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದ ಸದ್ಯ ವೆಂಟಿಲೇಟರ್ನಲ್ಲಿದ್ದಾಳೆ. ಇಲ್ಲಿ ಸೂಕ್ತ ಚಿಕಿತ್ಸೆ ಇಲ್ಲದ ಕಾರಣ ಆಕೆಯನ್ನು ಹೆಲಿಕಾಫ್ಟರ್ ಮೂಲಕ ದೆಹಲಿಯ ಆರ್ಮಿ ರಿಸರ್ಚ್ ಹಾಗು ರೆಫರಲ್ ಆಸ್ಪತ್ರೆಗೆ ಸ್ಥಳಾಂತರಿಸುವುದು ಅಗತ್ಯವಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಸಾಮಾನ್ಯ ಹೆಲಿಕಾಪ್ಟರ್ ಅಂಬ್ಯುಲೆನ್ಸ್ ಮೂಲಕ ಸ್ಥಳಾಂತರಕ್ಕೆ ಅನಾನುಕೂಲತೆಯಾಗಿದೆ. ದೆಹಲಿಯಲ್ಲಿನ ನಾಗರಿಕ ವಿಮಾನ ಅಂಬ್ಯುಲೆನ್ಸ್ ಕೂಡಾ ಕಾರಣಾಂತರಗಳಿಂದ ಸಿಗದ ಕಾರಣ ತುರ್ತಾಗಿ ನೀವು ನನಗೆ ಸಹಾಯ ಮಾಡಿ. ನಮ್ಮ ಬಳಿ ಇರುವುದು ಬಹಳ ಕಡಿಮೆ ಸಮಯ. ನಿಮ್ಮ ಸಹಾಯ ರಕ್ಷಣಾ ಇಲಾಖೆಯಲ್ಲಿ ನಿವೃತ್ತರಾಗಿರುವ ಲಕ್ಷಾಂತರ ಜನರ ನಂಬಿಕೆಯನ್ನು ಉಳಿಸುತ್ತದೆ.’ ಎಂದು ಸರಣಿ ಟ್ವೀಟ್ಗಳನ್ನು ಮಾಡಿದ್ದರು.
ಟ್ವೀಟ್ಗಳನ್ನು ನೋಡಿದ ಪರಿಕ್ಕರ್ ತಕ್ಷಣವೇ ಸ್ಪಂದಿಸಿದ್ದಾರೆ. ಅವರು ಛತ್ತೀಸ್ಗಢದಿಂದ ರವಿಕಾಂತ್ ಸೋನಿಯವರ ಮಗಳನ್ನು ದೆಹಲಿಯ ಆರ್ಮಿ ರಿಸರ್ಚ್ ಹಾಗೂ ರೆಫರಲ್ ಆಸ್ಪತ್ರೆಗೆ ವಾಯುಸೇನೆ ಹೆಲಿಕಾಫ್ಟರ್ ಆಂಬುಲೆನ್ಸ್ ಮೂಲಕ ಏರ್ಲಿಫ್ಟ್ ಮಾಡಲು ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ಸಚಿವರ ಕಾರ್ಯವೈಖರಿಯನ್ನು ನೌಕಾಸೇನೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿಯವರು ಶ್ಲಾಘಿಸಿದ್ದು, ನಿಮ್ಮ ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ. ಭಾರತೀಯ ಸೇನೆಯ ಭಾಗವಾಗಿದ್ದಿದ್ದಕ್ಕಾಗಿ ನನಗೆ ಹೆಮ್ಮೆ ಇದೆ ಎಂದು ತುಂಬುಹೃದಯದ ಧನ್ಯವಾದಗಳನ್ನು ಅರ್ಪಿಸಿ ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.