
ಬೈಂದೂರು: ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಡಿ. 1 ರಂದು ಉಡುಪಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳು ಹಾಗೂ ಕ್ಷೇತ್ರದ ರೈತರಿಗೆ ಹಾಗೂ ಗ್ರಾಮೀಣ ಬಡ ಜನರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಬಾಕಿ ಉಳಿದಿರುವ ಹಕ್ಕು ಪತ್ರ ಗಳು ಹಾಗೂ ಮಂಜೂರಾತಿ ಪತ್ರಗಳನ್ನು ಒದಗಿಸಲು ಇರುವ ಅಡೆ ತಡೆ ನಿವಾರಿಸುವ ಸಂಬಂಧ ಚರ್ಚಿಸಿದರು.
ಕ್ಷೇತ್ರದ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಜೊತೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಜನ ಪ್ರತಿನಿಧಿಗಳ ನಿಯೋಗದೊಂದಿಗೆ ಕುಂದಾಪುರ ತಾಲೂಕಿನ ಉಳ್ಳೂರು-74 ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕೊಂಡಿದ್ದರೂ ಹಕ್ಕು ಪತ್ರ ಸಿಗದೇ ಇರುವುದು ಹಾಗೂ ಅಕ್ರಮ ಸಕ್ರಮ ಅರ್ಜಿಗಳು ಇದರಿಂದ ತನಿಖೆಗೆ ಬಾಕಿಯಾಗಿರುವ ಕಾರಣ ಜನ ಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಬಾಕಿ ಉಳಿದಿದ್ದ ಅಡೆ ತಡೆಗಳನ್ನು ನಿವಾರಿಸಿ ಅಂತಿಮ ಆದೇಶ ಹೊರಡಿಸಿದಕ್ಕಾಗಿ ಜಿಲ್ಲಾಧಿಕಾರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಹಾಗೂ ಇದಕ್ಕಾಗಿ ಶ್ರಮಿಸಿರುವ ಕುಂದಾಪುರ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ಇದಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಕೊಟ್ಟ ಸ್ಥಳೀಯ ಜನ ಪ್ರತಿನಿಧಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಂದುವರಿದು ಪ್ರಸ್ತುತ ಉಳ್ಳೂರು -74 ಗ್ರಾಮದ ಸರ್ವೇ ನಂಬ್ರ 153 ರಲ್ಲಿ ಇದ್ದ 1800 ಎಕ್ರೆ ಪೈಕಿ 150 ಎಕ್ರೆ ಅರಣ್ಯ ಭೂಮಿ ಹೊರತು ಪಡಿಸಿ ಬಾಕಿ ಉಳಿದಿರುವ ಕಂದಾಯ ಭೂಮಿಯಲ್ಲಿ ಹಲವಾರು ವರ್ಷ ಗಳಿಂದ ಮನೆ ಕಟ್ಟಿ ವಾಸವಿರುವವರಿಗೆ 94 ಸಿ ಅಡಿ ಹಕ್ಕು ಪತ್ರ ಹಾಗೂ ಹಲವು ವರ್ಷಗಳಿಂದ ಕೃಷಿ ಮಾಡಿ ಕೊಂಡು ಬಂದಿರುವ ಅರ್ಹ ರೈತರಿಗೆ ಅಕ್ರಮ ಸಕ್ರಮದಡಿ ಭೂ ಮಂಜೂರಾತಿಗೆ ಅಗತ್ಯ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಲು ಹಾಗೂ ಇದೇ ರೀತಿ ಕ್ಷೇತ್ರದ ಇತರೆ ಕಡೆಯೂ ಇರುವ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೇ ಕಾರ್ಯ ತ್ವರಿತ ಗೊಳಿಸಲು ಹಾಗೂ ಕೊಲ್ಲೂರು ಗ್ರಾಮದ 121 ಹಾಗೂ 56 ಸರ್ವೇ ನಂಬ್ರ ಗಳಲ್ಲಿನ ಸಮಸ್ಯೆ ಹಾಗೂ ಜಡ್ಕಲ್ ಮುದೂರು ಪ್ಲಾಟಿಂಗ್ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲು ಅಗತ್ಯ ಕ್ರಮ ವಹಿಸಲು ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



