ಮದ್ದೂರು: ಮುಖ್ಯಮಂತ್ರಿಗಳ ಹೇಳಿಕೆ, ಭದ್ರಾವತಿ ಶಾಸಕರ ಹೇಳಿಕೆ- ಇವೆಲ್ಲವುಗಳ ಮೂಲಕ ರಾಜ್ಯ ಸರಕಾರದ ಕಡೆಯಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸ್ ವೈಫಲ್ಯ ಮೊದಲಾದವು ಬಹಿರಂಗವಾಗಲಿ; ಇದಕ್ಕಾಗಿ ಮದ್ದೂರು ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು. ವಿಪಕ್ಷ ನಾಯಕರು, ಪ್ರಮುಖರು ಎಲ್ಲರೂ ಚರ್ಚೆ ಮಾಡಿದ್ದೇವೆ. ಮೆರವಣಿಗೆಯಲ್ಲಿ ನಾವೂ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು. ಹಿಂದೂ ಸಂಘಟನೆಗಳು, ಕಾರ್ಯಕರ್ತರಿಗೆ ಧೈರ್ಯ ತುಂಬುತ್ತೇವೆ ಎಂದು ಹೇಳಿದರು.
ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಹೇಳಿಕೆ ನೀಡಿದ್ದಾರೆ.
ಯಾವಾಗ ಮಸೀದಿ ಒಳಗೆ ತೆರಳಿ ಕಲ್ಲನ್ನು ಹಿಡಿದಿದ್ದರೋ ಆ ಷಡ್ಯಂತ್ರ ರೂಪಿಸಿದಾಗಲೇ ಇವರು ಎಚ್ಚೆತ್ತುಕೊಳ್ಳಬೇಕಿತ್ತು. ಈಗ ನಮ್ಮ ಮೇಲೆ, ಹಿಂದೂಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ಮುಖ್ಯಮಂತ್ರಿಗಳು ರಾಜಕಾರಣ ಎಂದಾದರೂ ಅಂದುಕೊಳ್ಳಲಿ; ಇನ್ನೇನಾದರೂ ಅಂದುಕೊಳ್ಳಲಿ. ನಮ್ಮ ಕರ್ತವ್ಯ ಮಾಡಲಿದ್ದೇವೆ. ಸರಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ, ಮಸೀದಿ ಒಳಗೆ ಕಲ್ಲು ಶೇಖರಿಸಿ ಬಿಸಾಡಿದ ಹಾಗೂ ಗೂಂಡಾವರ್ತನೆ ಪ್ರಾರಂಭಿಸಿದ ದೇಶದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಅವರನ್ನು ಒದ್ದು ಒಳಗೆ ಹಾಕಲಿ; ಸುಮ್ಮನೆ ಅಮಾಯಕ ಹಿಂದೂ ಮಹಿಳೆಯರ ಮೇಲೆ ಎಫ್ಐಆರ್ ದಾಖಲಿಸಿ, ಹಿಂದೂ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ನುಡಿದರು.
ಪೊಲೀಸರು ಮುಂಜಾಗ್ರತೆ ಕೈಗೊಳ್ಳದ ಪರಿಣಾಮವಾಗಿಯೇ ಈ ಬೆಳವಣಿಗೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು, ಸಣ್ಣಪುಟ್ಟ ಘಟನೆ ಎಂದಿರುವ ಗೃಹ ಸಚಿವರು ತಮ್ಮ ಸ್ಥಾನಕ್ಕೆ ಕಿಂಚಿತ್ತಾದರೂ ಗೌರವ ಇದ್ದರೆ ಮದ್ದೂರಿಗೆ ಬರಲಿ ಎಂದು ಆಗ್ರಹಿಸಿದರು. ನಿಮ್ಮ ಆಡಳಿತ ಪಕ್ಷದ ಶಾಸಕರು ಪಾಪ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. ಅವರಿಗೆ ಇಂಥ ಸಂದರ್ಭದಲ್ಲಿ ಅವರ ಮೋಜೇ ಹೆಚ್ಚಾಗಿದೆ ಹೊರತು ಕಾನೂನು- ಸುವ್ಯವಸ್ಥೆ ಕಾಪಾಡುವ ಕಡೆ ಶಾಸಕರು ಗಮನಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ. ಬಿಜೆಪಿ ಮಾತ್ರವಲ್ಲ; ಜೆಡಿಎಸ್ನವರೂ ಇಲ್ಲಿ ಬಂದಿದ್ದಾರೆ. ಪಕ್ಷಾತೀತವಾಗಿ ನಾವೆಲ್ಲರೂ ಹಿಂದೂ ಸಂಘಟನೆ- ಕಾರ್ಯಕರ್ತರ ಪರವಾಗಿದ್ದೇವೆ. ರಾಜ್ಯ ಸರಕಾರವು ಹುಡುಗಾಟಿಕೆ ಮಾಡುವುದನ್ನು ಬಿಟ್ಟು ಅಯೋಗ್ಯರನ್ನು ಒದ್ದು ಒಳಗೆ ಹಾಕಲಿ; ಹಿಂದೂ ಸಂಘಟನೆ- ಕಾರ್ಯಕರ್ತರನ್ನು ಮುಟ್ಟದಿರಿ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರು ಮೊನ್ನೆ ನಡೆದ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅವರ ಮಾತಿನ ಆಧಾರದಲ್ಲಿ ಹೇಳುವುದಾದರೆ ಒಂದಂತೂ ಸ್ಪಷ್ಟ. ಇಲ್ಲಿ ಒಂದು ಕೋಮಿನ ಜನರು ಹಿಂದೂಗಳು ಆ ಬೀದಿಯಲ್ಲಿ ಮೆರವಣಿಗೆ ಮಾಡಬಾರದು; ಗಣಪತಿ ಮೆರವಣಿಗೆಯೂ ಸಾಗಬಾರದು ಎನ್ನುತ್ತಿರುವ ಮಾಹಿತಿ ಲಭಿಸಿದೆ. ಗೂಂಡಾವರ್ತನೆ ಬಗ್ಗೆಯೂ ಅವರೇ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ದುಷ್ಕರ್ಮಿಗಳ ಅಟ್ಟಹಾಸವು ಬೀದಿಗಿಳಿದ ಹಿಂದೂ ಮಹಿಳೆಯರ ಆಕ್ರೋಶದಿಂದ ಗೊತ್ತಾಗುತ್ತದೆ. ಗಾಂಜಾ, ಅಫೀಮು ಕಾಟವೂ ಯಥೇಚ್ಛವಾಗಿ ಇಲ್ಲೂ ನಡೆಯುತ್ತಿದೆ. ಹಿಂದೂ ಹೆಣ್ಮಕ್ಕಳು ಗೌರವಯುತವಾಗಿ ರಸ್ತೆಯಲ್ಲಿ ನಡೆದು ಹೋಗಲು ಅಸಾಧ್ಯ ಆಗುವಂಥ ವಾತಾವರಣ ಮದ್ದೂರಿನಲ್ಲಿ ನಿರ್ಮಾಣವಾಗಿದ್ದರೆ, ದೇಶದ್ರೋಹಿಗಳು ಯಾವ ರೀತಿ ಮೆರೆಯುತ್ತಿದ್ದಾರೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು, ಸಚಿವರ ಹೇಳಿಕೆ ಗಮನಿಸಿದರೆ ಇವರು ಹಿಂದೂಗಳ ಮತ ಪಡೆಯದೇ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಮುಖ್ಯಮಂತ್ರಿಗಳಿಗೆ ಕೇಸರಿ ಕಂಡರೆ ಆಗುವುದಿಲ್ಲ; ಇವರ ನಡವಳಿಕೆಯೂ ಕುಮ್ಮಕ್ಕನ್ನು ನೀಡುತ್ತಿದೆ. ದೇಶದ್ರೋಹಿಗಳು, ಕೆಲವರಲ್ಲಿರುವ ಜಿಹಾದಿ ಮಾನಸಿಕ ಸ್ಥಿತಿ ಏನಿದೆಯೋ ಅವರಿಗೂ ಇದೇ ಕಾರಣಕ್ಕಾಗಿ ಧೈರ್ಯ ಬಂದಿದೆ ಎಂದು ಆರೋಪಿಸಿದರು. ಗಲಭೆಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಬೀದಿಯಲ್ಲಿ ಓಡಾಡುವುದು ಕಷ್ಟ ಆಗಲಿದೆ
ಧರ್ಮಸ್ಥಳದ ವಿಚಾರದಲ್ಲಿ ಸರಕಾರದ ನಡವಳಿಕೆಯನ್ನು ಜನತೆ ಗಮನಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಮಹಿಳೆಯರನ್ನು ತಡೆಯುವ ದುಸ್ಸಾಹಸಕ್ಕೆ ಸರಕಾರ ಕೈಹಾಕಿದೆ. ಅಧಿಕಾರ ಇದೆ ಎಂದು ಚೆಲ್ಲಾಟ, ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇವರ ಪಾಪದ ಕೊಡ ತುಂಬಿದೆ ಎಂದು ಎಚ್ಚರಿಸಿದರು. ಇವತ್ತಲ್ಲ ನಾಳೆ ಇವರು ಬೀದಿಯಲ್ಲಿ ಓಡಾಡುವುದು ಕಷ್ಟ ಆಗಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಹಿಂದೂಗಳೆಲ್ಲರೂ ಪ್ರಜ್ಞಾವಂತರಾಗಿದ್ದಾರೆ; ನಿಮ್ಮ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವೇ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಸಲ್ಮಾನರ ವಿರೋಧಿಗಳಲ್ಲ; ಪ್ರಧಾನಿ ಮೋದಿಜೀ ಅವರು ಸಬ್ ಕಾ ಸಾಥ್ ನೀತಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳಿಗೆ ಬಿರಿಯಾನಿ ತಿನ್ನಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆಯಲ್ಲವೇ ಎಂದು ಕೇಳಿದರು. ಇದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.
ಅಯೋಗ್ಯ ಕಾಂಗ್ರೆಸ್ಸಿಗರ ಮಾತನ್ನು ಕಟ್ಟಿಕೊಂಡು ಮುಸಲ್ಮಾನರು ಬೀದಿಗಿಳಿದು ಕಲ್ಲೆಸೆಯುವ ಕೆಲಸ ಆಗುತ್ತಿದ್ದು, ಅವರ ಭವಿಷ್ಯವನ್ನೂ ಕಾಂಗ್ರೆಸ್ಸಿನವರು ಹಾಳು ಮಾಡುತ್ತಿದ್ದಾರೆ ಎಂದು ಮುಸಲ್ಮಾನ ಧರ್ಮಗುರುಗಳಿಗೆ ತಿಳಿಸುವುದಾಗಿ ಪ್ರಶ್ನೆಗೆ ಉತ್ತರ ಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.