
ಬೆಂಗಳೂರು: ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ 100 ಕ್ಕೂ ಹೆಚ್ಚು ನಗರಗಳ ಪೈಕಿ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳ ವರ್ಗದಡಿಯಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನ ಪಡೆದಿದೆ.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೊಡಮಾಡುವ “ಸ್ವಚ್ಛ ಸರ್ವೇಕ್ಷಣಾ-2021” ಹಲವಾರು ಪ್ರಶಸ್ತಿಗಳನ್ನು ಇದರೊಂದಿಗೆ ಕರ್ನಾಟಕ ರಾಜ್ಯ ತನ್ನದಾಗಿಸಿಕೊಂಡಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ “ಸ್ವಚ್ಛ ಸರ್ವೇಕ್ಷಣಾ-2021” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜ ಬೈರತಿ ಸ್ವೀಕರಿಸಿದರು.
ರಾಷ್ಟ್ರಪತಿ ಸನ್ಮಾನ್ಯ ಶ್ರೀ ರಾಮನಾಥ್ ಕೋವಿಂದ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ವ್ಯವಹಾರಗಳ ಸಚಿವರಾದ ಶ್ರೀ ಹರದೀಪ್ ಸಿಂಗ್ ಪುರಿ, ರಾಜ್ಯ ಸಚಿವರಾದ ಕೌಶಲ್ ಕಿಶೋರ್ ಪ್ರಶಸ್ತಿ ಪ್ರಧಾನ ಮಾಡಿದರು.
“ಕಸಮುಕ್ತ ನಗರದ” ವರ್ಗದ ಅಡಿಯಲ್ಲಿ ಮೈಸೂರು ನಗರ ಪ್ರಥಮ ಪ್ರಶಸ್ತಿಯನ್ನು ಮತ್ತೊಮ್ಮ ಮುಡಿಗೇರಿಸಿಕೊಂಡಿದೆ. ದೇಶದಲ್ಲಿರುವ 4360 ನಗರಗಳ ಸ್ಥಿತಿಗತಿಗಳನ್ನು ಅಳೆಯಲು ಹಲವಾರು ಮಾನದಂಡಗಳನ್ನು ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ವ್ಯವಹಾರಗಳ ಸಚಿವಾಲಯ ರೂಪಿಸಿದ್ದು, ಅದರಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದ್ದು, ಹೆಚ್ಚು ಮನ್ನಣೆಗೆ ಪಾತ್ರವಾಗಿದೆ.

ಕಸಮುಕ್ತ ನಗರದ ವರ್ಗದಲ್ಲಿ 1, 3 ಮತ್ತು 5 ಸ್ಟಾರ್ ಶ್ರೇಯಾಂಕದಲ್ಲಿ ನಮ್ಮ ರಾಜ್ಯದ ಸಾಂಸ್ಕೃತಿಕ ನಗರಿ, ಅರಮನೆ ನಗರಿ ಎಂದು ಖ್ಯಾತಿ ಪಡೆದಿರುವ ಮೈಸೂರು ಮಹಾನಗರಕ್ಕೆ 5 ಸ್ಟಾರ್ ಶ್ರೇಯಾಂಕ ಲಭಿಸಿ, ದೇಶದಲ್ಲಿಯೇ ನಂ.1 ಕಸಮುಕ್ತ ನಗರ ಎನಿಸಿದೆ.
ದಕ್ಷಿಣ ವಲಯದ ಸ್ವಚ್ಛ ನಗರ ಎಂದು ಹೊಸದುರ್ಗ ಪುರಸಭೆಗೆ ಪ್ರಶಸ್ತಿ ಲಭಿಸಿದೆ. ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆ ಪ್ರಶಸ್ತಿಗೆ ಪಿರಿಯಾಪಟ್ಟಣ ಪುರಸಭೆ ಮತ್ತು ಕೆ.ಆರ್.ನಗರ ನಗರಸಭೆ ಪಾತ್ರವಾಗಿದೆ. ಹೀಗೆ ಒಟ್ಟು ಕರ್ನಾಟಕ ರಾಜ್ಯ 14 ಪ್ರಶಸ್ತಿಗಳನ್ನು ಪಡೆದಿದೆ. ಪ್ರಶಸ್ತಿಗಳ ವಿವರ ಈ ಕೆಳಗಿನಂತಿದೆ.
ಸ್ವಚ್ಛ ಸರ್ವೇಕ್ಷಣ-2021 ಪ್ರಶಸ್ತಿಗಳು:
1) ಹೊಸದುರ್ಗ 2) ಕೆ.ಆರ್. ನಗರ 3) ಪಿರಿಯಾಪಟ್ಟಣ 4) ಬೃಹತ್ ಬೆಂಗಳೂರು 5) ಹುಬ್ಬಳ್ಳಿ-ಧಾರವಾಡ 6) ಮೈಸೂರು 7) ಮುಧೋಳ 8) ಕುಮಟಾ
ಕಸ ಮುಕ್ತ ನಗರ-2021 ಪ್ರಶಸ್ತಿಗಳು:
1) ಮೈಸೂರು (5 ಸ್ಟಾರ್ ರೇಟಿಂಗ್)
2) ಹುಬ್ಬಳ್ಳಿ-ಧಾರವಾಡ
3) ತುಮಕೂರು
ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್-2021 ಪ್ರಶಸ್ತಿಗಳು:
1) ಮೈಸೂರು
ಸಫಾಯಿ ಮಿತ್ರ ಸಮವಸ್ತ್ರ ಸ್ಪರ್ಧೆ-2021 ಪ್ರಶಸ್ತಿಗಳು:
1) ಮೈಸೂರು
2016 ರಲ್ಲಿ 75 ನಗರಗಳ ಸರ್ವೆ ನಡೆಸುವ ಮೂಲಕ ಆರಂಭವಾದ ಈ ಕಾರ್ಯ ದೇಶದ 4360 ನಗರಗಳಿಗೆ ಈಗ ವಿಸ್ತಾರಗೊಂಡಿದೆ. ನಗರಗಳ ನೈರ್ಮಲ್ಯಕರಣಕ್ಕೆ ಹೆಚ್ಚು ಒತ್ತು ನೀಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುತ್ತಿರುವ ವಿಶ್ವದಲ್ಲಿಯೇ ಬಹು ದೊಡ್ಡ ಸರ್ವೇ ಕಾರ್ಯ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


