ಬೆಂಗಳೂರು: ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾಡಿರುವ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚಿಸಬೇಕು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ಆರ್ಥಿಕ ಹೊಡೆತದಿಂದ ನಲುಗಿರುವ ಕಾಫಿ ಉದ್ಯಮ ಮತ್ತು ಕಾಫಿ ಬೆಳೆಗಾರರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಮರುಸಾಲ ನೀಡುವಂತೆ ಹಾಲಿ ಇರುವ ಬಡ್ಡಿದರದಲ್ಲಿ ಕಾಫಿ ಬೆಳೆ ಹಾಗೂ ಇತರೆ ಕೃಷಿ ಕ್ಷೇತ್ರದ ಸಾಲಗಳನ್ನು ಬೆಳೆಗಾರರು ಮರುಪಾವತಿ ಮಾಡಲು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಮತ್ತು ಇತರೆ ಕೃಷಿಯ ಸಮಗ್ರ ಸಾಲಗಳ ಮೇಲಿನ ಬಡ್ಡಿಯನ್ನು ಶೇ.3ರಷ್ಟು ನಿಗದಿಪಡಿಸಬೇಕು ಎಂದು ತಮ್ಮ ನೇತೃತ್ವದ ನಿಯೋಗವು ಒತ್ತಾಯಿಸಿದ್ದು, ಅದಕ್ಕೆ ಸಚಿವರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಫಿ ಕೃಷಿಗೆ ಸಂಬಂಧಿಸಿದ ಸಾಲವನ್ನು ಸರ್ಫೇಸಿ ಕಾಯ್ದೆ (ಸೆಕ್ಯುರಿಟೈಸೇಷನ್ ಅಂಡ್ ರೀಕನ್ಟ್ರಕ್ಷನ್ ಆಫ್ ಫೈನಾನ್ಶಿಯಲ್ ಅಸೆಟ್ ಅಂಡ್ ಎನ್ಫೋರ್ಸ್ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್) ಯಿಂದ ಹೊರಗಿಡುವಂತೆ ಒತ್ತಾಯಿಸಿದ್ದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೀಗ ಕಾಫಿ ಉದ್ಯಮಕ್ಕೇ ಕಂಟಕವಾಗಿರುವ ಸರ್ಫೇಸಿ ಕಾಯ್ದೆಯಿಂದ ಕಾಫಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಾಲವನ್ನು ಹೊರಗಿಡಬೇಕು ವಿತ್ತ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿದ್ದಾರೆ. ಹೆಚ್ಚು, ಗುಡ್ಡ ಜರುಗುವಿಕೆ, ತೋಟಗಾರಿಕೆ ಸಲಕರಣೆಗಳು, ಗಿಡಗಳು ಹಾಳಾಗುತ್ತಿವೆ. ಜೊತೆಗೆ ಸಾಂಕ್ರಾಮಿಕ ರೋಗವಾದ ಕೋವಿಡ್ ನಿಂದ ನಲುಗಿ ಹೋಗಿದ್ದಾರೆ. ಎಲ್ಲವನ್ನು ಪರಿಗಣಿಸಿ ಕಾಫಿ ಬೆಳೆಗಾರರ ನೆರವಿಗೆ ಬನ್ನಿ ಎಂದು ಕೋರಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಲೆ ಭಾರಿ ಕುಸಿತ ಕಂಡಿದೆ. ಹಾಗಾಗಿ ತಾವು ನಿಮ್ಮ ಸಮಯೋಚಿತ ಸಹಾಯವನ್ನು ಹಾಗೂ ಮಧ್ಯ ಪ್ರವೇಶಕ್ಕಾಗಿ ಕೇಂದ್ರದ ಸಹಾಯವನ್ನು ಕೋರಿದ್ದು, ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ನಿರ್ಮಲಾ ಸೀತಾರಾಮನ್ ಮುಕ್ತ ಮನಸ್ಸಿನಿಂದ ಒಪ್ಪಿ ಮನವಿ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ.
ನಮ್ಮ ರಾಜ್ಯದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗಾರರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಅದರಲ್ಲೂ ಕೋವಿಡ್-19 ಬಂದ ನಂತರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಸುಂದರ ಮಲೆನಾಡಾಗಿರುವ ಕಾಫಿ ಸೀಮೆಯಲ್ಲಿ ಅತಿಯಾದ ಮಳೆ, ಹವಾಮಾನ ವೈಪರೀತ್ಯದಿಂದ ದಿನದಿಂದ ದಿನಕ್ಕೆ ಕಾಫಿ ತೋಟಗಳು ಮಾಯವಾಗುತ್ತಿವೆ. ಮೊದಲಿಗೆ ಸಾಂಕ್ರಾಮಿಕ ರೋಗವಾದ ಕೊರೊನಾವನ್ನು ಹಿಮ್ಮೆಟ್ಟುವ ಸಂಕಲ್ಪದಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಲಾಯಿತು.
ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ನಿರ್ವಹಣೆ ಮಾಡುವ ಮೂಲಕ ಭಾರತವನ್ನು ಆರ್ಥಿಕ ಸಂಷಕ್ಟದಿಂದ ಪಾರುಮಾಡಿದ್ದು ಧೀಃ ಶಕ್ತಿಯಂತೆ ಕಂಡಿದ್ದಾರೆ ಎಂದು ನಿಯೋಗವು ಮೆಚ್ಚುಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಕಾಫಿ ಬೆಳೆಯುವ ರೈತರು ಮತ್ತು ಮತ್ತು ಕಾಫಿ ಉದ್ಯಮಿಗಳು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಸಂಷಕ್ಟ ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲದ ಮೇಲೆ ವಿಧಿಸುತ್ತಿರುವ ಬಡ್ಡಿಯಿಂದ ಆರ್ಥಿಕ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಕೇಂದ್ರಕ್ಕೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಹೊರಡಿಸಿರುವ, ಕೃಷಿ ಸಾಲದ ಮರು ಹೊಂದಾಣಿಕೆಗೆ ಸ್ಪಷ್ಟ ಸೂಚನೆಯಿದ್ದರೂ ಕೂಡ ಹಲವು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ವಾಣಿಜ್ಯ ಬ್ಯಾಂಕು ಶಾಖೆಗಳು ಬೆಳೆಗಾರರ ಸಾಲದ ಖಾತೆಗಳನ್ನು ನವೀಕರಿಸಲು ಮಾಡಲು ಹಿಂಜರಿಯುತ್ತಿವೆ. ಈ ಬಗ್ಗೆಯೂ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.