ಬೆಂಗಳೂರು: ಚುನಾವಣೆಯ ನಂತರ ಬಂಗಾಳದ ಪರಿಸ್ಥಿತಿ ಎಂಬ ವಿಷಯದ ಬಗ್ಗೆ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ವಿಶ್ಲೇಷಣೆ ಮಾಡಿದರು.
ಪಶ್ಚಿಮ ಬಂಗಾಳದ ಚುನಾವಣೆ, ಹಿಂಸೆ ಮತ್ತು ಅದರ ಒಂದು ಅವಲೋಕನ ಮಾಡುವುದಾದರೆ, ಮೇ 2 ರ ಚುನಾವಣಾ ಪರಿಣಾಮ ಮತ್ತು ಇತರ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಪರಿಣಾಮ ನಮ್ಮಲ್ಲಿ ದಿಗಿಲು ಹುಟ್ಟಿಸುತ್ತದೆ. 8 ಹಂತದಲ್ಲಿ ಪ. ಬಂಗಾಳ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕಟು, ಅಸಾಂವಿಧಾನಿಕ ಶಬ್ಧಗಳಿಂದ ಕೇಂದ್ರ ಸರ್ಕಾರ, ಚು. ಆಯೋಗಗಳನ್ನು ದೂಷಿಸಿದ್ದು ನಮ್ಮ ಕಣ್ಣ ಮುಂದಿದೆ. ಇತರ ನಾಲ್ಕು ರಾಜ್ಯಗಳಲ್ಲಿ ಚುನಾವಣಾ ಹಿಂಸೆ ಕಡಿಮೆ ಇತ್ತು. ಆದರೆ ಪ. ಬಂಗಾಳದಲ್ಲಿ ಮಾತ್ರ ರಕ್ಷಣಾ ವಲಯಕ್ಕೆ ಹೆಚ್ಚು ಕೆಲಸ ನೀಡಿತ್ತು. ಇದಕ್ಕೆ ನೇರ ಕಾರಣ ಮಮತಾ ಬ್ಯಾನರ್ಜಿ ಸರ್ಕಾರ ಎಂದು ಹೇಳಿದರು.
ಪ. ಬಂಗಾಳದಲ್ಲಿ 10 ವರ್ಷಗಳಿಂದ ಇಂತಹದ್ದು ನಡೆದುಕೊಂಡು ಬಂದಿದೆ. ತೃಣಮೂಲ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಜನರ ಅಭಿವೃದ್ಧಿ, ಸಮಾಜದ ಅಭಿವೃದ್ಧಿಗೆ ಶ್ರಮಿಸದೆ ಕೇವಲ ಹಿಂಸೆಯನ್ನೇ ಪ್ರತಿನಿಧಿಸಿದೆ. ಇದು ಕೇವಲ ರಾಜಕೀಯ ವಿಚಾರವಲ್ಲ. ಅದರ ಹೊರತಾಗಿ ದೇಶದೆಲ್ಲೆಡೆ ಈ ಬಗ್ಗೆ ಚರ್ಚೆ, ಅಧ್ಯಯನ ನಡೀಬೇಕಿದೆ. ಪಕ್ಷಾತೀತವಾಗಿ ವರದಿ ಮಾಡಬೇಕಿದ್ದ ಮಾಧ್ಯಮಗಳೂ ಸ್ವಲ್ಪ ತಪ್ಪಿದವು ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಒಳಗೆ ನಡೆಯಬೇಕಿದ್ದ ರಾಜಕೀಯ ಅದರ ಹೊರಗೂ, ಹಿಂಸೆಯ ರೂಪಕ್ಕೆ ತಂದದ್ದು ಖೇದಕರ. ಈ ಬಗ್ಗೆ ಮಾಧ್ಯಮಗಳು ಸರಿಯಾಗಿ ವಿಮರ್ಶೆ ನಡೆಸಿ ವರದಿ ಮಾಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬುದಕ್ಕೆ ಅರ್ಥ ಬರುತ್ತದೆ ಎಂದರು.
ಪ. ಬಂಗಾಳದ ರಾಜಕೀಯ ಅಪರಾಧೀಕರಣ, ಆಡಳಿತ ಮತ್ತು ರಾಜಕೀಯದ ಭ್ರಷ್ಟಾಚಾರ ವ್ಯವಸ್ಥೆ ಇಡೀ ಸಾಮಾಜಿಕ ಜೀವನವನ್ನೇ ಅಸ್ತವ್ಯಸ್ತಮಾಡಿದೆ. ಈ ಹಿನ್ನೆಲೆಯಲ್ಲಿ ಒಂದು ನಿಷ್ಪಕ್ಷಪಾತ ಅಧ್ಯಯನ ನಡೆಸಬೇಕಿದೆ. ಆಧ್ಯಾತ್ಮಿಕ, ಸಾಮಾಜಿಕ, ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡಿದ ಪ. ಬಂಗಾಳ ಸದ್ಯ ತೃಣಮೂಲ ಕಾಂಗ್ರೆಸ್ನ ಆಡಳಿತದಿಂದ ಬೇಸತ್ತಿರಬಹುದು. ಅನೇಕ ಮಹಾತ್ಮರು ಅವಿಭಜಿತ ಬಂಗಾಳದಲ್ಲಿ ಹುಟ್ಟಿದ್ದಾರೆ. ಅವರೆಲ್ಲರ ಆತ್ಮಗಳಿಗೂ ಈ ಹಿಂಸಾತ್ಮಕ ಘಟನೆಗಳು ನೋವು ನೀಡುತ್ತಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯೋಗಿ ಅರವಿಂದ್, ಸ್ವಾಮಿ ವಿವೇಕಾನಂದ, ಅರವಿಂದ, ವಂದೇ ಮಾತರಂ, ಜನಗಣಮನ, ವಿಜ್ಞಾನಿಗಳು, ಸುಭಾಷ್ ಚಂದ್ರ ಬೋಸ್ ಹೀಗೆ ಹತ್ತು ಹಲವು ವಿಷಯಗಳನ್ನು ದೇಶಕ್ಕೆ ಕೊಡುಗೆ ನೀಡಿದ ರಾಜ್ಯ ಪ. ಬಂಗಾಳ. ಪರಮಪೂಜ್ಯ ಡಾ. ಜಿ ಅವರೂ ತಮ್ಮ ವೈದ್ಯಕೀಯ ಜೀವನವನ್ನು ಸಾಣೆಗೊಡ್ಡಿದ್ದು ಕಲ್ಕತ್ತಾ. ಹೀಗೆ ಮುಂಚೂಣಿ ನಾಯಕರನ್ನು ದೇಶಕ್ಕೆ ಕೊಟ್ಟ ಕೀರ್ತಿ ಪ. ಬಂಗಾಳದ್ದು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ನ ಜುಗಲ್ಬಂದಿಯಿಂದ ಬಂಗಾಳ ಹೈರಾಣಾಗಿದೆ ಎಂದರು.
ಪ. ಬಂಗಾಳದಲ್ಲಿ ಬಿಜೆಪಿ 3 ರಿಂದ 75 ಸ್ಥಾನಕ್ಕೆ ಏರಿದೆ. ನಮಗೆ ಸ್ಥಾನ ಸಿಕ್ಕಿಲ್ಲ ಎಂಬ ನೋವಿಲ್ಲ. ಆದರೆ ಅಲ್ಲಿನ ಹಿಂಸೆ ನೋಡಿ ಹಿಂಸೆಯಾಗುತ್ತಿದೆ. ಪ.ಬಂಗಾಳ ಹಿಂದೆ ದೇಶಕ್ಕೆ ಆರ್ಥಿಕವಾಗಿ ಸಹ ಸಹಾಯ ಮಾಡುತ್ತಿತ್ತು. ಸದ್ಯ ಭ್ರಷ್ಟಾಚಾರದಿಂದಾಗಿ ಅಲ್ಲಿನ ವ್ಯವಸ್ಥೆಗಳು ಹದಗೆಟ್ಟಿದೆ. ಅಲ್ಲಿದ್ದ ದೊಡ್ಡ ಕಂಪೆನಿಗಳು, ಇಂದು ಅಲ್ಲಿಂದ ಕಾಲ್ಕೀಳುತ್ತಿರುವುದೇ ಇದಕ್ಕೆ ಉದಾಹರಣೆ. ಬಂಗಾಳ ವಿಭಜನೆಯ ಬಳಿಕ ಡಾ ಶಾಮಪ್ರಸಾದ್ ಮುಖರ್ಜಿ ಅವರು ಹಿಂದೂಗಳಿಗಾಗಿ ಪ. ಬಂಗಾಳ ಬೇಕು ಎಂದು ಹೇಳಿದವರು. ಇದು ಅವರ ದೂರದೃಷ್ಟಿಗೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯಪಟ್ಟರು.
ಅಂದು ನಕ್ಸಲಿಸಂ ಹುಟ್ಟಿದಲ್ಲೇ ಇಂದು ಬಿಜೆಪಿಗೆ ಹೆಚ್ಚು ಓಟು ಬಿಜೆಪಿಗೆ ಲಭಿಸಿದೆ. ಇದು ಬದಲಾವಣೆ. 1996 ರಲ್ಲಿ ಮಮತಾ ಬ್ಯಾನರ್ಜಿ ಮೇಲೆ ಕಮ್ಯುನಿಸ್ಟರು ಹಲ್ಲೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಮಮತಾ ರಾಜಕೀಯಕ್ಕೆ ಬರುತ್ತಾರೆ. ನನಗಾದ ಅನ್ಯಾಯ ಯಾರಿಗೂ ಆಗಬಾರದು ಎಂದು ಹೇಳಿಕೊಂಡು ರಾಜಕೀಯ ಆರಂಭಿಸಿದ ಮಮತಾ ಇಂದು ತಾನು, ತನ್ನ ಅನುಯಾಯಿಗಳ ಮೂಲಕ ಹಿಂಸಾತ್ಮಕ ಕೃತ್ಯ ನಡೆಸುತ್ತಿರುವುದು ಖೇದಕರ. ಈಗ ಅಲ್ಲಿ ಬಿಜೆಪಿ ಪರ ಜನರ ಒಲವು ಆರಂಭವಾಗಿದೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶ ಸಾಕ್ಷಿ ಎಂದರು. ಧಾರ್ಮಿಕತೆಯ ಮೇಲೂ ಸವಾರಿ ಮಾಡಿದ್ದ ದೀದಿ ಅನುಯಾಯಿಗಳನ್ನು ಎದುರಿಸಿ ಮತ್ತೆ ಅಲ್ಲಿ ಧರ್ಮ ನೆಲೆಗೊಳಿಸಲು ಜನರು ಪ್ರಯತ್ನ ನಡೆಸುತ್ತಿರುವುದು ಕಂಡುಬರುತ್ತದೆ. ಮುಸ್ಲಿಂ ಲೀಗ್ ,ಕಮ್ಯುನಿಸ್ಟ್ ಆರಂಭಿಸಿದ್ದ ಅಂದಿನ ಹಿಂಸೆಯನ್ನು ಮಮತಾರ ತೃಣಮೂಲ ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿರುವುದು ಅಲ್ಲಿ ನಡೆಯುತ್ತಿರುವ ಹಿಂಸಾತ್ಮಕ ದಂಗೆಗಳೇ ಹೇಳುತ್ತವೆ ಎಂದು ಹೇಳಿದರು. ಇದಕ್ಕೆ ಬೈಕ್ ವಾಹಿನಿ ಹಿಂಸೆ ಮಾಡುತ್ತಿರುವುದು ತೃಣಮೂಲ ಕಾಂಗ್ರೆಸ್ನ ಕೊಡುಗೆ ಎಂದವರು ತಿಳಿಸಿದರು.
ಹಿಂಸಾತ್ಮಕ ರಾಜಕಾರಣವನ್ನು ಇನ್ಹೆರಿಟ್ ಮಾಡುತ್ತಿದ್ದಾರೆ ಮಮತಾ ಬ್ಯಾನರ್ಜಿ. ಇದು ಚುನಾವಣಾ ಹಿಂಸೆಗಳಲ್ಲಿ ಕಂಡು ಬರುತ್ತಿದೆ. ಮತದಾನದ ಪ್ರಮಾಣ ಸಹ ಕಡಿಮೆಯಾಗುತ್ತಿದೆ. ತೃಣಮೂಲ ಕಾಂಗ್ರೆಸ್ ವಿರುದ್ಧ ನಿಲ್ಲುವ ಅಭ್ಯರ್ಥಿಗಳ ವಿರುದ್ಧ ಹಿಂಸೆ ಇದೇ ಪರಂಪರೆ ಮಮತಾ ರಾಜಕೀಯ, ಆಡಳಿತದಲ್ಲಿ ನಾವು ಗಮನಿಸಬಹುದು. ಅಲ್ಲಿ ಹಿಂಸೆಯ ಹೊರತಾಗಿ ಅಭಿವೃದ್ಧಿ ಕನಸಿನ ಮಾತಾಗಿದೆ. ಈ ಹಿಂಸೆಯ ಪ್ರತಿಕ್ರಿಯೆಯನ್ನು ನಾವೆಲ್ಲರೂ ಗಮನಿಸಬೇಕು. ಆಗ ಅಲ್ಲಿನ ದೀದಿಯ ಹಿಂಸಾತ್ಮಕ ರಾಜಕೀಯ ಚಿತ್ರಣ ನಮಗೆ ದೊರೆಯುತ್ತದೆ. ಅಸ್ಸಾಂ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಇದು ಭಾರತೀಯ ಪ್ರಜಾಪ್ರಭುತ್ವದ ದುರಂತವಾಗಿದೆ ಎಂದರು.
ಪ. ಬಂಗಾಳದಲ್ಲಿ ಮೇ 2 ರ ಮೊದಲೇ ಹಿಂಸೆಯ ಸುಳಿವಿತ್ತು. ಆದರೆ ಅದನ್ನು ತಡೆಯಲು ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಪೊಲೀಸರು ಸಹ ಈ ಹಿಂಸೆತ ಸಂದರ್ಭದಲ್ಲಿ ತಮ್ಮ ಇರುವಿಕೆ ತೋರಿಸಿದ್ದರೆ ಇಂದು ಅಂತಹ ಘಟನೆಗಳು ನಡೆಯುತ್ತಿರಲಿಲ್ಲವೇನೋ. ಇದೇ ರಾಜಕೀಯ ಪ್ರೇರಿತ ಆಡಳಿತ. ಆಡಳಿತದ ಅಪರಾಧೀಕರಣ. ಮಹಿಳೆಯರು, ವನವಾಸಿ, ಹಿಂದುಳಿದವರು ಮೊದಲಾದವರ ಜೊತೆಗೆ ಇನ್ನೂ ಅನೇಕರ ಮೇಲೆ ಹಿಂಸೆ ಪ. ಬಂಗಾಳದಲ್ಲಿ ನಡೆದಿರುವುದು 2156 ಘಟನೆಗಳು. ಅಂಗಡಿ, ಮನೆಗಳನ್ನು ಹಾಳುಗೆಡವಿರುವುದು, ಅತ್ಯಾಚಾರ, ಕೊಲೆ, ಕೊಲೆ ಬೆದರಿಕೆ ಗಳು ಅಲ್ಲಿನ ಪೊಲೀಸ್ ವ್ಯವಸ್ಥೆ ಹದೆಗೆಟ್ಟಿರುವುದಕ್ಕೆ ಸಾಕ್ಷಿ. ಅಲ್ಲಿನ ದುರಾಡಳಿತಕ್ಕೆ ಸಾಕ್ಷಿ. ಗ್ರಾಮ ಗ್ರಾಮಗಳಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕಸಿದುಕೊಳ್ಳುವ ಕೆಲಸವನ್ನು ತೃಣಮೂಲ ಕಾಂಗ್ರೆಸ್ ಮಾಡಿದೆ ಎಂಬುದಕ್ಕೆ ಸಾಕ್ಷಿಗಳಿವೆ. ಇವೆಲ್ಲದರ ಬಗ್ಗೆ ದೂರು ನೀಡಲು ಸಂತ್ರಸ್ತರಿಗೆ ಧೈರ್ಯ ತುಂಬಲಾಗುತ್ತಿದೆ. ಆದರೆ ಅವರು ಮುಂದೆ ಬರುತ್ತಿಲ್ಲ ಎಂದರೆ ಅಲ್ಲಿನ ಪರಿಸ್ಥಿತಿ ಎಷ್ಟು ಕೆಟ್ಟಿದೆ ಎಂಬುದು ಅರಿಯುತ್ತದೆ. ಅಂತಹ ಸಂತ್ರಸ್ತರಿಗೆ ನಾವು ನ್ಯಾಯ ದೊರಕಿಸುವ ಕೆಲಸ ಮಾಡಬೇಕಿದೆ. ಇದೆಲ್ಲ ನಮ್ಮ ಕರ್ತವ್ಯ ಎಂದರು.
ನ್ಯಾಯದ ಕಟಕಟೆಯಲ್ಲಿ ಮಮತಾ ಮತ್ತವರ ಬೆಂಬಲಿಗರನ್ನು ಕಾಣಬೇಕಿದೆ. ಭದ್ರತಾ ಪಡೆಗೇ ಬೆದರಿಕೆ ಒಡ್ಡಿದ ಮಮತಾ ಬ್ಯಾನರ್ಜಿ ಸಾಮಾನ್ಯರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆ ಕೆಲಸವನ್ನು ನಾವು ಮಾಡಬೇಕಿದೆ. ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ನಾವು ಸಹಕರಿಸಬೇಕಿದೆ ಎಂದು ಅವರು ತಿಳಿಸಿದರು. ಹತ್ಯೆ, ಬಂಗಾಳದ ಹಿಂಸೆಗೆ ಕಾನೂನಿನ ಮೂಲಕ ಉತ್ತರಿಸುವ ಕೆಲಸ ನಡೆಯುತ್ತಿದೆ. ಕೊರೋನಾ ಗೈಡ್ಲೈನ್ಸ್ ನಡುವೆಯೂ ಬಂಗಾಳದಲ್ಲಿ ಹಿಂಸೆ ನಡೆದಿದೆ. ಈ ಎಲ್ಲಾ ಹಿಂಸೆಗಳ ಬಗೆಗೂ ದೂರು ಸಲ್ಲಿಸಲಾಗಿದೆ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಶಬ್ದ ಪ್ರಯೋಗ ನಡೆಸಿದ್ದಾರೆ. ಇದೆಲ್ಲದರ ವಿರುದ್ಧ ಕಾನೂನು ಮೂಲಕವೇ ಉತ್ತರಿಸಬೇಕು. ಅಲ್ಲಿನ ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳುವ, ನ್ಯಾಯ ಒದಗಿಸುವ ಕೆಲಸವನ್ನು ನಾವೆಲ್ಲರೂ ನಿಷ್ಪಕ್ಷಪಾತವಾಗಿ ನಾವು ಮಾಡಬೇಕು. ಪ್ರಜಾಪ್ರಭುತ್ವಕ್ಕೆ ಬಂದೊದಗಿದ ಈ ಆಪತ್ತನ್ನು ಸರಿಸಿ ಅದನ್ನು ಉಳಿಸಬೇಕು ಎಂದು ಸಂತೋಷ್ ಹೇಳಿದರು. ತೃಣಮೂಲ ಗೂಂಡಾಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನ ಹೋರಾಟ ನಡೆಸಿ ಅಲ್ಲಿನ ನೊಂದವರ ಕಣ್ಣೀರು ಒರೆಸಬೇಕಿದೆ ಎಂದು ಹೇಳಿದರು. ಇದಕ್ಕೆ ಮಾಧ್ಯಮ ಸಹ ನಿಷ್ಪಕ್ಷಪಾತವಾಗಿ ಶ್ರಮಿಸಬೇಕು. ನಾವು ರಾಜಕೀಯ ಹಿಂಸೆಯನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸಿದೆ. ರಾಜಕೀಯ ಹಿಂಸೆ ಸಹಿಸದು. ಆ ಮೂಲಕ ಪ. ಬಂಗಾಳ ರಾಷ್ಟ್ರೀಯ ವಿಚಾರದ ಹೆದ್ದಾರಿಗೆ, ವಿಕಾಸಶೀಲತೆಗೆ ತೆರೆದುಕೊಳ್ಳುವಂತೆ ಮಾಡುವ ಜವಾಬ್ದಾರಿ ನಮ್ಮದು. ಹಿಂಸಾ ರಾಜಕೀಯವನ್ನು ಕೊನೆಗೊಳಿಸಬೇಕಿದೆ ಎಂದು ಅವರು ಹೇಳಿದರು. ಅಕ್ರಮ ವಲಸಿಗರಿಗೂ ಪಾಠ ಕಲಿಸಬೇಕಿದೆ. ಲೋಕತಾಂತ್ರಿಕ ರೀತಿಯಲ್ಲಿ ನಾವಿದನ್ನು ಬಗೆಹರಿಸಲಿದ್ದೇವೆ ಎಂದು ಹೇಳಿದರು.ನ್ಯಾಯ ತಡವಾದಾಗ ಅಸಹನೆ ಉಂಟಾಗುತ್ತದೆ. ಆದರೆ ಅದಕ್ಕೆ ಜಯ ನಿಶ್ಚಿತ. ಆದು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು. ಇದಕ್ಕೆ ಆರ್ಥಿಕ, ಬೌದ್ಧಿಕ ಸಹಕಾರ ಮುಖ್ಯ ಎಂದು ತಿಳಿಸಿದರು. ಬಿಜೆಪಿ ಈ ವಿಚಾರದಲ್ಲಿ ಜಾಣಮೌನ ವಹಿಸುವುದಿಲ್ಲ. ಈ ಸಂಕಲ್ಪ ಬಿಜೆಪಿಯದ್ದು ಎಂದು ನುಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.