ಬೆಂಗಳೂರು: ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟವಾದ ಕಾರ್ಯಸೂಚಿಯ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುತ್ತದೆ. ದೇಶದಲ್ಲಿಯೇ ಈ ನೀತಿಯನ್ನು ಮೊದಲು ಅನುಷ್ಠಾನಕ್ಕೆ ತಂದ ಕೀರ್ತಿಯನ್ನು ರಾಜ್ಯ ತನ್ನದಾಗಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ತಿಳಿಸಿದರು.
ಬೆಂಗಳೂರು ವಿವಿಯಲ್ಲಿ ನಡೆಯಲಿರುವ ‘ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶಗಳು ಮತ್ತು ಜಾರಿ’ ಎಂಬ ವಿಚಾರದ 5 ದಿನಗಳ ಕಾರ್ಯಾಗಾರವನ್ನು ವೆಬಿನಾರ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹೊಸ ನೀತಿಯ ಜಾರಿಗೆ ಬೇಕಾದ ಆಡಳಿತಾತ್ಮಕ ಸುಧಾರಣೆಗಳು ಮತ್ತು ಕಾನೂನಾತ್ಮಕ ತಿದ್ದುಪಡಿಗಳ ಬಗ್ಗೆ ರಾಜ್ಯ ಸರ್ಕಾರ ಪೂರಕವಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದರು. ಈ ನೀತಿಯನ್ನು ರಾಜ್ಯದ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸುವ ಉತ್ಸಾಹವನ್ನು ರಾಜ್ಯ ಸರ್ಕಾರ ಮೊದಲಿನಿಂದಲೂ ಇರಿಸಿಕೊಂಡೇ ಬಂದಿದೆ. ಈ ಶಿಕ್ಷಣ ನೀತಿಯ ಕರಡು ಪ್ರತಿ ಕೇಂದ್ರದಿಂದ ರಾಜ್ಯಕ್ಕೆ ದೊರೆತ ತಕ್ಷಣದಲ್ಲೇ, ಈ ನೀತಿಯ ಸಮರ್ಪಕ ಜಾರಿಗಾಗಿ ಕಾರ್ಯಪಡೆಯೊಂದನ್ನು ರೂಪಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಈ ನೀತಿಯ ಯಶಸ್ವಿ ಜಾರಿಯ ಹಿನ್ನೆಲೆಯಲ್ಲಿ ಈ ವರೆಗೂ ಹಲವಾರು ಮಹತ್ವದ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನರಲ್ಲಿ, ಪ್ರಾಧ್ಯಾಪಕ, ವಿದ್ಯಾರ್ಥಿ ಸೇರಿದಂತೆ ಸಮಾಜದ ಎಲ್ಲಾ ಜನರಲ್ಲಿಯೂ ಈ ಹೊಸ ಶಿಕ್ಷಣ ನೀತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರ ಸಮರ್ಥ ಜಾರಿಗಾಗಿ ಈಗಾಗಲೇ ರಚಿತವಾಗಿರುವ ಕಾರ್ಯಪಡೆ ಅಮೂಲ್ಯ ಸಲಹೆಗಳನ್ನು ನೀಡಿವೆ. ಇನ್ನು ಇದನ್ನು ಜಾರಿಗೊಳಿಸುವುದಷ್ಟೇ ಬಾಕಿ ಇದೆ. ಆ ಮೊದಲು ಇದರ ಸಂಪೂರ್ಣ ಪರಿಚಯವನ್ನು ರಾಜ್ಯಕ್ಕೆ ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.