ಚಾಮರಾಜನಗರ: ಕೊಳ್ಳೇಗಾಲದ ವೀರಾಂಜನೇಯ ದೇವಸ್ಥಾನದ ಆಂಜನೇಯ ದೇವರ ಗರ್ಭಗುಡಿಯಲ್ಲಿ ಏಸು ಮತ್ತು ಮೇರಿ ಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸಿರುವ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು. ದೇವಸ್ಥಾನದ ಅರ್ಚಕ ಟಿ.ವಿ.ಎಸ್. ರಾಘವನ್ ಅವರ ವಿರುದ್ಧವೂ ಆಕ್ಷೇಪ ವ್ಯಕ್ತವಾಗಿತ್ತು.
ಈ ಘಟನೆಯ ಬೆನ್ನಲ್ಲೇ, ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಚಕರು ಮಾತನಾಡಿದ್ದು, ಚಾಮರಾಜನಗರ ಜಿಲ್ಲೆಗೆ ಹೊಸದಾಗಿ ನೇಮಕಗೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ಅವರು ಆ ಚಿತ್ರಗಳನ್ನು ಗರ್ಭಗುಡಿಯಲ್ಲಿಟ್ಟು ಪೂಜೆ ಸಲ್ಲಿಸುವಂತೆ ಒತ್ತಡ ಹೇರಿದ್ದಾಗಿ ತಿಳಿಸಿದ್ದಾರೆ.
ಆಗಸ್ಟ್ 5 ರಂದು ವಿಶ್ವ ಹಿಂದೂ ಪರಿಷತ್ ಮತ್ತು ಇನ್ನಿತರ ಹಿಂದೂಪರ ಸಂಘಟನೆಗಳು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಶಿಲಾನ್ಯಾಸ ದಿನ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಿದ್ದರು. ಆ ಪೂಜೆ ಸಂಪೂರ್ಣಗೊಂಡ ಬಳಿಕ ಚಾಮರಾಜನಗರದ ಎಸ್ಪಿ ದಿವ್ಯಾ ಸಾರಾ ಥೋಮಸ್ ದೇವಾಲಯಕ್ಕೆ ಆಗಮಿಸಿದ್ದಾರೆ. ಆ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಏಸು ಮತ್ತು ಮೇರಿಯ ಚಿತ್ರಗಳನ್ನು ಗರ್ಭಗುಡಿಯಲ್ಲಿಡುವಂತೆ ತಿಳಿಸಿದ್ದಾಗಿಯೂ ಅರ್ಚಕರು ಹೇಳಿದ್ದಾರೆ. ಅವರ ಒತ್ತಡಕ್ಕೆ ಮಣಿದು ಗರ್ಭಗುಡಿಯಲ್ಲಿ ಆ ಚಿತ್ರಗಳನ್ನಿರಿಸಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ.
ಘಟನೆಯ ಬಳಿಕ ಅನೇಕ ಮಂದಿ ಹಿಂದೂ ಧರ್ಮೀಯರು ಎಸ್ಪಿ ದಿವ್ಯಾ ಅವರ ಮೇಲೆ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದು, ಹಲವರು ಟ್ವೀಟರ್ ಮೂಲಕ ರಾಜ್ಯ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.