ಬೆಂಗಳೂರು: ಕೊರೋನಾ ಆತಂಕದ ನಡುವೆ ಉದ್ಯೋಗವನ್ನರಸಿ ಪಟ್ಟಣ ಸೇರಿದ್ದ ಜನರು ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿ ಉತ್ತಮ ಮಳೆಯೂ ಆಗಿದ್ದು ಹೆಚ್ಚಿನ ಜನರು ಮತ್ತೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಬಾರಿ ರಾಜ್ಯ ಅಧಿಕ ಇಳುವರಿ ಪಡೆಯುವ ಸಾಧ್ಯತೆ ಇದೆ ಎಂದು ರಾಜ್ಯ ಕೃಷಿ ಇಲಾಖೆ ಮಾಹಿತಿ ನೀಡಿದೆ.
ಇಲಾಖೆಯ ಅಂಕಿ ಅಂಶಗಳು ನೀಡಿರುವ ವರದಿಯಂತೆ ರಾಜ್ಯದಲ್ಲಿನ 73 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ 60 ಲಕ್ಷ ಹೆಕ್ಟೇರ್ ಗಳಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಬಿತ್ತನೆ ಕಾರ್ಯಗಳೂ ಮುಗಿದಿದ್ದು, ಇದರಿಂದಾಗಿ ರಾಜ್ಯದ 60% ರಷ್ಟು ಅವಶ್ಯಕತೆಯನ್ನು ಪೂರೈಸಲಿದೆ ಎಂದು ತಿಳಿಸಿದೆ. ಕಳೆದ ವರ್ಷದಲ್ಲಿ ಜುಲೈ ಅಂತ್ಯದ ವೇಳೆ 44. 99 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ನಡೆದಿತ್ತು. ಇದರೆ ಈ ಬಾರಿ ಜುಲೈ ತಿಂಗಳಿನಲ್ಲಿಯೇ ಅದಕ್ಕಿಂತಲೂ ಹೆಚ್ಚು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಪೂರ್ಣವಾಗಿದ್ದು, ಉದ್ದೇಶಿತ ಪ್ರಮಾಣಕ್ಕೂ ಹೆಚ್ಚಿನ ಬೆಳೆಯನ್ನು ಪಡೆಯುವ ಭರವಸೆ ಇರುವುದಾಗಿಯೂ ತಿಳಿಸಿದೆ.
ಈ ಸಂಬಂಧ ಮಾಹಿತಿ ನೀಡಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ಕೊರೋನಾ ಲಾಕ್ಡೌನ್ನಿಂದಾಗಿ ಜನರು ಮತ್ತೆ ಹಳ್ಳಿಗಳನ್ನು ಸೇರಿದ್ದಾರೆ. ಹೆಚ್ಚಿನ ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ. ಈ ವರೆಗೆ ಕೃಷಿ ಚಟುವಟಿಕೆಗಳು ನಡೆಯದೇ ಪಾಳು ಬಿದ್ದಿದ್ದ ಕೃಷಿ ಭೂಮಿಯಲ್ಲಿಯೂ ಈ ಬಾರಿ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. ರಾಜ್ಯವು ಉದ್ದೇಶಿಸಿರುವ 73 ಲಕ್ಷ ಹೆಕ್ಟೇರ್ನ ಗುರಿಯನ್ನು ಮೀರಿ ಕೃಷಿ ಚಟುವಟಿಕೆಗಳು ನಡೆಯುವ ಮತ್ತು ಸಾಕಷ್ಟು ಪ್ರಮಾಣದಲ್ಲಿ ಇಳುವರಿ ಪಡೆಯುವ ಎಲ್ಲಾ ಸಾಧ್ಯತೆಗಳೂ ಇರುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಈ ಬಾರಿ ಉತ್ತಮ ಮಳೆಯಾಗಿದೆ. ಜೊತೆಗೆ ಹೊಲ ಗದ್ದೆಗಳಲ್ಲಿ ದುಡಿಯುವವರ ಸಂಖ್ಯೆಯೂ ಹೆಚ್ಚಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಉತ್ತಮ ಇಳುವರಿಗಾಗಿ ರಾಜ್ಯ ಎದುರು ನೋಡುತ್ತಿರುವುದಾಗಿಯೂ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ನಗರದ ಕೃಷಿ ವಿಜ್ಞಾನ ವಿವಿಯ ಮಾಜಿ ರಿಜಿಸ್ಟ್ರಾರ್ ಪ್ರೊ. ರಾಜೇಗೌಡ ಅವರು, ಕಳೆದ 90 ರ ದಶಕದಿಂದ ಈ ವರೆಗೆ ರಾಜ್ಯದಲ್ಲಿ ಕೇವಲ 30 ರಿಂದ 50 ಲಕ್ಷ ಹೆಕ್ಟೇರ್ ಭೂಮಿಯಲ್ಲಷ್ಟೇ ಕೃಷಿ ಚಟುವಟಿಕೆಗಳು ನಡೆಯುತ್ತಿತ್ತು. ಆದರೆ ಈ ಬಾರಿ 70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದೆ. ಈ ಬಾರಿ ಉತ್ತಮ ಮಳೆಯೂ ಸುರಿದಿದ್ದು, ಈ ವರ್ಷದಲ್ಲಿ ರಾಜ್ಯದಲ್ಲಿ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುವ ಸಾಧ್ಯತೆ ಇರುವುದಾಗಿಯೂ ತಿಳಿಸಿದ್ದಾರೆ. ಇದರಿಂದಾಗಿ ರೈತರು ಉತ್ತಮ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.