ಧಾರವಾಡ: ಕೊರೋನಾ ಸೋಂಕಿಗೆ ದೇಶ ಲಾಕ್ಡೌನ್ ಆಗಿ ಎಲ್ಲರೂ ಮನೆ ಸೇರಿದ್ದಾರೆ. ಆದರೆ ಆರೋಗ್ಯ ರಕ್ಷಕರು, ಪೊಲೀಸರು ಮಾತ್ರ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದವರ ಕಾಳಜಿ, ತಮ್ಮ ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ಕರ್ತವ್ಯದ ನಡುವೆ ಮಾನವೀಯ ಕೆಲಸಗಳನ್ನು ಮಾಡುವ ಮೂಲಕವೂ ಜನರಲ್ಲಿ ಧೈರ್ಯ ತುಂಬುವ, ಬಡ ಜನರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ದಿನಸಿ ವಿತರಿಸುವ ಮೂಲಕ ಧಾರವಾಡ ದ ಗ್ರಾಮೀಣ ಠಾಣೆಯ ಪಿಎಸ್ಐ ಮಹೇಂದ್ರ ಕುಮಾರ್ ಮಾದರಿಯಾಗಿದ್ದಾರೆ. ಆ ಮೂಲಕ ಪೊಲೀಸರಲ್ಲಿಯೂ ಮಾತೃ ಹೃದಯ ಇದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.
ತಮ್ಮ ಸ್ವಂತ 2.50 ಲಕ್ಷ ರೂ. ಗಳ ದಿನಸಿ ವಿತರಣೆ ಮಾಡಿ ಮಾನವೀಯತೆ ಮೆರೆದಿರುವ ಇವರು ವಿಜಯಪುರದ ತಾಂಡಾದವರು. ತಮ್ಮ ಠಾಣಾ ವ್ಯಾಪ್ತಿಗೆ ಒಳಪಟ್ಟ ಬಡ, ನಿರ್ಗತಿಕ, ಪಡಿತರ ರಹಿತರು, ಕೂಲಿ ಕಾರ್ಮಿಕರು, ವಲಸಿಗರು ಮೊದಲಾದ ಕುಟುಂಬಗಳ ಮಾಹಿತಿಯನ್ನು ತಮ್ಮ ಠಾಣೆಯ ಇಚರ ಸಿಬ್ಬಂದಿಗಳೊಂದಿಗೆ ಸೇರಿ ಕಲೆ ಹಾಕಿರುವ ಇವರು, ನಂತರದಲ್ಲಿ ಅವರಿರುವ ಪ್ರದೇಶಗಳಿಗೆ ತೆರಳಿ ಅವರಿಗೆ ದಿನಸಿ ವಿತರಣೆ ಮಾಡುವ ಮೂಲಕ ಬಡವರ ಹಸಿವು ನೀಗಿಸಿದ್ದಾರೆ.
ಮೂಲತಃ ಬಡ ಕುಟುಂಬದಿಂದ ಬಂದ ಮಹೇಂದ್ರ ಅವರು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಬಡವರ ಸೇವೆಗೆ ನಿಂತಿರುವುದು ನಿಜಕ್ಕೂ ಶ್ಲಾಘನೀಯ. ಇವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರಾ ಅವರು, ಮಹೇಂದ್ರ ಕುಮಾರ್ ಅವರ ಈ ಸಮಾಜ ಸೇವೆಗೆ ಅಮ್ಮಿನಬಾವಿಯಲ್ಲಿ ಚಾಲನೆ ನೀಡಿದ್ದಾರೆ. ಅನಂತರದಲ್ಲಿ ಕಾರ್ಯ ಪ್ರವೃತ್ತರಾದ ಮಹೇಂದ್ರ ಅವರು ಅಕ್ಕಿ, ಸಾಂಬಾರ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಅವಶ್ಯವಿರುವವರಲ್ಲಿಗೆ ತಮ್ಮದೇ ವಾಹನದಲ್ಲಿ ತಲುಪಿಸುವ ಕೆಲಸವನ್ನೂ ಮಾಡಿದ್ದು, ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪೊಲೀಸ್ ಎಂದರೆ ಭಯ ಪಡುವಂತಹ ಸ್ಥಿತಿ ಈರುವಾಗ, ಪೊಲೀಸರು ನಮ್ಮ ರಕ್ಷಕರು, ಅವರಿಗೆ ಭಯ ಪಡಬೇಕಾದ ಅಗತ್ಯವಿಲ್ಲ. ಅವರಲ್ಲಿಯೂ ಮಾನವೀಯ ಗುಣಗಳು, ಸಮಾಜದ ಕಾಳಜಿ ಇದೆ ಎಂಬುದನ್ನು ತಮ್ಮ ಮಾದರಿ ಕಾರ್ಯದ ಮೂಲಕ ಮಹೇಂದ್ರ ಕುಮಾರ್ ಅವರು ಸಾಧಿಸಿ ತೋರಿಸಿದ್ದಾರೆ. ಆ ಮೂಲಕ ಪೊಲೀಸರು ಸಮಾಜದ ಸುವ್ಯವಸ್ಥೆಯ ಜೊತೆಗೆ, ಜನರ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಅವರ ಬದುಕಿಗೂ ಬೆಳಕಾಗುತ್ತಿರುವುದಕ್ಕೆ ಸಾಕ್ಷಿ ಪಿಎಸ್ಐ ಮಹೇಂದ್ರ ಸರ್. ಅವರ ಮಾದರಿ ಕಾರ್ಯಕ್ಕೆ ಹ್ಯಾಟ್ಸಾಪ್ ಹೇಳಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.