ಇಸ್ಲಾಮಾಬಾದ್: ಪಾಕಿಸ್ಥಾನಕ್ಕೆ ಮತ್ತೊಂದು ದೊಡ್ಡ ಮಟ್ಟದ ಹಿನ್ನಡೆಯಾಗಿದೆ, ಇಸ್ಲಾಮಿಕ್ ಸಹಕಾರ ಸಂಘಟನೆ (Organization of Islamic Cooperation (ಒಐಸಿ))ಯಲ್ಲಿ ಕಾಶ್ಮೀರದ ಬಗ್ಗೆ ವಿದೇಶಾಂಗ ಮಂತ್ರಿಗಳ ಮಂಡಳಿಯ ತುರ್ತು ಸಭೆ ನಡೆಸಬೇಕೆಂಬ ಪಾಕಿಸ್ಥಾನದ ಮನವಿಯನ್ನು ಸೌದಿ ಅರೇಬಿಯಾ ಮತ್ತೊಮ್ಮೆ ನಿರಾಕರಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ಒಐಸಿಯಲ್ಲಿ ಕಾಶ್ಮೀರ ಕುರಿತು ವಿಶೇಷ ಅಧಿವೇಶನ ನಡೆಸಲು ಸೌದಿ ಅರೇಬಿಯಾವನ್ನು ಒಪ್ಪಿಸುವ ಮೂಲಕ ತಾನು ಮೇಲುಗೈ ಸಾಧಿಸಿದ್ದೇನೆ, ಇದು ನಮಗೆ ಸಿಕ್ಕ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವು ಎಂದು ಪಾಕಿಸ್ಥಾನ ಡಿಸೆಂಬರ್ನಲ್ಲಿ ಕಹಳೆ ಮೊಳಗಿಸಿತ್ತು. ಆದರೆ, ಭಾರತದ ಅಧಿಕಾರಿಗಳು ಈ ಸುದ್ದಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು, ಒಐಸಿ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ ಅಥವಾ ಸಭೆಯ ಬಗ್ಗೆ ಯಾವುದೇ ದೃಢೀಕರಣವನ್ನು ನೀಡಿಲ್ಲ ಎಂದು ಹೇಳಿದ್ದರು.
ಕಾಶ್ಮೀರ ಕುರಿತು ಚರ್ಚೆಗೆ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ಮನವಿಯನ್ನು ಸೌದಿ ಅರೇಬಿಯಾ ತಿರಸ್ಕರಿಸಿದೆ ಎಂದು ಪಾಕಿಸ್ಥಾನ ಮಾಧ್ಯಮ ಗುರುವಾರ ವರದಿ ಮಾಡಿವೆ. ಒಐಸಿ ಫೆಬ್ರವರಿ 9 ರಂದು ಜೆಡ್ಡಾದಲ್ಲಿ ತನ್ನ ಹಿರಿಯ ಅಧಿಕಾರಿಗಳ ಸಭೆ ನಡೆಸುತ್ತಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಾಗಿನಿಂದ ಖಾನ್ ಭಾರತದ ವಿರುದ್ಧ ವಿಶ್ವದಾದ್ಯಂತ ಅಪ ಪ್ರಚಾರ ನಡೆಸುತ್ತಾ ಬಂದಿದ್ದಾರೆ.
ಇತ್ತೀಚೆಗೆ, ಸೌದಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರು ಖಾನ್ ಅವರ ಮಲೇಷ್ಯಾ ಪ್ರವಾಸವನ್ನು ರದ್ದುಗೊಳಿಸುವಂತೆ ಒತ್ತಡ ಹೇರಿದ್ದರು. ಖಾನ್ ಅವರು ಮಲೇಷ್ಯಾದಲ್ಲಿ ಮಹತೀರ್ ಮೊಹಮದ್ ಸರ್ಕಾರ ಆಯೋಜಿಸಿದ್ದ ಇಸ್ಲಾಮಿಕ್ ಶೃಂಗಸಭೆಯಲ್ಲಿ ಭಾಗವಹಿಸಿ ಕಾಶ್ಮೀರದ ವಿಷಯ ಬಗ್ಗೆ ಭಾರತವನ್ನು ದೂಷಿಸುವ ಉದ್ದೇಶವನ್ನು ಹೊಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.