ಬೆಂಗಳೂರು: ಐದು ಮಂದಿ ಅನಾರೋಗ್ಯ ಪೀಡಿತ ಮಕ್ಕಳು ಒಂದು ದಿನದ ಮಟ್ಟಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಸಮವಸ್ತ್ರ ತೊಟ್ಟು ಸಂಭ್ರಮ ಪಟ್ಟಿದ್ದಾರೆ.
ಮೇಕ್ ಎ ವಿಷ್ ಫೌಂಡೇಶನ್ ಮತ್ತು ನಗರ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾದ ವಿನೂತನ ಕಾರ್ಯಕ್ರಮ ಇದಾಗಿದ್ದು, ರುತನ್ ಕುಮಾರ್, ಮೊಹಮ್ಮದ್ ಸಾಹಿಬ್, ಸಯ್ಯದ್ ಇಮಾದ್, ಶ್ರಾವಣಿ ಮತ್ತು ಅರ್ಫತ್ ಪಾಷಾ ಎಂಬ ಮಕ್ಕಳು ಒಂದು ದಿನದ ಮಟ್ಟಿಗೆ ನಗರ ಪೊಲೀಸ್ ಆಯುಕ್ತರಾಗಿದ್ದಾರೆ. ಅವರಿಗೆ ಪೊಲೀಸ್ ತಂಡದ ವತಿಯಿಂದ ಸಾಂಪ್ರದಾಯಿಕ ಗಾರ್ಡ್ ಆಫ್ ಆನರ್ ನೀಡಲಾಯಿತು. ಮಾತ್ರವಲ್ಲದೇ, ಶ್ವಾನದಳ ಕೂಡ ಅವರಿಗೆ ಗೌರವ ಸಲ್ಲಿಸಿತು.
ಪೊಲೀಸ್ ಶ್ವಾನಗಳೊಂದಿಗೆ ಸಂವಹನವನ್ನು ನಡೆಸುವ ಮೂಲಕ ಈ ಮಕ್ಕಳು ಸಂಭ್ರಮ ಪಟ್ಟುಕೊಂಡರು ಮತ್ತು ಸಮವಸ್ತ್ರ ತೊಟ್ಟು ತಮ್ಮ ಭವಿಷ್ಯದ ಕನಸನ್ನು ನನಸಾಗಿಸಿಕೊಂಡರು. ತಮ್ಮ ಹೊಸ ಜವಾಬ್ದಾರಿಗಳು ಮತ್ತು ಅವಕಾಶಗಳ ಬಗ್ಗೆ ಕುತೂಹಲದಿಂದ ಅವರು ತಿಳಿದುಕೊಂಡರು.
ನೀನು ಪೊಲೀಸ್ ಆಯುಕ್ತರಾಗಿ ಏನು ಮಾಡುತ್ತಿ ಎಂದು ಅರ್ಫತ್ ಪಾಷಾನನ್ನು ಕೇಳಿದಾಗ, ನಾನು ಕೆಟ್ಟ ಜನರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದಾನೆ.
ಈ ಮಕ್ಕಳು ಪೊಲೀಸ್ ಠಾಣೆಗೆ ಭೇಟಿ ಕೊಡಲು ಇಚ್ಛಿಸುತ್ತಿದ್ದಾರೆ ಎಂಬುದನ್ನು ಅರಿತುಕೊಂಡ ಮೇಕ್ ಎ ವಿಷ್ ಫೌಂಡೇಶನ್ನ ಗಂಗಾಧರ್ ಅವರು, ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮಕ್ಕಳಿಗೆ ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಈ ಐದು ಮಕ್ಕಳು ಕೂಡ ಜೀವ ಬಲಿ ಪಡೆಯುವಂತಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿ ಆಗಬೇಕೆಂಬುದು ಇವರುಗಳ ಕನಸಾಗಿದ್ದಕ್ಕಾಗಿ ಅವರಿಗೆ ಸಮವಸ್ತ್ರವನ್ನು ತೊಡುವ ಅವಕಾಶ ಮಾಡಿಕೊಡಲಾಯಿತು ಎಂದು ಗಂಗಾಧರ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.