ಶಿರಿಸಿ: ಅಂಗಾಂಶ ಕೃಷಿ ಮೂಲಕ ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಅಮೂಲ್ಯ ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಬೃಹತ್ ಪ್ರಮಾಣದಲ್ಲಿ ಮಾಡುವ ಉದ್ದೇಶದೊಂದಿಗೆ ಆರಂಭಗೊಂಡಿರುವ ಬಂಡಿಮನೆ ಲೈಫ್ ಸೈನ್ಸ್ ರಿಸರ್ಚ್ ಫೌಂಡೇಶನ್ (ಬಿಎಲ್ಆರ್ಎಫ್) ಇದೀಗ ’ಚಿತ್ರಮೂಲ’ ಔಷಧಿ ಗಿಡಗಳನ್ನು ಸಾವಿರ ಸಂಖ್ಯೆಯಲ್ಲಿ ಬೆಳೆಸಿದೆ.
ನೋವು ನಿವಾರಕ ಔಷಧ ತಯಾರಿಕೆಯಲ್ಲಿ ಬಳಸಲಾಗುವ ಈ ಸಸ್ಯದ ಕುರಿತು ಫೌಂಡೇಶನ್ನ ಮುಖಂಡ ವಿನಯ ಹೆಗಡೆ ಅವರು ಮಾಹಿತಿಯನ್ನು ನೀಡಿದ್ದಾರೆ.
ದೇಶದಲ್ಲಿ ಪ್ರಥಮ ಬಾರಿಗೆ ಈ ಪ್ರಯೋಗಾಲಯ ಅಭಿವೃದ್ಧಿ ಪಡಿಸಿದ ಚಿತ್ರಮೂಲ ಔಷಧಿ ಗಿಡವನ್ನು ಇದೀಗ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರ ಬೇರನ್ನು ನೋವು ನಿವಾರಕ ಔಷಧ ತಯಾರಿಕೆಯಲ್ಲಿ ಬಳಸುತ್ತಿದ್ದು, ಅಪಾರವಾದ ಬೇಡಿಕೆಯಿದೆ. ರೈತರು ಹೆಚ್ಚಿನ ಖರ್ಚಿಲ್ಲದೇ ತಮ್ಮ ಕೃಷಿ ಭೂಮಿಯಲ್ಲಿ ಬೆಳೆಸಬಹುದಾಗಿದೆ ಎಂದಿದ್ದಾರೆ.
ಸಸ್ಯ ಅಂಗಾಂಶ ಕೃಷಿಯನ್ನು ಪ್ರಮುಖವಾಗಿರಿಸಿಕೊಂಡಿರುವ ಬಂಡಿಮನೆ ಲೈಫ್ ಸೈನ್ಸ್ ರಿಸರ್ಚ್ ಫೌಂಡೇಶನಿನ ಅಂಗಾಂಶ ಕೃಷಿ ಪ್ರಯೋಗಾಲಯವು, ಖಾಸಗಿ ವಲಯದಲ್ಲಿ ನಡೆಸುತ್ತಿರುವ ಪ್ರಥಮ ಸುಸಜ್ಜಿತ ಪ್ರಯೋಗಾಲಯ ಆಗಿದೆ. ಇದೀಗ ಪೂರ್ಣ ಪ್ರಮಾಣದ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಅಂಗಾಂಶ ಕೃಷಿ, ಸಸ್ಯ ರಸಾಯನಶಾಸ್ತ್ರ ಹಾಗೂ ಜೀವ ರಸಾಯನಶಾಸ್ತ್ರ ಪ್ರಯೋಗಾಲಯಗಳಿವೆ. ಸಸ್ಯಗಳ ರಾಸಾಯನಿಕ ವಿಶ್ಲೇಷಣೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಯೋಗಾಲಯದ ಗಿಡಗಳನ್ನು ಬೆಳೆಸಲು ವಿಶಾಲವಾದ ಹಸಿರುಮನೆ ಹಾಗೂ ನರ್ಸರಿ ಸೌಲಭ್ಯವನ್ನೂ ಈ ಕೇಂದ್ರ ಹೊಂದಿದೆ.
ಇಲ್ಲಿ ಅಭಿವೃದ್ಧಿ ಪಡಿಸಿದ ಗಿಡಗಳನ್ನು ಕೃಷಿ ಜಮೀನಿನಲ್ಲಿ ಬೆಳೆಸಿ ಅಲ್ಲಿನ ಫಲಿತಾಂಶದ ಆಧಾರದಲ್ಲಿ ರೈತರಿಗೆ ಬೆಳೆಸಲು ಸಲಹೆ ನೀಡಲಾಗುತ್ತಿದೆ. ಪ್ರಸ್ತುತ 25 ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳ ಔಷಧಿ ಗಿಡ, ಸಾಂಬಾರ ಬೆಳೆ, ಕೃಷಿ ಅರಣ್ಯ, ಪಶ್ಚಿಮಘಟ್ಟದ ಅಪರೂಪದ ಗಿಡ ಮೂಲಿಕೆ ಕುರಿತು ಪ್ರಯೋಗ ನಡೆಸಲಾಗುತ್ತಿದೆ. ಸಂಪೂರ್ಣ ಫಲಿತಾಂಶ ಬಂದ ನಂತರ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು. ಮೊದಲ ಬಾರಿಗೆ ಚಿತಯ್ರಕೂಟ ಗಿಡವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದೇವೆ ಎಂದು ವಿನಯ ಹೆಗಡೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.