ಕಣ್ಣೂರು: ಸ್ವಾತಂತ್ರ್ಯ ಚಳುವಳಿಯ ವೇಳೆ ಪ್ರತ್ಯೇಕಗೊಂಡಿದ್ದ ವಿವಾಹಿತ ಜೋಡಿಯೊಂದು 72 ವರ್ಷಗಳ ಬಳಿಕ ಪರಸ್ಪರ ಭೇಟಿಯಾದ ಹೃದಯಸ್ಪರ್ಶಿ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕಣ್ಣುರು ಜಿಲ್ಲೆಯ ಕಾವುಂಬಾಯಿ ಗ್ರಾಮದವರಾದ 93 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಇಕೆ ನಾರಾಯಣನ್ ನಂಬಿಯಾರ್ ಅವರು ತಮ್ಮ ಮೊದಲ ಪತ್ನಿ, 89 ವರ್ಷದ ಶಾರದಾ ಅವರನ್ನು ಮೊನ್ನೆಯಷ್ಟೇ ಭೇಟಿಯಾದರು.
ಶಾರದಾರನ್ನು ಭೇಟಿಯಾಗಲು ಅವರ ಮನೆಗೆಯೇ ನಂಬಿಯಾರ್ ತೆರಳಿದ್ದರು. ಪತಿಯನ್ನು ಕಂಡು ಭಾವುಕರಾಗಿದ್ದ ಶಾರದಾ ಒಂದೇ ಒಂದು ಮಾತನಾಡದೆ ಮೌನವಾಗಿದ್ದರು. ಪತ್ನಿಯನ್ನು ಮಾತನಾಡಿಸಲು ನಂಬಿಯಾರ್ ಪ್ರಯತ್ನಿಸುತ್ತಲೇ ಇದ್ದರು. ಕೊನೆಗೂ ಮೌನ ಮುರಿದ ಶಾರದ, ನನಗೆ ಯಾರ ಮೇಲೂ ಕೋಪವಿಲ್ಲ ಎಂದು ಹೇಳಿದರು.
ಮದುವೆಯಾದಾಗ ಶಾರದಾ ಅವರಿಗೆ 13 ವರ್ಷ, ನಂಬಿಯಾರ್ ಅವರಿಗೆ 17 ವರ್ಷ.
1949ರಲ್ಲಿ ಅಪ್ಪನ ನೇತೃತ್ವದಲ್ಲಿ ಕಾವುಂಬಾಯಿ ಚಳುವಳಿಯಲ್ಲಿ ಧುಮುಕ್ಕಿದ್ದ ನಂಬಿಯಾರ್ ಬಳಿಕ 8 ವರ್ಷ ಜೈಲು ಪಾಲಾಗಿದ್ದರು. ಅವರ ತಂದೆಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇತ್ತ ಪೊಲೀಸರ ಕಾಟ ತಾಳಲಾರದೆ ಶಾರದಾ ತವರು ಮನೆ ಸೇರಿದ್ದರು. ಇವರಿದ್ದ ಮನೆಗೆ ಬಳಿಕ ಬೆಂಕಿ ಹಚ್ಚಲಾಗಿತ್ತು ಎನ್ನಲಾಗಿದೆ.
ಪ್ರತ್ಯೇಕಗೊಂಡ ಬಳಿಕ ಪರಸ್ಪರ ಸಂಪರ್ಕವನ್ನೇ ಕಳೆದುಕೊಂಡಿದ್ದ ಇವರಿಬ್ಬರೂ ಬೇರೆ ಬೇರೆ ವಿವಾಹವಾಗಿದ್ದರು. ಶಾರದಾ ಅವರಿಗೆ ಪ್ರಸ್ತುತ 4 ಮಕ್ಕಳಿದ್ದಾರೆ. ಇವರ ಮಗ ಭಾರ್ಗವನ್ ಮೂಲಕವೇ ಇದೀಗ ಈ ಇಬ್ಬರು ಪರಸ್ಪರ ಭೇಟಿಯಾಗುವಂತಾಗಿದೆ.
ತನ್ನ ತಾಯಿಯ ಮೊದಲ ಪತಿಯ ಬಗ್ಗೆ ಯಾವುದೋ ಮೂಲದಿಂದ ಮಾಹಿತಿ ತಿಳಿದುಕೊಂಡಿದ್ದ ಭಾರ್ಗವನ್, ನಂಬಿಯಾರ್ ಅವರನ್ನು ಸಂಪರ್ಕಿ ತಮ್ಮ ತಾಯಿಯನ್ನು ಭೇಟಿಯಾಗುವಂತೆ ಮಾಡಿದ್ದಾರೆ.
ಇದೀಗ ಈ ಎರಡೂ ಕುಟುಂಬಗಳು ಪರಸ್ಪರ ಸಂಪರ್ಕದಲ್ಲಿರಲು ನಿರ್ಧರಿಸಿದ್ದು, ಔತನಕೂಟವನ್ನೂ ಪರಸ್ಪರರಿಗಾಗಿ ಏರ್ಪಡಿಸಲು ಮುಂದಾಗಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.