ಬೆಂಗಳೂರು : ಕಳೆದ ಮೂರ್ನಾಲ್ಕು ದಶಕಗಳಿಂದ ನಾನಾ ಕಾರಣಕ್ಕಾಗಿ ನಮ್ಮ ರಾಜ್ಯದ ಹಸಿರ ಹೊದಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಂದೊಮ್ಮೆ ’ಸುಂದರ ನದಿ ವನಗಳ ನಾಡೇ’, ’ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳ ನಾಡು’ ಎಂದು ಹಿರಿಯ ಕವಿಗಳಿಂದ ಕರೆಯಿಸಿಕೊಂಡಿದ್ದ ನಮ್ಮ ಕನ್ನಡ ನೆಲ ಇದೀಗ ಪ್ರಾಕೃತಿಕವಾಗಿ ಸೊರಗಿದೆ. ಕನ್ನಡ ನೆಲವನ್ನು ಮತ್ತೆ ಹಸಿರಾಗಿಸುವ ಬೃಹತ್ ರಾಜ್ಯವ್ಯಾಪಿ ಅಭಿಯಾನವೊಂದು ಮುಂದಿನ ತಿಂಗಳು ನಡೆಯಲಿದೆ.
ಪರಿಸರ ಸಂರಕ್ಷಣೆ ಹಾಗೂ ಹಸಿರ ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಸಮರ್ಥ ಭಾರತ ಸಂಸ್ಥೆಯು ಮುಂದಿನ ಜೂನ್ 5 ರಿಂದ ಆಗಸ್ಟ್ 15 ರವರೆಗೆ ರಾಜ್ಯಾದ್ಯಂತ 1 ಕೋಟಿ ಗಿಡ ನೆಡುವ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ರಾಜ್ಯದ ಸುಮಾರು 400 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈಜೋಡಿಸಲಿವೆ. ರಾಜ್ಯಾದ್ಯಂತ ಸುಮಾರು 1ಕೋಟಿಗೂ ಅಧಿಕ ಗಿಡ ನೆಡುವ ಪ್ರಕ್ರಿಯೆಗೆ ಈಗಾಗಲೇ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ ಗಿಡಗಳನ್ನು ಕೊಡುಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಗಿಡಗಳನ್ನು ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮರ್ಥ ಭಾರತ ಸಂಸ್ಥೆಯ ಪ್ರಮುಖರು ಹೇಳಿದರು.
ಪ್ರತ್ಯಕ್ಷ ಗಿಡ ನಡೆವುದು. ಸೀಡ್ ಬಾಲನ್ನು ನೆಲದಲ್ಲಿ ಹೂತು ನೆಡುವುದು, ಆಯಾ ಗಿಡಗಳ ಬೀಜಗಳನ್ನು ನೇರವಾಗಿ ಬಿತ್ತುವುದು ಮುಂತಾದ ಪ್ರಕಾರಗಳಲ್ಲಿ ಈ ಅಭಿಯಾನ ನಡೆಯಲಿದೆ.
ಹೀಗಿರಲಿದೆ ಅಭಿಯಾನ:
- ಯಾವಾಗ? ಜೂನ್ 5 ರಿಂದ ಆಗಸ್ಟ್ 15 ರವರೆಗೆ
- ಎಲ್ಲಿ? ತಾಲೂಕು- ಹೋಬಳಿ-ಗ್ರಾಮ ಪಂಚಾಯತಿ ಮಟ್ಟದಲ್ಲಿ. ಸರಕಾರಿ ಅಥವಾ ಖಾಸಗಿ ಖಾಲಿ ಸ್ಥಳಗಳಲ್ಲಿ. ಇದಕ್ಕಾಗಿ ಸಂಬಂಧಪಟ್ಟವರಲ್ಲಿ ಪೂರ್ವ ಅನುಮತಿ ತೆಗೆದುಕೊಳ್ಳಬೇಕು.
- ಯಾವ ಗಿಡ? ಪ್ರದೇಶಾನುಸಾರವಾಗಿ ಹೆಚ್ಚಾಗಿ ಹಣ್ಣು-ಹಂಪಲು, ನೆರಳು ಹಾಗೂ ಜೀವ ವೈವಿಧ್ಯಕ್ಕೆ ಪೂರಕವಾಗಬಲ್ಲ ಮರಗಳನ್ನೇ ಆಯ್ಕೆ ಮಾಡಬೇಕು. ಅಕೇಶಿಯಾ, ನೀಲಗಿರಿ (ಯುಕಲಿಪ್ಟಸ್) ಮರಗಳನ್ನು ನೆಡಬಾರದು ಎಂಬುದು ಪರಿಸರ ತಜ್ಞರ ಸಲಹೆ.
- ಯಾರೆಲ್ಲ ಭಾಗಿ?- ಎಲ್ಲರೂ. ಕೃಷಿಕ, ಸಾಫ್ಟ್ ವೇರ್ ತಂತ್ರಜ್ಞ, ವಿದ್ಯಾರ್ಥಿ, ಅಧ್ಯಾಪಕ, ವ್ಯಾಪಾರಿ ಎಲ್ಲರೂ
- ಸೀಡ್ ಬಾಲ್ ತಯಾರಿ ಪ್ರಶಿಕ್ಷಣ – ಬೀಜದ ಉಂಡೆ ಅಥವಾ ಸೀಡ್ ಬಾಲ್ ತಯಾರಿ ಒಂದು ಉತ್ತಮವಾದ ವಿಧಾನ. ಈ ಕುರಿತ ಮಾಹಿತಿಗಾಗಿ ಸಂಪರ್ಕಿಸಿ: ನೀರಜ್ ಕಾಮತ (ಉತ್ತಿಷ್ಠ ಭಾರತ) 9964142207
- ಸಾರ್ವಜನಿಕರ ಸಹಭಾಗಿತ್ವ ಹೇಗೆ? –
– ಅಭಿಯಾನಕ್ಕೆ ಗಿಡಗಳನ್ನು ಒದಗಿಸುವುದು
– ನೆಟ್ಟ ಗಿಡಕ್ಕೆ 3 ವರ್ಷ ಸೂಕ್ತ ಸಂರಕ್ಷಣೆ – ನೀರು ಪೂರೈಕೆ, ಗೊಬ್ಬರ ಬೇಕಿದ್ದಲ್ಲಿ.
– ಟ್ರೀ ಗಾರ್ಡ್ (ಮರ ಸಂರಕ್ಷಕ ಕವಚಗಳು) ಒದಗಿಸುವುದು
– ಗಿಡ ನೆಡಲು ಸೂಕ್ತ ಜಾಗ ಒದಗಿಸುವುದು.
– ಅಭಿಯಾನದ ಕುರಿತು ವ್ಯಾಟ್ಸಾಪ್, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದು. ಅಭಿಯಾನಕ್ಕೆ ಇನ್ನೂ ಹತ್ತಾರು ಕೈಗಳನ್ನು ಜೋಡಿಸುವುದು.
ಸಸಿಗಳನ್ನು ನೆಡುವುದರ ಜೊತೆ, ಬೀಜಗಳನ್ನು ಬಿತ್ತನೆ ಮಾಡುವುದು ಹಾಗೂ ಖಾಲಿ ಜಾಗಗಳಲ್ಲಿ ಬೀಜದ ಉಂಡೆಗಳನ್ನು ಬಿಸಾಡುವ ಮೂಲಕ ಹಸಿರು ಹೆಚ್ಚಿಸುವ ಪ್ರಯತ್ನ ಮಾಡಲಿದ್ದಾರೆ. ಸ್ವಯಂಸೇವಕರು 1 ಕೋಟಿ ಗಿಡಗಳನ್ನು ನೆಡುವುದರ ಜೊತೆಗೆ 3 ವರ್ಷ ಅವುಗಳ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘ, ಸಂಸ್ಥೆಗಳು ಪಾಲ್ಗೊಳ್ಳುವಂತೆ ಸಮರ್ಥ ಭಾರತ ಮನವಿ ಮಾಡಿಕೊಂಡಿದೆ.
ಹೆಚ್ಚಿನ ಮಾಹಿತಿಗೆ ಹರೀಶ್- 99800 00993, ಕೃಷ್ಣ ಗೌಡ – 9591810302 ರಾಜೇಶ್ ಪದ್ಮಾರ್ – 9880621824 ಅವರನ್ನು ಸಂಪರ್ಕ ಮಾಡಬಹುದು.
ಹೆಚ್ಚಿನ ಮಾಹಿತಿಗೆ www.samarthabharata.org ಸಂಪರ್ಕ ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.