ಇಂದೋರ್: 500 ಮತ್ತು 1000 ರೂ. ನೋಟುಗಳ ರದ್ದತಿ ಹಿನ್ನಲೆಯಲ್ಲಿ ಅಂಧ ಭಿಕ್ಷುಕನೊಬ್ಬ ಆಂತಕಕ್ಕೊಳಗಾಗಿದ್ದು, ತಾನು ಭಿಕ್ಷೆ ಬೇಡಿ ಕೂಡಿಟ್ಟ ಹಣವನ್ನು ಏನು ಮಾಡಬೇಕು ಎಂದರಿಯದೆ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿದಾಗ ಪಂಚಾಯಿತಿ ಅಧಿಕಾರಿಗಳು ನೆರವಿನ ಆಶ್ವಾಸನೆಯನ್ನು ನೀಡಿದ್ದಾರೆ.
20 ವರ್ಷದಿಂದ ಭಿಕ್ಷೆಯನ್ನು ಬೇಡುತ್ತಿದ್ದ ಅಂಧ ಸೀತಾರಾಮ ಸುಮಾರು 98,000 ಸಾವಿರ ರೂಪಾಯಿಯನ್ನು ಕೂಡಿಟ್ಟಿದ್ದು ಅದರಲ್ಲಿ 500 ಮತ್ತು 1000 ರೂ. ನೋಟುಗಳಿರುವುದರಿಂದ ಸಮಸ್ಯೆ ಎದುರಾಗಿದೆ.
ಎರಡು ದಶಕಗಳಿಂದ ತನ್ನ ಹೆಂಡತಿಯ ಜೊತೆ ಸಿಯಾ ಗ್ರಾಮದಲ್ಲಿ ವಾಸವಿರುವ ಸೀತಾರಾಮ, ಅಂಧನಾಗಿದ್ದರಿಂದ ಯಾವುದೇ ಕೆಲಸ ಸಿಗದ ಕಾರಣ ಭಿಕ್ಷೆ ಬೇಡಲು ಆರಂಭಿಸಿದ್ದ. 20 ವರ್ಷಗಳಿಂದ ಸೀತಾರಾಮ ಗಳಿಸಿದ ಹಣ ಸುಮಾರು 98,000 ರೂ. ಗಳಿಸಿದ ಹಣವನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಕಾರಣ, ಸ್ವಲ್ಪ ಸ್ವಲ್ಪ ಹಣವನ್ನು ತನ್ನ ಪರಿಚಿತರಿಗೆ ನೀಡಿದ್ದನು. ಆದರೆ 500 ರೂ. 1000 ರೂ. ನೋಟುಗಳ ರದ್ಧತಿ ನಂತರ ಅವರೆಲ್ಲರೂ ಸೀತಾರಾಮನ ಹಣವನ್ನು ವಾಪಾಸು ನೀಡಿ, ಇದು ಇನ್ನು ಉಪಯೋಗವಿಲ್ಲ ಎಂದು ಹೇಳಿದ್ದಾರೆ.
ನೋಟು ರದ್ಧತಿ ಜಾರಿಯಿಂದ ಆತಂಕಕ್ಕೊಳಗಾದ ಸೀತಾರಾಮ ಗ್ರಾಮಪಂಚಾಯಿತಿಗೆ ಹೋಗಿ ಅಲ್ಲಿ ತನ್ನ ಕಳವಳವನ್ನು ಅಧಿಕಾರಿಗಳ ಎದುರು ವ್ಯಕ್ತಪಡಿಸಿದ್ದಾನೆ. ‘ಸಾಹೇಬ್, ಇದು ನನ್ನ ಜೀವನದ ಉಳಿತಾಯ. ಈಗ ಜನರು ಇದನ್ನು ಚಿಂದಿ ವಸ್ತು ಎಂದು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ಇದನ್ನು ಉಳಿಸಿಕೊಡಿ’ ಎಂದು ಅಂಗಾಲಾಚಿದ್ದಾನೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಇಜಾಜ್ ಪಟೇಲ್ ಅವರು ಸೀತಾರಾಮನನ್ನು ಸಂತೈಸಿ, ಹೊಸ ಬ್ಯಾಂಕ್ ಖಾತೆಯೊಂದನ್ನು ತೆರೆದು ಹಣವನ್ನು ಠೇವಣಿ ಮಾಡಿಸುತ್ತೇವೆ ಹಾಗೂ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಹೀಗೆ ಅದೆಷ್ಟೋ ಜನ ಬಡವರು ಯಾವ್ಯಾವುದೋ ಕಾರಣದಿಂದ ಬಹಳಷ್ಟು ಹಣವನ್ನು ಕೂಡಿಟ್ಟಿರುತ್ತಾರೆ. ನೋಟು ರದ್ಧತಿ ಜಾರಿ ವಿವರವನ್ನು ಕೇಳಿ ಒಮ್ಮೆಲೇ ಆತಂಕಕ್ಕೊಳಗಾಗುವುದು ಸಹಜ. ಆದರೆ ಅವರ ಸುತ್ತಮುತ್ತಲಿನವರು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದರ ಮೂಲಕ ಅವರಿಗೂ ಒಂದು ದಿಕ್ಕು ತೋರಿಸುವುದು ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.