ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಸ್ವಚ್ಛ ಭಾರತ್ ಮಿಷನ್-ನಗರ (SBM-U) 2.0 ಮತ್ತು ಅಟಲ್ ಮಿಷನ್ ಫಾರ್ ರೆಜುವೆನೇಷನ್ ಆಂಡ್ ಅರ್ಬನ್ ಟ್ರಾನ್ಸ್ಫಾರ್ಮೇಶನ್ (AMRUT) 2.0 ಗೆ ಚಾಲನೆ ನೀಡಿದರು.
ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಆಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಶನ್ 2.0 ಅನ್ನು ಎಲ್ಲಾ ನಗರಗಳನ್ನು ಕಸ ಮುಕ್ತ ಮತ್ತು ಜಲ ಸುರಕ್ಷಿತ ಮಾಡುವ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಈ ವೇಳೆ ಮಾತನಾಡಿದ ಮೋದಿ, ಸ್ವಚ್ ಭಾರತ್ ಮಿಷನ್ 2.0 ನ ಗುರಿ ನಗರಗಳನ್ನು ಕಸ ಮುಕ್ತವಾಗಿಸುವುದು. ಈ 2 ನೇ ಹಂತದಲ್ಲಿ ನಾವು ಕೊಳಚೆ ಮತ್ತು ಸುರಕ್ಷತೆ ನಿರ್ವಹಣೆಯನ್ನು ಗುರಿಯಾಗಿರಿಸಿಕೊಳ್ಳುತ್ತೇವೆ, ನಗರಗಳನ್ನು ಜಲ ಸುರಕ್ಷಿತವಾಗಿಸುತ್ತೇವೆ ಮತ್ತು ಕೊಳಕು ಚರಂಡಿ ನೀರು ನದಿಗಳಲ್ಲಿ ವಿಲೀನವಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು
“ಇದು ಸ್ವಚ್ಛ ಭಾರತ ಮಿಷನ್-ಅರ್ಬನ್ 2.0 ಮತ್ತು ಅಮೃತ್ 2.0 ನ ಎರಡನೇ ಹಂತವಾಗಿದೆ ಮತ್ತು ಈ ಎರಡೂ ಕಾರ್ಯಗಳು ಬಿಆರ್ ಅಂಬೇಡ್ಕರ್ ಅವರ ಕನಸುಗಳನ್ನು ಈಡೇರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದರು.
“ಇಂದಿನ ಕಾರ್ಯಕ್ರಮವನ್ನು ಬಿಆರ್ ಅಂಬೇಡ್ಕರ್ ಕೇಂದ್ರದಲ್ಲಿ ಆಯೋಜಿಸಿರುವುದು ನಮ್ಮ ಅದೃಷ್ಟ. ನಗರ ಅಭಿವೃದ್ಧಿಯು ಸಮಾನತೆ ಸಾಧಿಸಲು ಪ್ರಮುಖವಾದುದು ಎಂದು ಅಂಬೇಡ್ಕರ್ ನಂಬಿದ್ದರು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ತಿಂಡಿಗಳ ರಾಪರ್ಗಳನ್ನು ಈಗ ರಸ್ತೆಗೆಎಸೆಯಲಾಗುತ್ತಿಲ್ಲ, ಅವುಗಳನ್ನು ಕಿಸೆಯೊಳಗೆ ಹಾಕಿಕೊಳ್ಳುತ್ತಿದ್ದಾರೆ. ಮಕ್ಕಳು ಹಿರಿಯರಿಗೆ ಸುತ್ತಲೂ ಕಸ ಹಾಕದಂತೆ ಎಚ್ಚರಿಸುತ್ತಾರೆ. ಯುವಕರು ಸ್ವಚ್ಛತಾ ಉಪಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಕೆಲವರು ತ್ಯಾಜ್ಯದಿಂದ ಸಂಪತ್ತನ್ನು ಗಳಿಸುತ್ತಿದ್ದಾರೆ, ಕೆಲವರು ಜಾಗೃತಿ ಮೂಡಿಸುತ್ತಿದ್ದಾರೆ. ಒಣ ಮತ್ತು ಹಸಿಯಾದ ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತಿದೆ, ಈ ಬಗ್ಗೆ ಜಾಗೃತಿ ಮೂಡಿದೆ “ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶವು ಪ್ರತಿದಿನ ಸುಮಾರು 1 ಲಕ್ಷ ಟನ್ಗಳಷ್ಟು ತ್ಯಾಜ್ಯಗಳನ್ನು ಸಂಸ್ಕರಿಸುತ್ತಿದೆ. ಅಲ್ಲದೇ ಪ್ರಸ್ತುತ ಸುಮಾರು 70% ದೈನಂದಿನ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ ಎಂದು ಮೋದಿ ಹೆಳಿದರು ಮತ್ತು ಈ ಸಂಖ್ಯೆಯನ್ನು 100 ಪ್ರತಿಶತಕ್ಕೆ ಕೊಂಡೊಯ್ಯುವ ಅಗತ್ಯವನ್ನು ಒತ್ತಿ ಹೇಳಿದರು.
ಸ್ವಚ್ಛ ಭಾರತ ಮತ್ತು ಅಮೃತ್ ಮಿಷನ್ಗಳು ಕಳೆದ 6-7 ವರ್ಷಗಳಲ್ಲಿ ಜನರ ಜೀವನದಲ್ಲಿ ಬದಲಾವಣೆಗಳನ್ನು ತಂದಿವೆ. ಈ ಎರಡು ಕಾರ್ಯಗಳು ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರದ ನಗರ ಭೂದೃಶ್ಯವನ್ನು ಸುಧಾರಿಸಿದೆ ಎಂದಿದ್ದಾರೆ.
ʻಸ್ವಚ್ಛ ಭಾರತ ಯೋಜನೆ-ನಗರ 2.0ʼ (ಎಸ್ಬಿಎಂ-ಯು 2.0)
ಈ ಯೋಜನೆಯು ಎಲ್ಲಾ ನಗರಗಳನ್ನು ‘ಕಸ ಮುಕ್ತ’ಗೊಳಿಸುವ ಮತ್ತು ʻಅಮೃತ್ʼ ವ್ಯಾಪ್ತಿಗೆ ಒಳಪಟ್ಟ ನಗರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ನಗರಗಳಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಯ ಉದ್ದೇಶವನ್ನು ಹೊಂದಿದೆ. ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತವಾಗುವಂತೆ (ಒಡಿಎಫ್+) ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವವ ಸ್ಥಳೀಯ ಸಂಸ್ಥೆಗಳು ಒಡಿಎಫ್++ ಆಗಿರುವಂತೆ ಖಾತರಿಪಡಿಸುತ್ತದೆ. ಆ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯದ ಗುರಿಯನ್ನು ಸಾಧಿಸುತ್ತದೆ. ಮೂಲದಲ್ಲೇ ಘನ ತ್ಯಾಜ್ಯದ ವಿಂಗಡಣೆ, ʻ3ಆರ್ʼ (ಕಡಿಮೆಮಾಡುವುದು, ಮರುಬಳಕೆ, ಸಂಸ್ಕರಣೆ), ಪುರಸಭೆಯ ಎಲ್ಲಾ ರೀತಿಯ ಘನ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆಗಾಗಿ ಕಸ ಸುರಿಯುವ ಸ್ಥಳಗಳಲ್ಲಿ ಮಾಲಿನ್ಯಕಾರಕಗಳ ನಿವಾರಣೆಯತ್ತ ಈ ಯೋಜನೆಯು ಗಮನ ಹರಿಸಲಿದೆ. ಈ ಯೋಜನೆಯ ವೆಚ್ಚ ಸುಮಾರು 1.41 ಲಕ್ಷ ಕೋಟಿ ರೂಪಾಯಿಗಳು.
ʻಅಮೃತ್ ಬಗ್ಗೆ 2.0ʼ
ʻಅಮೃತ್ 2.0ʼ ಯೋಜನೆಯು ಸುಮಾರು 4,700 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ. ಸುಮಾರು 2.68 ಕೋಟಿ ನೀರಿನ ಕೊಳಾಯಿ ಸಂಪರ್ಕಗಳನ್ನು ಒದಗಿಸುವ ಮೂಲಕ ಇದನ್ನು ಸಾಧಿಸಲು ಉದ್ದೇಶಿಸಲಾಗಿದೆ. ಜೊತೆಗೆ 500 ಅಮೃತ್ ನಗರಗಳಲ್ಲಿ 2.64 ಕೋಟಿ ಒಳಚರಂಡಿ/ ಶೌಚಾಲಯ ತ್ಯಾಜ್ಯ (ಸೆಪ್ಟೇಜ್) ಸಂಪರ್ಕಗಳನ್ನು ಒದಗಿಸುವ ಮೂಲಕ 100% ಒಳಚರಂಡಿ ಮತ್ತು ಶೌಚಾಲಯ ತ್ಯಾಜ್ಯ ವಿಲೇವಾರಿ (ಸೆಪ್ಟೇಜ್) ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಿಂದ ನಗರ ಪ್ರದೇಶಗಳಲ್ಲಿ10.5 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯಲಿದ್ದಾರೆ. ʻಅಮೃತ್ 2.0ʼ ಯೋಜನೆಯು ಆವರ್ತನ ಆರ್ಥಿಕತೆಯ ತತ್ವಗಳನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಮೇಲ್ಮೈ ಮತ್ತು ಅಂತರ್ಜಲ ಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನವನ್ನು ಉತ್ತೇಜಿಸುತ್ತದೆ. ಇತ್ತೀಚಿನ ಜಾಗತಿಕ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನೀರಿನ ನರ್ವಹಣೆಯಲ್ಲಿ ದತ್ತಾಂಶ ಆಧರಿತ ಆಡಳಿತ ಹಾಗೂ ʻತಂತ್ರಜ್ಞಾನ ಉಪ-ಯೋಜನೆʼಯನ್ನು ʻಅಮೃತ್ 2.0’ ಉತ್ತೇಜಿಸುತ್ತದೆ. ನಗರಗಳ ನಡುವೆ ಪ್ರಗತಿಪರ ಸ್ಪರ್ಧೆಯನ್ನು ಉತ್ತೇಜಿಸಲು ‘ಪೇ ಜಲ್ ಸುರ್ವೇಕ್ಷಣ್’ ಅನ್ನು ನಡೆಸಲಾಗುತ್ತದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 2.87 ಲಕ್ಷ ಕೋಟಿ ರೂಪಾಯಿಗಳು.
ʻಎಸ್ಬಿಎಂ-ಯುʼ ಮತ್ತು ʻಅಮೃತ್ʼ ಪ್ರಭಾವ
ಕಳೆದ ಏಳು ವರ್ಷಗಳಲ್ಲಿ ನಗರ ಭೂದೃಶ್ಯವನ್ನು ಸುಧಾರಿಸಲು ʻಎಸ್ಬಿಎಂ-ಯುʼ ಮತ್ತು ʻಅಮೃತ್ʼ ಗಮನಾರ್ಹ ಕೊಡುಗೆ ನೀಡಿವೆ. ಈ ಎರಡು ಪ್ರಮುಖ ಯೋಜನೆಗಳು ನಾಗರಿಕರಿಗೆ ನೀರು ಸರಬರಾಜು ಮತ್ತು ನೈರ್ಮಲ್ಯದ ಮೂಲಸೌಕರ್ಯ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೆಚ್ಚಿಸಿವೆ. ಸ್ವಚ್ಛತೆಯು ಇಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚಮುಕ್ತ (ಒಡಿಎಫ್) ಎಂದು ಘೋಷಿಸಲಾಗಿದೆ ಮತ್ತು 70% ಘನ ತ್ಯಾಜ್ಯವನ್ನು ಈಗ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ. 1.1 ಕೋಟಿ ಗೃಹ ನೀರಿನ ನಲ್ಲಿ ಸಂಪರ್ಕಗಳು ಮತ್ತು 85 ಲಕ್ಷ ಒಳಚರಂಡಿ ಸಂಪರ್ಕಗಳನ್ನು ಸೇರಿಸುವ ಮೂಲಕ ನೀರಿನ ಭದ್ರತೆಯನ್ನು ʻಅಮೃತ್ʼ ಯೋಜನೆ ಖಾತರಿಪಡಿಸುತ್ತದೆ. ಇದರಿಂದಾಗಿ 4 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.