ನವದೆಹಲಿ: ಜನರ ಆಹಾರದಲ್ಲಿ ಸಿರಿಧಾನ್ಯ, ಇತರ ಪೌಷ್ಟಿಕ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು, ಮೀನು, ಡೈರಿ ಮತ್ತು ಸಾವಯವ ಉತ್ಪನ್ನಗಳು ಸೇರಿದಂತೆ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮರು ಪರಿಚಯಿಸಲು ಸರ್ಕಾರ ಒತ್ತು ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅವುಗಳ ಉತ್ಪಾದನೆಯು ಅಸಾಧಾರಣ ಮಟ್ಟದಲ್ಲಿ ಇದೆ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳಿಗೆ ಭಾರತವು ಕೇಂದ್ರ ತಾಣವಾಗುತ್ತಿದೆ ಎಂದು ಅವರು ಹೇಳಿದರು.
ಜಿ -20 ಕೃಷಿ ಮಂತ್ರಿಗಳ ಸಭೆಯ ಎರಡನೇ ದಿನದ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಈ ಅಧಿವೇಶನದ ಥೀಮ್ “ಶೂನ್ಯ ಹಸಿವಿನ ಗುರಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡುವುದು: ಕೃಷಿ ಸಚಿವಾಲಯಗಳು ಜಾರಿಗೊಳಿಸಿದ ಯಶಸ್ವಿ ಯೋಜನೆಗಳು” ಎಂಬುದಾಗಿದೆ.
ವರ್ಚುವಲ್ ಭಾಷಣದಲ್ಲಿ ಮಾತನಾಡಿದ ತೋಮರ್, ಪೌಷ್ಟಿಕಾಂಶಯುಕ್ತ-ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯು ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಿಕೊಂಡಿದೆ ಮತ್ತು 2023 ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ ಎಂದು ಹೇಳಿದ್ದಾರೆ.
ಪೌಷ್ಟಿಕಾಂಶ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಸಿರಿಧಾನ್ಯ ವರ್ಷದ ಆಚರಣೆಯನ್ನು ಬೆಂಬಲಿಸುವಂತೆ ಅವರು ರಾಷ್ಟ್ರಗಳಿಗೆ ಮನವಿ ಮಾಡಿದರು.
ಸ್ವಾತಂತ್ರ್ಯದ ನಂತರ ಭಾರತದಲ್ಲಿ ಕೃಷಿ ಕ್ಷೇತ್ರವು ಉತ್ತಮ ಯಶಸ್ಸನ್ನು ಸಾಧಿಸಿದೆ ಎಂದು ತೋಮರ್ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಭಾರತೀಯ ಕೃಷಿ ಕ್ಷೇತ್ರವು ಯಾವುದೇ ಪರಿಣಾಮ ಎದುರಿಸಲಿಲ್ಲ ಎಂದಿದ್ದಾರೆ.
ಕೋವಿಡ್ ಸಮಯದಲ್ಲಿ ಕೃಷಿ-ಮಾರುಕಟ್ಟೆ ಪೂರೈಕೆ ಸರಪಳಿಯೊಂದಿಗೆ ಕೃಷಿ ಮಾರುಕಟ್ಟೆಯನ್ನು ಕ್ರಿಯಾತ್ಮಕವಾಗಿರಿಸಲು ಸರ್ಕಾರದ ವಿವಿಧ ಉಪಕ್ರಮಗಳು ಕೃಷಿ ಕ್ಷೇತ್ರವನ್ನು ಉತ್ತಮ ಕಾರ್ಯಕ್ಷಮತೆಗೆ ಸಹಾಯ ಮಾಡಿರುವುದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದರು.
2020-2021 ರ ಅವಧಿಯಲ್ಲಿ, ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳದೊಂದಿಗೆ, ರಫ್ತುಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.