News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಕಾಶದಲ್ಲಿ ಸದಾ ಮಿನುಗುತ್ತಿರುವ ಆಕಾಶದೀಪ ನಮ್ಮ ಸಂದೀಪ್

ಕೋಟ್ಯಾಂತರ ಭಾರತೀಯರ ಕನಸನ್ನು ಪೋಷಿಸುತ್ತಿರುವ ಕನಸಿನ ನಗರಿ ಮುಂಬಯಿ ಮೇಲೆ ಉಗ್ರರ ದಾಳಿ ನಡೆದಾಗ ಅಪ್ರತಿಮ ಶೌರ್ಯ ಮರೆದು ಜನರ ರಕ್ಷಣೆಗೆ ಧಾವಿಸಿ ಪ್ರಾಣತ್ಯಾಗ ಮಾಡಿದವರು ನಮ್ಮ ಹೆಮ್ಮೆಯ ಯೋಧ ಸಂದೀಪ್ ಉನ್ನಿಕೃಷ್ಣನ್. ಆ ವೀರ ಯೋಧನ ಜನನವಾಗಿ ಇಂದಿಗೆ 41 ವರ್ಷಗಳು.

1977ರ ಮಾ.15ರಂದು ಕೇರಳದ ಕೋಝಿಕೋಡ್‌ನಲ್ಲಿ ಜನಿಸಿದ ಸಂದೀಪ್ ದೇಶಕ್ಕಾಗಿ ಜೀವತೆತ್ತು ಇಂದಿಗೆ 10 ವರ್ಷ ಕಳೆದಿವೆ. ಆದರೆ ಅವರ ನೆನಪು ಮಾತ್ರ ನಿತ್ಯ ನಿರಂತರ. ಯುವಜನತೆಗೆ ಅವರು ಪ್ರೇರಣೆ, ತ್ಯಾಗದ ಸಂಕೇತ. ಒಬ್ಬನೇ ಒಬ್ಬ ಮಗನನ್ನು  ಕಳೆದುಕೊಂಡರೂ ಇಸ್ರೋದ ನಿವೃತ್ತ ಅಧಿಕಾರಿಯಾಗಿರುವ ಸಂದೀಪ್ ತಂದೆ ಉನ್ನಿಕೃಷ್ಣನ್ , ತಾಯಿ ಧನಲಕ್ಷ್ಮೀ ವಿಚಲಿತರಾಗಿಲ್ಲ. ಮಗನನ್ನು ಕಳೆದುಕೊಂಡ ದುಃಖಕ್ಕಿಂತಲೂ ದೇಶಕ್ಕಾಗಿ ವೀರಪುತ್ರನನ್ನು ನೀಡಿದ ಹೆಮ್ಮೆ ಅವರಿಗಿದೆ.

1995ರಲ್ಲಿ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡಮಿಯನ್ನು ಸೇರಿದ್ದ ಸಂದೀಪ್, 1999ರ ಜುಲೈ 12ರಂದು ಬಿಹಾರ್ ರೆಜಿಮೆಂಟ್‌ನ 17ನೇ ಬೆಟಾಲಿಯನ್‌ನ ಲೆಫ್ಟಿನೆಂಟ್ ಆಗಿ ನಿಯುಕ್ತರಾದರು. ಜಮ್ಮು ಕಾಶ್ಮೀರ, ರಾಜಸ್ಥಾನ ಮುಂತಾದೆಡೆ ಸೇವೆ ಸಲ್ಲಿಸಿದ ಬಳಿಕ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್‌ಎಸ್‌ಜಿ)ಗೆ ಸೇರ್ಪಡೆಯಾದರು. ಒಂದು ವರ್ಷ ತರಬೇತಿ ಪಡೆದ ಬಳಿಕ 2007ರಲ್ಲಿ ಸ್ಪೆಷಲ್ ಆಕ್ಷನ್ ಗ್ರೂಪ್(ಎಸ್‌ಎಜಿ)ಗೆ ನಿಯುಕ್ತರಾದರು. ಅಲ್ಲಿ ಎನ್‌ಎಸ್‌ಜಿಯ ಹಲವಾರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡರು. ಅತ್ಯಂತ ಕಠಿಣ ’ಘಾತಕ್ ಕೋರ್ಸು’ನಲ್ಲಿ ಟಾಪರ್ ಆಗಿ ಹೊರಹೊಮ್ಮಿದರು. ಬಳಿಕ ಇವರು ಎನ್‌ಎಸ್‌ಜಿ ಕಮಾಂಡೋ ಸರ್ವಿಸ್‌ನ್ನು ಆಯ್ಕೆ ಮಾಡಿಕೊಂಡರು.

2008ರ ನವೆಂಬರ್ 26ರಂದು ತಾಜ್ ಹೊಟೇಲ್ ಮೇಲೆ ಉಗ್ರರ ದಾಳಿಯಾದಾಗ ತನ್ನ ಸ್ಪೆಷಲ್ ಆಕ್ಷನ್ ಗ್ರೂಪ್‌ನ 51 ಯೋಧರ ತಂಡದೊಂದಿಗೆ ಸಂದೀಪ್ ಕಾರ್ಯಾಚರಣೆಗಿಳಿದರು. ಜನರ ಜೀವರಕ್ಷಣೆಗಾಗಿ ತನ್ನ ಪ್ರಾಣದ ಹಂಗು ತೊರೆದು ಸೆಣಸಾಡಿದರು. ಅಂತಿಮವಾಗಿ ಉಗ್ರನ ಗುಂಡು ಅವರ ದೇಹವನ್ನು ಸೀಳಿತು. ಸಂದೀಪ್ ಪ್ರಾಣ ಭಾರತಾಂಬೆಗೆ ಅರ್ಪಣೆಯಾಯಿತು.

ಆ ವೀರ ಪುತ್ರನ ಜನ್ಮದಿನವಾದ ಇಂದು ಆತನನ್ನು ಸ್ಮರಿಸೋಣ, ಆತನ ತ್ಯಾಗ, ಅಪ್ರತಿಮ ಸಾಹಸದ ಪರಿಚಯವನ್ನು ಮುಂದಿನ ಪೀಳಿಗೆಗೂ ಮಾಡಿಸೋಣ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top